Mysore
26
haze

Social Media

ಗುರುವಾರ, 26 ಫೆಬ್ರವರಿ 2026
Light
Dark

ಎಚ್.ಎಸ್‌ ವೆಂಕಟೇಶಮೂರ್ತಿ ಅವರ ಜೋಗುಳದ ಹಾಡುಗಳು ಇಂದಿಗೂ ಪ್ರಸ್ತುತ 

ಮಂಡ್ಯ : ಸುಗಮ ಸಂಗೀತ ಹಾಗೂ ಕಾವ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೋಗುಳದ ಹಾಡುಗಳು ಇಂದಿಗೂ ಪ್ರಸ್ತುತವಾಗಿದ್ದು, ಅವು ಅಭಿಮಾನಿಗಳ ಮನಸಲ್ಲಿ ಗುಣಗಾನ ಮಾಡುತ್ತಿವೆ ಎಂದು ಕವಿ ಬಿ.ಆರ್.ಲಕ್ಷಣ್‌ರಾವ್ ಶ್ಲಾಘಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಪು.ತಿ.ನರಸಿಂಹಚಾರ್ ಟ್ರಸ್ಟ್ ಮತ್ತು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಸಹಯೋಗದಲ್ಲಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಜಯಂತಿ ಅಂಗವಾಗಿ ನಡೆದ ನುಡಿನಮನ, ಗೀತ ಹಾಗೂ ನೃತ್ಯ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ‘ಜಾಲಿ’ ಕವಿಯಾದರೆ ಎಚ್‌ಎಸ್‌ವಿ ಅವರು ‘ಲಾಲಿ’ ಕವಿ ಆಗಿದ್ದರು. ಹೀಗೆ ನಮ್ಮ ಸಾಹಿತ್ಯ ಯಾನ ನಮ್ಮ ಸ್ನೇಹದ ಜೊತೆಯೇ ನಡೆದುಕೊಂಡು ಬರುತ್ತಿತ್ತು. ಎಚ್‌ಎಸ್‌ವಿ ಅವರ ಕಾವ್ಯ ವೈಶಿಷ್ಯವೇ ಚೆನ್ನಾಗಿತ್ತು. ನಾವುಗಳು ನವ್ಯ ಕಾವ್ಯದ ನೆಲಗಟ್ಟಿನಲ್ಲಿ ಬಂದವರು. ನಮಗೆ ಚಳವಳಿಯ ಬೆಂಬಲವಿತ್ತು. ಲಂಕೇಶ್, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಅಂತಹ ಗಾಡ್ ಫಾದರ್‌ಗಳು ಇದ್ದರು. ಎಚ್‌ಎಸ್‌ವಿ ಅವರು ಸಣ್ಣ ಗ್ರಾಮದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಬಹು ಎತ್ತರಕ್ಕೆ ಏರುವ ಮೂಲಕ ತಾನಾಗಿಯೇ ಕವಿಯಾದರು ಎಂದರು.

ಇಂಗ್ಲಿಷ್ ಸಾಹಿತ್ಯ ಓದಿಕೊಂಡು ಬಂದಿದ್ದೆವು, ಕನ್ನಡ ಕಾವ್ಯ ಪರಂಪರೆಯಾಗಿದ್ದನ್ನು ನಾವು ಲಕ್ಷ್ಯ ಮಾಡಲಿಲ್ಲ. ಆದರೆ, ಕನ್ನಡದ ಪರಂಪರೆಯ ಸಾರವನ್ನು ಹೀರಿಕೊಂಡು ಬಂದ ಎಚ್‌ಎಸ್‌ವಿ ಅವರು ಹೆಸರು ಮಾಡಿದರು. ಕುಮಾರವ್ಯಾಸರು ಇವರಿಗೆ ಅತ್ಯಂತ ಪ್ರಿಯವಾದ ವ್ಯಕ್ತಿಯಾಗಿದ್ದರು. ರೂಪಕವು ಎಚ್‌ಎಸ್‌ವಿ ಅವರ ಕವಿತೆಗಳಲ್ಲಿ ಕಿಕ್ಕಿರಿದು ಬರುತ್ತವೆ. ರೂಪಕ ಸಾಮ್ರಾಜ್ಯದ ಸಾಮ್ರಾಟರೆಂದರೆ ಅದು ಎಚ್‌ಎಸ್‌ವಿ ಎಂಬುವ ಬಿರುದನ್ನು ನಾನು ನೀಡಲು ಬಯಸುತ್ತೇನೆ ಎಂದು ಅಭಿಪ್ರಾಯಪಟ್ಟರು.

ಜಿ.ಎಸ್.ಶಿವರುದ್ರಪ್ಪ ಅವರು ನಾವು ಮತ್ತು ಎಚ್‌ಎಸ್‌ವಿ ಅವರು ಒಟ್ಟಿಗೆ ಇರುವುದನ್ನು ನೋಡಿ ಕನ್ನಡ ಸಾಹಿತ್ಯದ ಅಶ್ವಿನಿ ನಕ್ಷತ್ರಗಳು ಎಂಬುವ ಮಾತನ್ನು ಹೇಳಿ ನಮ್ಮ ಮನಸನ್ನು ಸಂತಸಗೊಳಿಸಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ. ಬಿ.ಜಯಪ್ರಕಾಶಗೌಡ ಮಾತನಾಡಿ, ಪುತಿನ ಟ್ರಸ್ಟ್ ಮತ್ತು ಕೆಎಸ್‌ನ ಟ್ರಸ್ಟ್ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿವೆ. ಮಂಡ್ಯ ಜಿಲ್ಲೆಯನ್ನ ಸಾಹಿತ್ಯ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ದವರನ್ನು ನೆನಪಿಸಿಕೊಳ್ಳುವುದು ಸರಿಯಿದೆ. ಎಚ್‌ಎಸ್‌ವಿ ಅವರ ನಾಟಕಗಳು ಕಣ್ಣಿಗೆ ಕಟ್ಟುತ್ತವೆ. ಕೆಎಸ್‌ನ ಅವರಿಗೂ ಕರ್ನಾಟಕ ಸಂಘಕ್ಕೂ ಅವಿನಾಭಾವ ಸಂಬಂಧವಿತ್ತು. ಇಷ್ಟು ಕಾಲ ಒಟ್ಟಿಗಿದ್ದು…ಎನ್ನುವ ಸಾಲುಗಳನ್ನು ನೋಡಿದರೆ ಅವರು ಅನುಭವಿಸಿದ ಜೀವನ, ನೆಲದ ಋಣ ಇವೆಲ್ಲವೂ ನೋಡಿದರೆ ಮತ್ತೆ ಮತ್ತೆ ಹುಟ್ಟಿಬಾ ಎನ್ನುವ ಎಚ್‌ಎಸ್‌ವಿ ಅವರ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ ಎಂದು ಶ್ಲಾಘಿಸಿದರು.

ಕೆಎಸ್‌ನ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೀತ ನಮನದಲ್ಲಿ ಯುವ ಹಾಗೂ ಹಿರಿಯ ಗಾಯಕರು ಹಾಡಿ ರಂಜಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ಡಾ.ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ, ಸಾಹಿತಿ ಎಚ್.ದುಂಡಿರಾಜ್, ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಸೌತ್ ಮಲ್ಟಿಪಲ್ ಕೌನ್ಸಿಲ್ ಕೆ.ಟಿ.ಹನುಮಂತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ, ಪ್ರತಿಭಾಂಜಲಿ ಡೇವಿಡ್ ಭಾಗವಹಿಸಿದ್ದರು.

Tags:
error: Content is protected !!