ಮಂಡ್ಯ: ಅರವಿಂದ್ ಕೇಜ್ರಿವಾಲ್ ದುಡುಕಿನ ನಿರ್ಧಾರದಿಂದಲೇ ಈ ಚುನಾವಣೆಯಲ್ಲಿ ಸೋಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲು ಕಂಡಿದ್ದು, ಬಿಜೆಪಿ ಭರ್ಜರಿ ಜಯಗಳಿಸಿದೆ. ಚುನಾವಣೆಯಲ್ಲಿ ಎಎಪಿ ಘಟಾನುಘಟಿ ನಾಯಕರನ್ನೇ ಬಿಜೆಪಿ ಅಭ್ಯರ್ಥಿಗಳು ಮಕಾಡೆ ಮಲಗುವಂತೆ ಮಾಡಿದ್ದಾರೆ.
ಈ ಫಲಿತಾಂಶದ ಕುರಿತು ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ದೆಹಲಿ ಚುನಾವಣೆ ಫಲಿತಾಂಶ ವಿಶೇಷ ಏನಲ್ಲ. ಇಂಡಿಯಾ ಒಕ್ಕೂಟದ ಜೊತೆ ಆಪ್ ಇರಬೇಕಿತ್ತು. ಆದರೆ ಅರವಿಂದ್ ಕೇಜ್ರಿವಾಲ್ ದುಡುಕಿನ ನಿರ್ಧಾರ ತೆಗೆದುಕೊಂಡರು. ಪರಿಣಾಮ ಈ ಚುನಾವಣೆಯಲ್ಲಿ ಎಎಪಿ ಹಾಗೂ ಕಾಂಗ್ರೆಸ್ಗೆ ಸೋಲಾಗಿದೆ. ಆಪ್ ಹಾಗೂ ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಈ ಚುನಾವಣೆಯಲ್ಲಿ ಹೆಚ್ಚು ಲಾಭ ಪಡೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.