Mysore
25
overcast clouds
Light
Dark

ಭಗವದ್ಗೀತೆ ಅಧ್ಯಯನದಿಂದ ಸಂಸ್ಕಾರ ಕಲಿಕೆ :ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ

ಚಾಮರಾಜನಗರ: ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಭಗವದ್ಗೀತೆ ಅಧ್ಯಯನ ಮಾಡಬೇಕು. ಅದು ಸಂಸ್ಕಾರ ಕಲಿಸುತ್ತದೆ ಎಂದು ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.

ನಗರದ ಬಸವರಾಜಸ್ವಾಮಿ ಅನುಭವ ಮಂಟಪದಲ್ಲಿ ಭಗವದ್ಗೀತಾ ಅಭಿಯಾನ, ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಶಿರಸಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾನು, ಸಮಾಜ, ದೇಶ ಏನಾಗಬೇಕು ಎಂಬ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ. ಶಾಲೆಗಳಲ್ಲಿ ಭಗವದ್ಗೀತಾ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಇಂತಹದ್ದನ್ನೇ ಓದಬೇಕು ಎಂದು ಒತ್ತಡ ಹಾಕಬಾರದು ಎಂದರು.
ವಿದ್ಯಾರ್ಥಿಗಳು ಏನಾದರೂ ಸಾಧನೆ ಮಾಡಬೇಕಾದರೆ ಇಂದ್ರಿಯಗಳನ್ನು ಸಂಯಮದಿoದ ಇಟ್ಟುಕೊಳ್ಳಬೇಕು. ಧ್ಯೇಯದ ಕಡೆ ಗಮನಹರಿಸಬೇಕು. ಹಕ್ಕುಗಳನ್ನು ಮಾತ್ರ ಪ್ರಶ್ನಿಸುವ ಮನುಷ್ಯನಿಗೆ ಕರ್ತವ್ಯಗಳನ್ನು ಸಹ ಪಾಲನೆ ಮಾಡುವ ಅರಿವಿರಬೇಕು ಎಂದು ತಿಳಿಸಿದರು.
ಮಲೆಯೂರಿನ ಕನಕಗಿರಿಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಗೀತ ಶ್ಲೋಕಗಳನ್ನು ಕಲಿಸಬೇಕು. ಇದರಿಂದ ಭವಿಷ್ಯದ ಜನತೆ ಜ್ಞಾನಸಂಪನ್ನರಾಗುತ್ತಾರೆ. ಸನ್ಮಾರ್ಗದಲ್ಲಿ ಹೋಗುವಂತಹ ಶ್ಲೋಕಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಪುರಸಭೆ ಮಾಜಿ ಅಧ್ಯಕ್ಷ ಶಿವನಂಜಯ್ಯ, ನಗರಸಭೆ ಸದಸ್ಯ ಸುರೇಶ್, ಶೃಂಗೇರಿಯ ಶಂಕರ ಮಠದ ಧರ್ಮಾಧಿಕಾರಿ ಶ್ರೀಧರ್‌ಪ್ರಸಾದ್, ಭಗವದ್ಗೀತಾ ಅಭಿಯಾನದ ಜಿಲ್ಲಾಧ್ಯಕ್ಷ ದುಗ್ಗಹಟ್ಟಿ ಮಲ್ಲಿಕಾರ್ಜುನಸ್ವಾಮಿ, ಗೌರವಾಧ್ಯಕ್ಷ ಜಿ.ಎಂ.ಹೆಗಡೆ, ಕಾರ್ಯಾಧ್ಯಕ್ಷ ಎಸ್.ಬಾಲಸುಬ್ರಹ್ಮಣ್ಯ, ಕಸಾಪ ತಾಲೂಕು ಅಧ್ಯಕ್ಷ ಸುರೇಶ್.ಎನ್.ಋಗ್ವೇದಿ, ಜೆಎಸ್‌ಎಸ್ ಸಂಸ್ಥೆಯ ಪಿಆರ್‌ಒ ಆರ್.ಎಂ.ಸ್ವಾಮಿ ಇತರರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ