ಮಡಿಕೇರಿ :ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳದಲ್ಲಿ ಕಾಡಾನೆ ದಾಂಧಲೆ ಎಗ್ಗಿಲ್ಲದೆ ಸಾಗಿದೆ. ನೆನ್ನೆ ರಾತ್ರಿ ಅಮೃತ ಹರೀಶ್ ರವರ ಮನೆಯ ತೋಟ ಹಾಗೂ ಅಂಗಳಕ್ಕೆ ದಾಳಿಯಿಟ್ಟಿರುವ ಕಾಡಾನೆ ಬಾಳೆ ಮತ್ತಿತರ ಗಿಡಗಳನ್ನು ದ್ವಂಸಗೊಳಿಸಿವೆ. ಪಿ.ಕೆ. ರಾಮನ್ ರವರ ಮನೆ ಮುಂಭಾಗದ ಕಂಪೌಂಡ್ ಅನ್ನು ಪುಡಿ ಮಾಡಿ ಮರವನ್ನು ಹಾನಿಗೊಳಿಸಿದೆ.
ದಾಸವಾಳ ಭಾಗದ ಅರಣ್ಯದಂಚಿನಲ್ಲಿ ಕಾಡಾನೆಗಳು ನಾಡಿನ ಒಳಗೆ ಬರದಂತೆ ಅರಣ್ಯ ಇಲಾಖೆ ಲಕ್ಷಾಂತರ ರೂ. ವ್ಯಯಿಸಿ ರೈಲ್ವೆ ಬ್ಯಾರಿ ಕೇಡ್ ಗಳನ್ನು ಅಳವಡಿಸಿದೆ. ಆದರೆ ಅವೈಜ್ಞಾನಿಕವಾಗಿ ಕಳಪೆಯಿಂದ ನಿರ್ಮಿಸಿರುವ ಬ್ಯಾರಿ ಕೇಡ್ ಗಳನ್ನು ನಾಜುಕಾಗಿ ದಾಟಿ ಬರುತ್ತಿರುವ ಕಾಡಾನೆಗಳು, ಫಸಲನ್ನು ತಿಂದು ಕೃಷಿಕರಿಗೆ ನಷ್ಟಪಡಿಸುತ್ತಾ ಅರಣ್ಯ ಇಲಾಖೆಗೆ ದಾಸವಾಳ ಮುಡಿಸುತ್ತಿವೆ. ಹೀಗಾಗಿ ಬ್ಯಾರಿ ಕೇಡ್ ಗಳು ಕಾಡಾನೆಗಳನ್ನು ತಡೆಯುವ ಬದಲು ಸ್ಥಳೀಯರಿಗೆ ಕೇವಲ “ಬರೀ ಕೇಡು” ಆಗಿ ಪರಿಣಮಿಸಿದೆ.
ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಯೊಂದಿಗೆ ತೋಡಿ ಕೊಂಡಿರುವ ಅಹವಾಲು ಅರಣ್ಯರೋಧನೆ ಆಗಿದೆ.





