ಕೊಡಗು: ಕೊಡಗಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಅನ್ನದಾತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಮೇ ತಿಂಗಳಿನಲ್ಲಿ ಆರಂಭಿಕ ಮಳೆ ಉತ್ತಮವಾಗಿ ಆದ ಪರಿಣಾಮ ರೈತರು ಗದ್ದೆ ಉಳುಮೆ ಕಾರ್ಯ ಪ್ರಾರಂಭಿಸಿದ್ದಾರೆ. ತಿಂಗಳ ಮುಂಚೆಯೇ ಗದ್ದೆಗೆ ಬೀಜ ಹಾಕಿದ ರೈತರಿಗೆ ಈ ಮಳೆಯಿಂದ ತುಂಬಾ ಅನುಕೂಲವಾಗಿದೆ.
ಇನ್ನು ಸುಂಟಿಕೊಪ್ಪ ಸೇರಿದಂತೆ ಕೊಡಗಿನ ಅನೇಕ ಪ್ರದೇಶಗಳಲ್ಲಿ ಈಗ ಗದ್ದೆ ಉಳುಮೆ ಕಾರ್ಯ ನಡೆಯುತ್ತಿದ್ದು, ಇನ್ನೊಂದು ವಾರದಲ್ಲಿ ಬಿತ್ತನೆ ಕಾರ್ಯವು ಸಹ ಮುಗಿದುಹೋಗಲಿದೆ.
ಕೊಡಗಿನಲ್ಲಿ ಒಂದೆಡೆ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆ ಈಗ ಗದ್ದೆ ನಾಟಿ ಕಾರ್ಯ ನಡೆಯುತ್ತಿದ್ದು, ಅನ್ನದಾತರು ಫುಲ್ ಖುಷ್ ಆಗಿದ್ದಾರೆ.
ಈ ಬಾರಿ ಕೊಡಗಿನಲ್ಲಿ ಉತ್ತಮ ಮುಂಗಾರು ಮಳೆ ಆಗಿರುವ ಪರಿಣಾಮ ಫಸಲು ಉತ್ತಮ ಇಳುವರಿ ಕೊಡಲಿದೆ ಎಂದು ರೈತರು ಅಂದಾಜು ಹಾಕಿಕೊಂಡಿದ್ದಾರೆ. ಭತ್ತದ ಜೊತೆಗೆ ಇನ್ನೂ ಅನೇಕ ಬೆಳೆಗಳನ್ನು ಬೆಳೆಯಲಿದ್ದು, ರೈತರಿಗೆ ಈ ಬಾರಿಯ ಮಳೆ ವರದಾನವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.