ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಗ್ರಾಮದ ಟೀ ಅಂಗಡಿ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಕಾಡಾನೆಯೊಂದ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ದಂಪತಿ ಪಾರಾಗಿದ್ದಾರೆ.
ಇಂದು ಬೆಳಿಗ್ಗೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ತೋಟದಿಂದ ಮರಿಯೊಂದಿಗೆ ರಸ್ತೆ ದಾಟಿದ ಕಾಡಾನೆಯು ಪಕ್ಕದಲ್ಲಿದ್ದ ಟೀ ಅಂಗಡಿ ಮೇಲೆ ದಾಳಿ ನಡೆಸಿದೆ. ಅಂಗಡಿಯಲ್ಲಿದ್ದ ತಿಂಡಿ ಪದಾರ್ಥಗಳನ್ನು ಹಾಗೂ ಸಾಮಾಗ್ರಿಗಳನ್ನು ಎಳೆದು ಬಿಸಾಡಿದೆ. ಅಂಗಡಿಯಲ್ಲಿದ್ದ ಜಬ್ಬಾರ್ ಹಾಗೂ ಅವರ ಪತ್ನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಾಡಾನೆ ದಾಳಿಯಿಂದ ಪಾರಾಗಲು ಯತ್ನಿಸಿದ ಮಾಲೀಕ ಜಬ್ಬಾರ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಕ್ಕದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದಲ್ಲಿದ್ದವರು ಕಿರುಚಾಡಿದಾಗ ಕಾಡಾನೆಯು ನಲ್ವತೇಕ್ರೆ ಮಾರ್ಗವಾಗಿ ದಾಟಿದೆ. ಇದೇ ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರಿನ ಮೇಲೆಯೂ ಸಹ ದಾಳಿ ಮಾಡಲಾಗಿದೆ ಎನ್ನಲಾಗಿದೆ.