Mysore
22
overcast clouds

Social Media

ಸೋಮವಾರ, 27 ಜುಲೈ 2026
Light
Dark

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು

ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ

ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ, ವ್ಯವಸಾಯಕ್ಕಿಲ್ಲ ಎಂಬ ಆದೇಶ ಮಾಡಿದ ಸರ್ಕಾರ ಜಲಾನಯನ ವ್ಯಾಪ್ತಿಯ ರೈತರಿಗೆ ಕೃಷಿ ಮಾಡದಂತೆ ನಿರ್ಬಂಧ ಹಾಕಿರುವುದರಿಂದ ಚುಂಚನಕಟ್ಟೆ ಹೋಬಳಿ ರೈತರು ಆತಂಕದಿಂದ ದಿನ ದೂಡುವಂತಾಗಿದೆ.

ಕಳೆದ ವರ್ಷ ಮೇ ತಿಂಗಳಾಂತ್ಯದಲ್ಲೇ ಮೈದುಂಬಿ ಹರಿದ ಕಾವೇರಿ ರೈತನ ಹೊಲ ಗದ್ದೆಗಳಲ್ಲಿ ಹರಿದು ಹಸಿವು ನೀಗಿಸಿದ್ದಳು. ಆದರೆ ಈ ಬಾರಿ ಶೇ.೭೦ರಷ್ಟು ಮಳೆ ಕೊರತೆಯಾಗಿ ಕೆರೆ-ಕಟ್ಟೆಗಳು, ಪಂಪ್‌ಸೆಟ್ಗಳು ಬತ್ತಿಹೋಗಿದ್ದು ನದಿಯಿಂದ ನೇರ ವಾಗಿ ಈ ಭಾಗದಲ್ಲಿ ಹರಿಯುವ ಮೊದಲ ಅಣೆಕಟ್ಟೆ ಕಟ್ಟೆಪುರ, ಚಾಮರಾಜ, ಮಿರ್ಲೆ ಶ್ರೇಣಿ ಮತ್ತು ರಾಮಸಮುದ್ರ ನಾಲೆಗಳಿಗೆ ಕೃಷಿಗೆ ನೀರು ಹರಿಸುವುದಿಲ್ಲ ಎಂಬ ಆದೇಶ ನೀಡಿದ ಇಲಾಖೆ ನಾಲಾ ವ್ಯಾಪ್ತಿಯ ರೈತರಲ್ಲಿ ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಚುಂಚನಕಟ್ಟೆ ಹೋಬಳಿಯಲ್ಲಿ ಕಳೆದ ವರ್ಷವೂ ಮಳೆ ಪ್ರಮಾಣ ಕಡಿಮೆಯಾಗಿ ಶೇ.೪೩ರಷ್ಟು ಕೊರತೆ ಅನುಭವಿಸಿತ್ತು. ಆದರೆ ಹೋಬಳಿಯಲ್ಲಿ ಹರಿಯುವ ನಾಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದ ರೈತರು ಈ ಬಾರಿ ಒಂದು ಹದವಾದ ಮಳೆಯನ್ನು ಕೂಡ ಕಾಣದೆ ಬಿತ್ತನೆ ಕಾರ್ಯವಿರಲಿ ತೆಂಗು, ಬಾಳೆ, ಅಡಕೆ, ಕಬ್ಬಿನಂತಹ ದೀರ್ಘ ಕಾಲೀನ ಬೆಳೆಗಳನ್ನು ಕಾಪಾಡುವುದೇ ಕಷ್ಟಕರವಾಗುತ್ತಿದೆ. ನದಿ ನೀರು ಕೇವಲ ನಗರಪ್ರದೇಶಗಳ ದಾಹ ತೀರಿಸಲು ಮಾತ್ರ ಬಳಕೆಯಾದರೆ ಆ ನೀರನ್ನೇ ನಂಬಿ ಬದುಕು ಕಟ್ಟಿಕೊಂಡ ರೈತರ ಪಾಡೇನಾಗಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲವಾಗಿದೆ.

ಸದ್ಯ ಹಾರಂಗಿ ಜಲಾಶಯ ತುಂಬಿದ್ದು ತಕ್ಷಣ ಕೆರೆಕಟ್ಟೆಗಳನ್ನು ತುಂಬಿಸುವ ಸಲುವಾಗಿಯಾದರೂ ನೀರು ಹರಿಸಬೇಕಿದೆ. ಈಬಾರಿ ಕಡ್ಡಾಯವಾಗಿ ಕೃಷಿಗೆ ನೀರಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಕನಿಷ್ಠ ಪಕ್ಷ ಕಟ್ಟು ನೀರಿನ ಪದ್ಧತಿಯಲ್ಲಿ ನೀರು ನೀಡಬೇಕು. ಜೊತೆಗೆ ನಾಲೆಗಳಿಗೆ ಕುಡಿಯುವ ಹಾಗೂ ಕೆರೆಕಟ್ಟೆಗಳನ್ನು ತುಂಬಿಸಲು ನೀರು ಬಿಡುವ ಮೊದಲು ಹೂಳು ತೆಗೆಸ ಬೇಕೆಂಬುದು ರೈತರ ಆಗ್ರಹವಾಗಿದೆ.

” ೨ ವರ್ಷಗಳಿಂದ ಚುಂಚನಕಟ್ಟೆ ಹೋಬಳಿ ಬರದಿಂದ ಕಂಗೆಟ್ಟಿದ್ದು, ಕನಿಷ್ಠ ಪಕ್ಷ ಈಭಾಗದ ರೈತರ ಗೋಳು ಕೇಳುವವರು ಇಲ್ಲವಾಗಿದೆ. ತಕ್ಷಣ ನಾಲೆಗಳಿಗೆ ನೀರು ಹರಿಸಿ ಅಂತರ್ಜಲವನ್ನು ವೃದ್ಧಿಸಬೇಕಿದೆ. ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಿದೆ.”

-ಡಿ.ಸಿ.ರಾಮೇಗೌಡ, ನಿರ್ದೇಶಕ, ಕೃಷಿಕ ಸಮಾಜ

” ಚುಂಚನಕಟ್ಟೆ ಹೋಬಳಿಯ ಬಹುತೇಕ ಕೆರೆಕಟ್ಟೆಗಳು ಬತ್ತಿಹೋಗಿದ್ದು ಹಾರಂಗಿ ಬಲದಂಡೆ ನಾಲೆಯಿಂದ ತಕ್ಷಣ ನೀರು ಹರಿಸಿದರೆ ಅನುಕೂಲವಾಗಲಿದೆ. ಇಲ್ಲವಾದರೆ ದನಕರುಗಳ ಸಮೇತ ಜನರು ವಲಸೆ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.”

-ಬಾಲಮನೋಹರ್, ಮಾಜಿ ಅಧ್ಯಕ್ಷ, ಕುಪ್ಪೆ ಗ್ರಾಪಂ

 

 

Tags:
error: Content is protected !!