ಸೋಮವಾರಪೇಟೆ : ರಸ್ತೆ ಕಾಮಗಾರಿಗೆ ವೆಟ್ಮಿಕ್ಸ್ ಸಾಗಿಸುತ್ತಿದ್ದ ಟಿಪ್ಪರ್ವೊಂದು ಎದುರಿನಿಂದ ಬಂದ ಪಿಕ್ಅಪ್ಗೆ ಜಾಗ ಕಲ್ಪಿಸಲು ಹೋಗಿ ರಸ್ತೆ ಬದಿಯ ಗುಂಡಿಗೆ ಇಳಿದ ಘಟನೆ ಪಟ್ಟಣ ಸಮೀಪದ ಕೂಡುರಸ್ತೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.
ಪಟ್ಟಣದ ಆಲೇಕಟ್ಟೆಯಿಂದ ತೋಳೂರುಶೆಟ್ಟಳ್ಳಿ-ಇನಕನಹಳ್ಳಿಯವರೆಗೆ ರಾಜ್ಯ ಹೆದ್ದಾರಿ ದುರಸ್ತಿ ಕಾಮಗಾರಿಗೆ ಜ.೧೧ರಂದು ಚಾಲನೆ ನೀಡಲಾಗಿದ್ದು, ಮಳೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ಕಾಮಗಾರಿ ಮುಂದುವರಿದಿದೆ. ಈ ಕಾಮಗಾರಿಗೆ ವೆಟ್ಮಿಕ್ಸ್ ಸಾಗಿಸುವ ಟಿಪ್ಪರ್ ವಾಹನವು, ರಸ್ತೆ ಬದಿಯಿರುವ ಗುಂಡಿಗೆ ಸಿಲುಕಿಕೊಂಡು ಕೆಲಕಾಲ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿತ್ತು.
ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚದ ಹಿನ್ನೆಲೆಯಲ್ಲಿ ಅವಘಡಗಳು ಸಂಭವಿಸುತ್ತಲೇ ಇವೆ. ರಸ್ತೆಯ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಜರುಗುತ್ತಿವೆ. ಒಂದು ವೇಳೆ ಟಿಪ್ಪರ್ ಮಗುಚಿಕೊಂಡಿದ್ದರೆ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಗೂ ಮುನ್ನ ಇರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಇಂನಿಜಿಯರ್ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.





