Mysore
21
broken clouds

Social Media

ಭಾನುವಾರ, 14 ಜೂನ್ 2026
Light
Dark

ಇ-ಶ್ರಮ್: ಜಿಲ್ಲೆಯಲ್ಲಿ 3,66,942 ಮಂದಿ ನೋಂದಣಿ

ನೋಂದಣಿಯಲ್ಲಿ ರಾಜ್ಯದಲ್ಲಿಯೇ ಮೂರನೇ ರ್ಯಾಂಕ್ ಪಡೆದ ಮೈಸೂರು ಜಿಲ್ಲೆ

 

* ಇ-ಶ್ರಮ್ ನೋಂದಣಿಯಲ್ಲಿ ಬೆಳಗಾವಿ ಜಿಲ್ಲೆ ಪ್ರಥಮ

* ಬಳ್ಳಾರಿ ಜಿಲ್ಲೆಗೆ ಎರಡನೇ ಸ್ಥಾನ

ಬಿ.ಎನ್.ಧನಂಜಯಗೌಡ

ಮೈಸೂರು: ಜಿಲ್ಲೆಯಲ್ಲಿ  3,66,942 ಅರ್ಹ ಅಸಂಘಟಿತ ಕಾರ್ಮಿಕರು ಸಮಗ್ರ ರಾಷ್ಟ್ರೀಯ ದತ್ತಾಂಶ (ಇ-ಶ್ರಮ್) ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಕಾರ್ಡ್ ಪಡೆದಿದ್ದು, ರಾಜ್ಯದಲ್ಲಿಯೇ ಜಿಲ್ಲೆ ಮೂರನೇ ರ್ಯಾಂಕ್ ಪಡೆದುಕೊಂಡಿದೆ.

ಅಸಂಘಟಿತ ವಲಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಇ-ಶ್ರಮ್ ಯೋಜನೆ ಜಾರಿಗೊಳಿಸಿದ್ದು, ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಜನರು ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು ಸಾಧ್ಯವಾಗುವಂತೆ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ನಡೆಯುತ್ತಿದೆ. 2021 ಆಗಸ್ಟ್ 24 ರಿಂದ 2023 ಫೆಬ್ರವರಿ ೧ರವರೆಗೂ ರಾಜ್ಯದಲ್ಲಿ 73,87,597 ಮಂದಿ ನೋಂದಣಿಯಾಗಿದ್ದು, ಈ ಪೈಕಿ ಜಿಲ್ಲೆಯಲ್ಲಿ 3,66,942 ನೋಂದಣಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿ ಇದೆ. ಮೊದಲ ಸ್ಥಾನದಲ್ಲಿ ಬೆಳಗಾವಿ(6,79,993) ಮತ್ತು ಎರಡನೇ ಸ್ಥಾನದಲ್ಲಿ ಬಳ್ಳಾರಿ (3,90,459) ಇವೆ.

ಯೋಜನೆ ವ್ಯಾಪ್ತಿಗೆ ಯಾರೆಲ್ಲ ಅರ್ಹರು?: ಇ-ಶ್ರಮ್ ಯೋಜನೆಯಡಿ ಕಟ್ಟಡ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರು, ಮೀನುಗಾರರು, ಹೈನುಗಾರರು, ನೇಕಾರರು, ಬಡಗಿಗಳು, ಆಶಾ ಕಾರ್ಯಕರ್ತೆಯರು, ಛಾಯಾಚಿತ್ರಗ್ರಾಹಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸದವರು, ಪತ್ರಿಕೆ ಮಾರಾಟಗಾರರು, ನರೇಗಾ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಚರ್ಮ ಕಾರ್ಮಿಕರು, ಆನ್‌ಲೈನ್ ಸೇವಾ ಕಾರ್ಮಿಕರು, ಟೈಲರ್‌ಗಳು, ಹೋಟೆಲ್, ಬೇಕರಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಒಟ್ಟಾರೆ 156 ವರ್ಗಗಳ 16-59  ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು.

ಪ್ರಯೋಜನಗಳೇನು?: ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ)ಯಡಿ ೨ ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 2 ಲಕ್ಷ ರೂ. ಸಿಗಲಿದೆ.
ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕ ಅರ್ಹನಾಗಿದ್ದಾನೆ.
ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ್ ಕಾರ್ಡ್ ಹೊಂದಿರುವವರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇ-ಶ್ರಮ ಕಾರ್ಡ್:
ಇ-ಶ್ರಮ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ 12 ಅಂಕಿಗಳ ವಿಶಿಷ್ಟ ಗುರುತಿನ ಇ-ಶ್ರಮ್ ಕಾರ್ಡ್ ನೀಡಲಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕರಿಗೆ ಈ ಕಾರ್ಡ್ ನೆರವು ನೀಡಲಿದೆ. ಇದು ಜೀವಿತಾವಧಿ ವ್ಯಾಲಿಡಿಟಿ ಹೊಂದಿದೆ. ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಇದೊಂದೇ ಕಾರ್ಡ್ ಸಾಕು.

ಯಾವೆಲ್ಲ ದಾಖಲೆಗಳು ಅಗತ್ಯ?
ಹೆಸರು, ಉದ್ಯೋಗ, ಖಾಯಂ ವಿಳಾಸ, ವಿದ್ಯಾರ್ಹತೆ, ಕೌಶಲ ಹಾಗೂ ಅನುಭವದ ಮಾಹಿತಿ, ಕುಟುಂಬ ಸದಸ್ಯರ ಮಾಹಿತಿ, ಆಧಾರ್ ಸಂಖ್ಯೆ, ಆಧಾರ್ ಸಂಖ್ಯೆಗೆ ಜೋಡಣೆಯಾಗಿರೋ ಮೊಬೈಲ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್ಸಿ ಕೋಡ್ ಮಾಹಿತಿಗಳಿಗೆ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು.

ಕಾರ್ಮಿಕರು  https://eshram.gov.in ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕು. ಈ ಪೋರ್ಟ್‌ಗೆ ಭೇಟಿ ನೀಡಿ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ಭರ್ತಿ ಮಾಡಬೇಕು. ನೋಂದಣಿ ಯಶಸ್ವಿಯಾದರೆ ವಿಶಿಷ್ಟ ಸಂಖ್ಯೆ ಹೊಂದಿರೋ ಇ-ಶ್ರಮ್ ಕಾರ್ಡ್ ನೀಡಲಾಗುತ್ತದೆ. ಕಾರ್ಮಿಕರು ಸ್ವತಃ ನೋಂದಣಿ ಮಾಡಿಕೊಳ್ಳಬಹುದು. ಇಲ್ಲವೇ ಸಾಮಾನ್ಯ ಸೇವಾ ಕೇಂದ್ರಗಳು ಅಥವಾ ಪ್ರಾದೇಶಿಕ ಕಚೇರಿಗಳ ಮೂಲಕ ಕೂಡ ನೋಂದಣಿ ಮಾಡಿಸಬಹುದು. ನೋಂದಣಿಗೆ ಯಾವುದೇ ಶುಲ್ಕವಿಲ್ಲ. ನೋಂದಣಿ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ 14434 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು.


ಅಸಂಘಟಿತ ವಲಯದ ಎಲ್ಲ ಕಾರ್ಮಿಕರನ್ನೂ ಇ-ಶ್ರಮ್ ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಅದರಂತೆ ನಿರಂತರವಾಗಿ ನೋಂದಣಿ ಕಾರ್ಯ ನಡೆಯುತ್ತಿದೆ. ಅರ್ಹರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸದ್ಯ ನೋಂದಣಿಯಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ನೋಂದಣಿಯಾದ ಎಲ್ಲರಿಗೂ ಇ-ಶ್ರಮ್ ಕಾರ್ಡ್ ಲಭ್ಯವಾಗಿದೆ.

ರಾಜೇಶ್ ಜಾಧವ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಮೈಸೂರು


ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 2 ಲಕ್ಷ ರೂ. ಸಿಗಲಿದೆ ಎಂದು ಇಲಾಖೆ ತಿಳಿಸಿದೆ.
-ನಾಗರಾಜು, ಜಯನಗರ 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!