ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಬರಗಿ ಗ್ರಾಮದಲ್ಲಿ ಜಮೀನಿಗೆ ಅಳವಡಿಸಲಾಗಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿಯನ್ನು ಸ್ಪರ್ಶಿಸಿ ಹೆಣ್ಣು ಕಾಡಾನೆ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಸದ್ಯ ಅರಣ್ಯ ಅಧಿಕಾರಿಗಳು ಹಾಗೂ ಪಶುವೈದ್ಯರು ಯಶಸ್ವಿಯಾಗಿ ಹೆಣ್ಣು ಕಾಡಾನೆಯನ್ನು ರಕ್ಷಿಸಿದ್ದಾರೆ. ಬಂಡೀಪುರ ಅರಣ್ಯ ಸಿಬ್ಬಂದಿ, ವೈದ್ಯರ ಕಾರ್ಯಕ್ಕೆ ಟ್ವೀಟ್ ಮಾಡವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ತಂತಿ ತಗುಲಿ ಅಸ್ವಸ್ಥಗೊಂಡಿದ್ದ 25ರಿಂದ 30 ವರ್ಷ ವಯಸ್ಸಿನ ಹೆಣ್ಣಾನೆಗೆ ವೈದ್ಯರಿಂದ ನಿರಂತರ ಚಿಕಿತ್ಸೆ ನೀಡಲಾಗಿದ್ದು ಗುಣಮುಖವಾಗಿದೆ. ಸದ್ಯ ಅಧಿಕಾರಿಗಳು ಮತ್ತೆ ಕಾಡಿಗೆ ವಾಪಸ್ ಕಳಿಸಿದ್ದಾರೆ. ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದ್ದು ಅರಣ್ಯ ಸಚಿವರ ಟ್ವೀಟ್ನ್ನು ರೀ ಟ್ವೀಟ್ ಮಾಡಿದ್ದಾರೆ.
Happy to see this.
Compliments to the staff at Bandipur Tiger Reserve. Such compassion among our people is commendable. https://t.co/rcQIZdETNk
— Narendra Modi (@narendramodi) February 18, 2023
ನಾಗಪಟ್ಟಣ ಗ್ರಾಮದ ಪುತ್ರನಪುರರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಲಾಗಿತ್ತು. ಈ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಹೆಣ್ಣಾನೆ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಮಂಗಳವಾರ ಬೆಳಿಗ್ಗೆ ಹೆಣ್ಣಾನೆ ಜಮೀನಿನಲ್ಲಿ ಬಿದ್ದು ನರಳಾಡುತ್ತಿರುವ ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಾಡಾನೆಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು ಪಶುವೈದ್ಯ ಡಾ.ವಾಸೀಂ ಮಿರ್ಜಾ ಅವರು ಹೆಣ್ಣಾನೆಗೆ ಚಿಕಿತ್ಸೆ ನೀಡಿದ್ದರು. ಚೇತರಿಕೆ ಕಂಡ ಬಳಿಕ ಜೆಸಿಬಿ ಸಹಾಯದಿಂದ ಆನೆಯನ್ನು ಎದ್ದು ನಿಲ್ಲಿಸಲಾಯಿತು. ಆನೆಯ ಪ್ರಾಣಕ್ಕೆ ಅಪಾಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





