Mysore
21
broken clouds

Social Media

ಭಾನುವಾರ, 14 ಜೂನ್ 2026
Light
Dark

ರೋಹಿಣಿ ಮೇಲಿನ ದೂರು ಹಿಂಪಡೆಯಲ್ಲ: ಸಾ.ರಾ ಸ್ಪಷ್ಟನೆ

ಕೆ.ಆರ್.ನಗರ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಮಾಡಿದ ಆರೋಪಗಳು ಸಾಬೀತಾಗದೆ ಇದ್ದುದ್ದರಿಂದ ಅವರು ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಆದರೆ, ನಾನು ಅವರ ಮೇಲೆ ನೀಡಿರುವ ದೂರುಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಅವರಣದಲ್ಲಿ ರಾಜ್ಯ ಸರ್ಕಾರದ ಡಾ.ಬಿ.ಸಿ.ರಾಯ್‌ ಪ್ರಶಸ್ತಿಗೆ ಭಾಜನರಾದ ಪ್ರಸೂತಿ ತಜ್ಞೆ ಡಾ.ಕೆ.ಆರ್.ಚಂದ್ರಕಲಾ ಅವರನ್ನು ಸನ್ಮಾನಿಸಿ ನಂತರ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

ಸರ್ಕಾರಿ ಅಧಿಕಾರ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಯಾವುದೇ ಸಾಕ್ಷ್ಯಾಧಾರವಿಲ್ಲದೇ ಜನಪ್ರತಿನಿಧಿಯ ಮೇಲೆ ಆರೋಪ ಮಾಡಿ, ಕೆಸರೆರೆಚುವ ಕೆಲಸ ಮಾಡಿದ್ದು, ನನಗೆ ಮಾನಸಿಕವಾಗಿ ತೊಂದರೆ ನೀಡಿದ್ದಾರೆ. ಈ ಬಗ್ಗೆ ನಾನು ಶಾಸಕನಾಗಿ ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಮುಂದೆ ಬೇಸರ ವ್ಯಕ್ತಪಡಿಸಿದ್ದೇನೆಯೇ ಹೊರತು ಯಾರಿಗೂ ತೊಂದರೆ ನೀಡಬೇಕೆಂಬ ಉದ್ದೇಶದಿಂದ ಅಲ್ಲ ಎಂದು ತಿಳಿಸಿದರು.
ರೋಹಿಣಿ ಸಿಂಧೂರಿ ವಿರುದ್ಧ ನಾನು ಸಾಕ್ಷಿ ಸಮೇತ ಭ್ರಷ್ಟಾಚಾರದ ಆರೋಪ ಮಾಡಿ ದೂರು ನೀಡಿದ್ದು 8 ತಿಂಗಳಾದ ಮೇಲೆ ವರದಿ ಬಂದಿದೆ. ಆದರೆ ಅವರ ಆರೋಪದ ತನಿಖೆ ವರದಿ ಕೇವಲ ಎರಡು ತಿಂಗಳಲ್ಲಿ ಬರುತ್ತದೆ ಎಂದರೆ ಅಧಿಕಾರ ಯಂತ್ರ ಹೇಗಿದೆ ಎಂಬುದು ತಿಳಿಯುತ್ತದೆ. ಅಲ್ಲದೇ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದರು ಕೂಡ ನಾನು ಅವರ ಮೇಲಿನ ದೂರನ್ನು ವಾಪಸ್ ಪಡೆಯುವುದಿಲ್ಲ. ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೋ ನೋಡೋಣ ಎಂದು ನುಡಿದರು.

ಪುರಸಭಾ ಸದಸ್ಯರಾದ ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ಉಮೇಶ್, ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಗ್ರಾಪಂ ಮಾಜಿ ಸದಸ್ಯ ಹೋಟೆಲ್ ಮಹದೇವ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಜೆ.ಅರುಣ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರಪ್ಪ,, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಹೆಚ್.ಜಿ.ಮಂಜು, ಸಾ.ರಾ.ನಾಗೇಶ್, ಇನ್ನಿತರರು ಹಾಜರಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!