ಮೈಸೂರು : ಡಿಜಿಟಲ್ ಪೇಮೆಂಟ್ ಜನಪ್ರಿಯ ಮತ್ತು ಅನಿವಾರ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯು ಚಾಮುಂಡೇಶ್ವರಿ ದೇವಸ್ಥಾನದ ಕ್ಯೂ ಆರ್ ಕೋಡ್ ಸಹಿತ ಇ ಹುಂಡಿ ಬಿಡುಗಡೆ ಮಾಡಿದ್ದು, ಅಪರ ಜಿಲ್ಲಾಧಿಕಾರಿಗಳಾದ ಡಾ. ಬಿ.ಎಸ್. ಮಂಜುನಾಥಸ್ವಾಮಿ ಅವರು ಇ ಹುಂಡಿಯನ್ನು ಉದ್ಘಾಟನೆ ಮಾಡಿದರು.

ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಚಾಮುಂಡಿಬೆಟ್ಟ ಶಾಖೆಯ ಸಹಯೋಗದಲ್ಲಿ ಚಾಮುಂಡೇಶ್ವರಿ ದೇವಿಯ ಭಕ್ತರು, ಕಾಣಿಕೆ ಸಲ್ಲಿಕೆಯನ್ನು ಡಿಜಿಟಲ್ ಪೇಮೆಂಟ್ ಮೂಲಕವೂ ಮಾಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಸಹಿತ ಇ-ಹುಂಡಿ ಯನ್ನು ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ದೇವಸ್ಥಾನದ ಆವರಣದಲ್ಲಿ ನೆರವೇರಿಸಿ ಅವರು ಮಾತನಾಡಿದರು.

ಇದರ ಭದ್ರತಾ ಕ್ರಮಗಳ ಬಗ್ಗೆ, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ಷ್ಮ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಭಕ್ತರು ಕಾಣಿಕೆ ಸಲ್ಲಿಕೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚಾಮುಂಡಿಬೆಟ್ಟ, ಮೈಸೂರು ಈ ಪೂರ್ಣ ಹೆಸರನ್ನು ಗಮನಿಸುವಂತೆ ವಿನಂತಿಸುತ್ತೇವೆ ಎಂದರು. ಅಲ್ಲದೆ ಇದರ ದುರುಪಯೋಗದ ಬಗ್ಗೆ ತಿಳಿದು ಬಂದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿಯೂ ಸಹ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಿ.ಜಿ. ಕೃಷ್ಣ ಅವರು ಮಾತನಾಡಿ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಬಹುತೇಕ ಎ – ಗ್ರೇಡ್ ದೇವಸ್ಥಾನಗಳಲ್ಲಿ ಕ್ಯೂಆರ್ ಕೋಡ್ ಸಹಿತ’ ಇ – ಹುಂಡಿ ಸೌಲಭ್ಯವಿದ್ದು ಅದನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿಯೂ ಆಳಸಿಕೊಳ್ಳುವಂತೆ ಇಲಾಖೆಯಿಂದ ಸೂಚಿಸಿದ್ದು, ಅದರಂತೆ ಇಂದು ಬಿಡುಗಡೆಗೊಳಿಸಲಾಗಿದೆ ಶ್ರೀ ದೇವಿಯ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ನಂತರ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಡಾ.ಬಿ.ಎಸ್. ಮಂಜುನಾಥಸ್ವಾಮಿಯವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಈ ದಸರಾ ಸಂದರ್ಭದಲ್ಲಿ ಆಚರಿಸುತ್ತಿರುವ ರೀಟೇಲ್ ಉತ್ಸವದ ತಾತ್ಕಾಲಿಕ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ಚಾಮುಂಡಿಬೆಟ್ಟ ಶಾಖೆಯ ಮುಂಭಾಗದಲ್ಲಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕರಾದ ಕೆ.ಎಸ್.ವಿಶ್ವನಾಥ್ ಅವರು ಮಾತನಾಡಿ ಉತ್ಸವದ ಸಂದರ್ಭದಲ್ಲಿ ಗೃಹ ಸಾಲ, ವಾಹನ ಸಾಲ, ಅಡಮಾನ ಸಾಲಗಳಿಗೆ ಅನ್ವಯಿಸುವ ಬಡ್ತಿ ದರ ಮತ್ತು ಸೇವಾ ಶುಲ್ಕ ರಿಯಾಯಿತಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ ಶಶಿಶೇಖರ್ ದೀಕ್ಷಿತ್, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಜೀವನಮುಕ್ತ, ಚಾಮುಂಡಿಬೆಟ್ಟ ಶಾಖೆಯ ವ್ಯವಸ್ಥಾಪಕಿ ಸಿಂಧು ಮತ್ತು ಪ್ರಿಯಾಂತ್ ಅವರುಗಳು ಉಪಸ್ಥಿತರಿದ್ದರು.