ಹನೂರು : ಮನೆಯಲ್ಲಿ ಶೇಖರಣೆ ಮಾಡಿದ್ದ ಗಾಂಜಾವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ಕುಂಜಮ್ಮ (48) ಅವರ ಮನೆಯಲ್ಲಿ ಗಾಂಜಾ ಸಂಗ್ರಹಿಸಿದ್ದು, ದಾಳಿಯ ವೇಳೆ ಅವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಳ್ಳೇಗಾಲ ವಲಯ ವ್ಯಾಪ್ತಿಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮದ ಬಸ್ ನಿಲ್ದಾಣದ ಬಳಿ ಅಬಕಾರಿ ವೃತ್ತ ನಿರೀಕ್ಷಕ ದಯಾನಂದ ನೇತೃತ್ವದ ತಂಡ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಮನೆಯೊಂದರಲ್ಲಿ ಅಕ್ರಮ ಗಾಂಜಾ ಶೇಖರಣೆ ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕುಂಜಮ್ಮ ಅವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಕಪ್ಪು ಬಣ್ಣದ ಕವರ್ನಲ್ಲಿ 212 ಗ್ರಾಂ ಹೂ, ಮೊಗ್ಗು ತೆನೆ ಮತ್ತು ಬೀಜಗಳಿಂದ ಕೂಡಿದ ಒಣ ಗಾಂಜಾ ಶೇಖರಣೆ ಮಾಡಿರುವುದು ಕಂಡು ಬಂದಿದೆ. ತಕ್ಷಣ ಮಹಿಳೆಯನ್ನು ವಶಕ್ಕೆ ಪಡೆಯುವಾಗ ಪರಾರಿಯಾಗಿದ್ದು, ಗಾಂಜಾವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಗಳಾದ ರಮೇಶ್, ಸೃಜನ್ ರಾಜ್, ಜಯಪ್ರಕಾಶ್, ಮಂಜುನಾಥ್ ಪ್ರಸಾದ್ ಪಾಲ್ಗೊಂಡಿದ್ದರು.





