ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದಲ್ಲಿ ಸೋಮವಾರ ಕಾಡ್ತಿಚ್ಚು ಕಾಣಿಸಿಕೊಂಡು ಹತ್ತಾರು ಎಕರೆ ಅರಣ್ಯ ಸುಟ್ಟು ಹೋಗಿದೆ.
ಪುಣಜನೂರಿನಿಂದ ಬೇಡಗುಳಿಗೆ ಹೋಗುವ ರಸ್ತೆಯ ವ್ಯಾಪ್ತಿಯ ಕುರಿದುಂದೆ, ಕುಂಬಳಕಾಯಿ ಗುಡ್ಡ ಪ್ರದೇಶದ 3-4 ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ವಹಿಸಿದ್ದಾರೆ.
ಬೆಳಿಗ್ಗೆಯೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸಂಜೆಯಾದರೂ ನಂದಿಸಲು ಸಾಧ್ಯವಾಗಿಲ್ಲ. ಕಾಡು ಒಣಗಿದ್ದು, ಗಾಳಿ ಹಾಗೂ ಬಿಸಿಲಿನಿಂದಾಗಿ ಬೆಂಕಿ ವೇಗವಾಗಿ ಹರಡುತ್ತಿದೆ. ಕನಿಷ್ಠ 50 ಎಕರೆಗೂ ಹೆಚ್ಚು ಕಾಡು ಬೆಂಕಿಗೆ ಆಹುತಿಯಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಕೋರ್ ಅರಣ್ಯ ವಲಯದಲ್ಲಿ ಬೆಂಕಿ ಬಿದ್ದಿರುವುದರಿಂದ ಅಂದಾಜು ಸಿಗುತ್ತಿಲ್ಲ. ಆದರೆ, ದಟ್ಟ ಹೊಗೆ, ಹೊರದಿಂದಲೇ ಕಾಣಿಸುತ್ತಿದೆ. ಕನಿಷ್ಠ 50 ಎಕರೆ ಅರಣ್ಯ ಬೆಂದು ಹೋಗಿರಬಹುದು. ನೆಲ ಬೆಂಕಿಯಾಗಿದ್ದು, ಎತ್ತರಕ್ಕೆ ವ್ಯಾಪಿಸಿಲ್ಲ. ಬೆಂಕಿ ನಂದಿಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪ್ ಜೆ.ಕಂಟ್ರ್ಯಾಕ್ಟರ್ ತಿಳಿಸಿದ್ದಾರೆ. ಕಾಡ್ತಿಚ್ಚು ಕಾಣಿಸಿಕೊಂಡಿದೆಯೇ ಅಥವಾ ಸ್ಥಳೀಯರೇ ಬೆಂಕಿ ಹಾಕಿರಬಹುದೇ ಎಂಬ ಬಗ್ಗೆ ಅನುಮಾನವಿದೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.





