ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ ಬಸವನ ಮೂರ್ತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಮೆರವಣಿಗೆ ಮಾಡಿದರು.
ಬೆಳಿಗ್ಗೆ ಗ್ರಾಮದ ಶ್ರೀಚಂಗೂರು ಮಾರಮ್ಮ ದೇವಾಲಯದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ನಂತರ ತಲೆಯ ಮೇಲೆ ಬಸವನ ವಿಗ್ರಹ ಹೊತ್ತು ಮೆರವಣಿಗೆ ಮಾಡಿದರು. ಮನೆ ಮನೆಗಳ ಮುಂದೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಬಸವನ ಮೂರ್ತಿ ಹೊತ್ತ ಯುವಕನ ತಲೆ ಮೇಲೆ ಬಕೆಟ್ ಗಟ್ಟಲೆ ನೀರನ್ನು ಸುರಿದರು .ಈ ವೇಳೆ ಜನತೆ ಅಕ್ಕಿ, ತೆಂಗಿನಕಾಯಿ, ಬೆಲ್ಲ , ದವಸ ಧಾನ್ಯಗಳನ್ನು ಮತ್ತು ಹಣವನ್ನು ಕಾಣಿಕೆಯಾಗಿ ನೀಡಿದರು.
ಮೆರವಣಿಗೆ ಉದ್ದಕ್ಕೂ ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ….ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ ಎಂಬ ಘೋಷಣೆಯನ್ನು ಕೂಗುತ್ತಾ ತಮಟೆ ಸದ್ದಿಗೆ ಹೆಜ್ಜೆಹಾಕಿ ಗಮನ ಸೆಳೆದರು. ನಂತರ ಗ್ರಾಮದ ಹೊರವಲಯದಲ್ಲಿರುವ ಶ್ರೀಜಡೆಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ಮೆರವಣಿಗೆ ಸಂದರ್ಭದಲ್ಲಿ ಸಂಗ್ರಹಿಸಲಾದ ದವಸ ಧಾನ್ಯಗಳನ್ನು ಬಳಸಿ ಅಡುಗೆ ಮಾಡಿ (ಪರು ಮಾಡಿ) ಎಲ್ಲರೂ ಪ್ರಸಾದವಾಗಿ ಸ್ವೀಕರಿಸಿದರು. ಗ್ರಾಮದ ನೂರಾರು ಜನರು ಹಾಜರಿದ್ದರು.





