ಚಾಮರಾಜನಗರ: ನಿನ್ನೆ ( ಏಪ್ರಿಲ್ 26 ) ರಾಜ್ಯದ ಒಟ್ಟು 14 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆ ನಡೆಯಿತು. ಎಲ್ಲೆಡೆ ಮತದಾನ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಹಕ್ಕನ್ನು ಚಲಾಯಿಸಿದರು. ಆದರೆ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಗೆ ಬರುವ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರು ಇವಿಎಂ ಧ್ವಂಸ ಮಾಡಿದ್ದರು.
ಮತಗಟ್ಟೆ ಧ್ವಂಸ ಮಾಡಿದ್ದ ಗ್ರಾಮಸ್ಥರು ಕುರ್ಚಿ ಹಾಗೂ ಮೇಜುಗಳನ್ನು ಸಹ ಒಡೆದು ಹಾಕಿದ್ದರು. ಹೀಗೆ ಪರಿಸ್ಥಿರಿ ವಿಕೋಪಕ್ಕೆ ತಿರುಗಿದ್ದನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಚುನಾವಣಾಧಿಕಾರಿಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.
ಹೀಗೆ ಹಿಂಸೆ ಏರ್ಪಟ್ಟಿದ್ದ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ನಡೆಸಲು ಚುನಾವಣಾಧಾರಿಗಳು ತೀರ್ಮಾನಿಸಿದ್ದಾರೆ. ಏಪ್ರಿಲ್ 29ರಂದು ಬೂತ್ ಸಂಖ್ಯೆ 146ರಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮರು ಮತದಾನ ನಡೆಯಲಿದೆ.