ಹನೂರು: ಕೆಎಸ್ಆರ್ಟಿಸಿ ಬಸ್ ಟೈಯರ್ ಸಿಡಿದು 20ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಈ ಘಟನೆ ನಡೆದಿದ್ದು, ಹನೂರು ಪಟ್ಟಣದಿಂದ ಅಜ್ಜೀಪುರ-ರಾಮಾಪುರ ಕೌದಳ್ಳಿ ಮಾರ್ಗವಾಗಿ ದಂಟಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬಸ್ನ ಮುಂಭಾಗದ ಟೈರ್ ಏಕಾಏಕಿ ಸಿಡಿದಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಪ್ರಯಾಣಿಕರು, ಈ ಮಾರ್ಗದಲ್ಲಿ ಸಂಚರಿಸುವ ಬಸ್ಗಳ ಟೈರ್ಗಳು ಕಳಪೆಯಾಗಿದ್ದು, ಅತಿ ಹೆಚ್ಚು ಸವೆದಿರುವ ಟೈರ್ಗಳನ್ನು ಹಾಕಿ ಸಂಚಾರ ಮಾಡುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಹನೂರು ತಾಲ್ಲೂಕಿನ ಕಾಡಂಚಿನಲ್ಲಿರುವ ಬರುವ ದಂಟಳ್ಳಿ ಗ್ರಾಮಕ್ಕೆ ಕಳೆದ ನಾಲ್ಕೈದು ತಿಂಗಳಿನಿಂದ ತಾತ್ಕಾಲಿಕವಾಗಿ ಬಸ್ ವ್ಯವಸ್ಥೆ ನಿಲ್ಲಿಸಲಾಗಿತ್ತು. ಆದರೆ ರೈತ ಮುಖಂಡರು ಹಾಗೂ ಸಾರ್ವಜನಿಕರ ಮನವಿ ಮೇರೆಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಆದರೆ ಸಂಚಾರಕ್ಕೆ ಯೋಗ್ಯವಾಗಿರುವ ವಾಹನಗಳನ್ನು ನೀಡದೇ ಡಕೋಟಾ ಬಸ್ಗಳನ್ನು ನೀಡುತ್ತಿರುವುದರಿಂದ ಎಲ್ಲೆಂದರಲ್ಲಿ ರಿಪೇರಿಯಾಗಿ ಹಾಗೂ ಟೈರ್ ಸಮಸ್ಯೆಯಿಂದ ನಿಲ್ಲುತ್ತಿವೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹನೂರು ತಾಲ್ಲೂಕು ವ್ಯಾಪ್ತಿಗೆ ಗುಣಮಟ್ಟದ ಬಸ್ಗಳನ್ನು ಬಿಡುವಂತೆ ಒತ್ತಾಯಿಸಿದ್ದಾರೆ.





