Mysore
20
scattered clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಚಾ.ನಗರ ಜಿಲ್ಲೆಯಲ್ಲಿ ಜಿಟಿ ಮಳೆ; ಜನಜೀವನ ಅಸ್ತವ್ಯಸ್ತ

ಚಾಮರಾಜನಗರ: ತಮಿಳುನಾಡಿನ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಜಿಲ್ಲೆಯಾದ್ಯಂತ ಶುಕ್ರವಾರ ಜಿಟಿಜಿಟಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಳಿಗ್ಗೆ 10 ಗಂಟೆಗೆ ಶುರುವಾದ ತುಂತುರು ಮಳೆ ಸಂಜೆವರೆಗೂ ಒಂದೇ ಸಮನೆ ಬಿದ್ದಿತು. 5 ಗಂಟೆಯಲ್ಲಿ ನಿಂತಿದ್ದು ದಟ್ಟ ಮೋಡಕವಿದ ಶೀತವಾತಾವರಣ ಆವರಿಸಿತ್ತು.

ಮಳೆಯಿಂದ ಬೀದಿಬದಿ ಮತ್ತು ತಳ್ಳುಗಾಡಿ ವ್ಯಾಪಾರ ಸಂಪೂರ್ಣ  ಸ್ಥಬ್ಧ ವಾಗಿತ್ತು. ಜನತೆ ರೈನ್ ಕೋಟ್, ಛತ್ರಿ ಅವಲಂಬಿಸಿ ಹೊರಬರಬೇಕಾಯಿತು. ರಸ್ತೆಗಳಲ್ಲಿ ನೀರು ಹರಿದಾಡಿತು. ಹೇಳಿಕೊಳ್ಳುವಂತಹ ಜನರಿಲ್ಲದೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿತು.ಇನ್ನು ಗ್ರಾಮೀಣ ಭಾಗದಲ್ಲಿ ಕೃಷಿಚಟುವಟಿಕೆಗಳಿಗೆ ತೊಂದರೆ ಆಯಿತು. ಕುರಿ, ಮೇಕೆ ಹಾಗೂ ದನಕರುಗಳನ್ನು ಮೇಲೂ ಬಿಡಲಾಗದೆ ಒಳಗೂ ಕಟ್ಟಲಾಗದೆ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಯಿತು.ಹಸಿಕಡಲೆ, ಜೋಳ, ರಾಗಿ, ಹುರುಳಿ, ಕೊತ್ತಂಬರಿ, ಭತ್ತ, ಮುಸುಕಿನಜೋಳ ಮೊದಲಾದ ಬೆಳೆಗಳು ವಿವಿಧ ಹಂತದಲ್ಲಿವೆ. ಈ ಬೆಳೆಗಳು ಕಟಾವು ಹಂತದಲ್ಲಿ ಇಲ್ಲದಿರುವುದರಿಂದ ಮಳೆಯಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಆಧಿಕಾರಿಗಳು. ಆದರೆ ಸತತವಾಗಿ ಜೋರುಮಳೆ ಹಿಡಿದರೆ ಕೊತ್ತಂಬರಿ ಬೆಳವಣಿಗೆ ಕುಂಠಿತವಾಗುವ ಅಪಾಯವಿದೆ. ಇನ್ನು ಅರಿಶಿನ ಮತ್ತು ಭತ್ತಕ್ಕೆ ವಿಶೇಷವಾಗಿ ತರಕಾರಿ ಬೆಳೆಗಳಿಗೆ ರೋಗ ರುಜಿನ ಬಾಧಿಸುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಕೃಷಿ ತಜ್ಞರ ಅಭಿಪ್ರಾಯ.

 

ಜಿಟಿ ಮಳೆಯಿಂದ ಕೃಷಿ ಬೆಳೆಗಳಿಗೆ ಅಂತಹ ಸಮಸ್ಯೆ ಇಲ್ಲ. ಕೊಯ್ಲಿಗೆ ಬಂದಿರುವ ಬೆಳೆಗಳಿದ್ದರೆ ತೊಂದರೆಯಾಗುತ್ತಿತ್ತು.

-ಮಧುಸೂದನ್, ಜಂಟಿ ಕೃಷಿ ನಿರ್ದೇಶಕ.

ಮಳೆ ಬಿರುಸಾಗುವ ಮುನ್ಸೂಚನೆ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಮಳೆ ಇನ್ನೂ ಜಾಸ್ತಿಯಾಗುವ ಸಂಭವವಿದೆ. ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸೋಮವಾರದವರೆಗೂ ಮಳೆ ಬೀಳುವ ಮುನ್ಸೂಚನೆ ಇದೆ.

-ಎಚ್.ಕೆ.ರಜತ್, ಕೃಷಿ ಹವಾಮಾನ ತಜ್ಞ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!