ಹನೂರು : ತಾಲೂಕಿನ ಕೌದಳ್ಳಿ ವಲಯ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಕಡಬೂರು ಗ್ರಾಮದ ಮೂಲಕ ಅರಣ್ಯಕ್ಕೆ ಜಾನುವಾರುಗಳು ಮೇವು ಮೇಯಲು ಹೋಗುವುದನ್ನು ತಪ್ಪಿಸಲು ಗುಂಡಿ ತೆಗೆದಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ತಾಲೂಕು ಅಧ್ಯಕ್ಷ ಮಾದಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ರೈತ ಮುಖಂಡರುಗಳು ಕಡಬೂರು ಗ್ರಾಮದ ಸಮೀಪ ಗುಂಡಿ ತೆಗೆದಿರುವ ಸ್ಥಳದಲ್ಲಿ ಜಮಾವಣೆಗೊಂಡು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಅವರ ಹಾಕಿದರು.
ನಂತರ ಮಾತನಾಡಿದ ಅವರು, ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬೂರು, ಬಿದರಳ್ಳಿ ಗ್ರಾಮದ ಜಾನುವಾರುಗಳು ನೂರಾರು ವರ್ಷಗಳಿಂದ ಅರಣ್ಯಕ್ಕೆ ಹೋಗಿ ಮೇವು ಮೇಯ್ದುಕೊಂಡು ವಾಪಸ್ ಬರುತ್ತಿದೆ. ಆದರೆ ಕಳೆದ ವಾರ ಅರಣ್ಯ ಇಲಾಖೆ ಅಧಿಕಾರಿಗಳು ಕಡಬೂರು ಗ್ರಾಮದ ಸಮೀಪವೇ ಗುಂಡಿ ತೆಗೆದು ಜಾನುವಾರುಗಳು ಮುಂದೆ ಹೋಗದಂತೆ ಮಾಡಿದ್ದಾರೆ.
ಇದರಿಂದ ಜಾನುವಾರುಗಳಿಗೆ ಮೇವು ಇಲ್ಲದೆ ತೊಂದರೆ ಅನುಭವಿಸುತ್ತಿದೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಜಾನುವಾರುಗಳ ಮೇವಿಗೆ ಯಾವುದೇ ತೊಂದರೆ ನೀಡದಂತೆ ಮನವಿ ಮಾಡಲಾಗಿದೆ. ಅವರು ಸಹ ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದರೆ ಕೌದಳ್ಳಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಟ್ರಂಚ್ ತೆಗೆದು ತೊಂದರೆ ನೀಡುತ್ತಿದ್ದಾರೆ. ಒಂದು ದಿನದ ಒಳಗೆ ಈ ಗುಂಡಿ ಮುಚ್ಚಿ ಜಾನುವಾರುಗಳಿಗೆ ಅವಕಾಶ ಕಲ್ಪಿಸದಿದ್ದರೆ , ಹನೂರು ಹಾಗೂ ಕೌದಳ್ಳಿ ಗ್ರಾಮದಲ್ಲಿರುವ ಅರಣ್ಯ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಸಂಪತ್ತು ಹಾಗೂ ವನ್ಯ ಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಚಿರತೆ ಮೃತಪಟ್ಟಿದೆ. ಆದರೆ ಅರಣ್ಯದಲ್ಲಿ ಜಾನುವಾರಗಳನ್ನು ಮೇಯಿಸುತ್ತಿದ್ದ ರೈತನೋವರ್ನನ್ನು ಕರೆತಂದು ಚಿತ್ರ ಹಿಂಸೆ ನೀಡಿದ್ದಲ್ಲದೆ 15 ಸಾವಿರ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಘಟನೆ ತಿಳಿಯುತ್ತಿದ್ದಂತೆ ರೈತ ಸಂಘದವರು ಮಧ್ಯ ಪ್ರವೇಶಿಸಿದ ನಂತರ ರೈತನನ್ನು ಬಿಟ್ಟು ಕಳುಹಿಸಿದ್ದಾರೆ. ಆದರೆ ರೈತ ದೂರು ನೀಡಿ ಒಂದು ವಾರ ಕಳೆದರೂ ಹಲ್ಲೆ ಮಾಡಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ವೇಳೆ ಐವತ್ತಕ್ಕೂ ಹೆಚ್ಚು ರೈತ ರೈತ ಮುಖಂಡರು ಹಾಜರಿದ್ದರು.





