ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ.
ಪಿರಿಯಾಪಟ್ಟಣದಲ್ಲಿ ಟೈಲ್ಸ್ ಮತ್ತು ಪೇಂಟಿಂಗ್ ಕೆಲಸ ಮಾಡುವ ನಾಲ್ವರು ಭಾನುವಾರ ಮಧ್ಯಾಹ್ನ ಈಜಲು ನದಿಗೆತೆರಳಿದ್ದು, ಈಜುತ್ತಿದ್ದ ವೇಳೆ ಪಿ. ಪಟ್ಟಣ ಟೌನ್ ನಿವಾಸಿ ಶಿವಮೂರ್ತಿ ಮಗ ಗಣೇಶ (೨೨) ಮತ್ತು ಕೆ. ಎಂ. ಬಡಾವಣೆಯ ನಿವಾಸಿ ಶತಾಜ್ ಎಂಬವರ ಮಗ ಇಮ್ರಾನ್ (೨೮) ಮೃತಪಟ್ಟಿದ್ದಾರೆ.
ನದಿಯಲ್ಲಿ ಈಜಲು ಹೋದ ಸಂದರ್ಭದಲ್ಲಿ ಇಮ್ರಾನ್ ಮುಳುಗಿದ್ದು, ಈತನನ್ನು ರಕ್ಷಿಸಲು ಹೋದ ಗಣೇಶ್ ಕೂಡ ಸಾವಿಗೀಡಾಗಿದ್ದಾನೆ. ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಳುಗು ತಜ್ಞರಿಂದ ಗಣೇಶನ ಮೃತದೇಹ ಹೊರತೆಗೆಯಲಾಗಿದ್ದು, ಇಮ್ರಾನ್ ಶವ ಪತ್ತೆಯಾಗಿಲ್ಲ. ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸೋಮವಾರ ಕಾರ್ಯಾಚರಣೆ ಮುಂದುವರಿಸುವುದಾಗಿ ಪೊಲೀಸ್ ಇಲಾಖೆಯವರು ತಿಳಿಸಿದ್ದಾರೆ. ಗಣೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಿರಿಯಾಪಟ್ಟಣಕ್ಕೆ ತರಲಾಗಿದೆ.




