Mysore
23
overcast clouds

Social Media

ಶನಿವಾರ, 13 ಜೂನ್ 2026
Light
Dark

ಚಾ. ನಗರ : ಜ್ಯೂಸ್‌ನೊಂದಿಗೆ ಮದ್ಯ ಕುಡಿಸಿ ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ!

ಚಾಮರಾಜನಗರ: ಗರ್ಭಿಣಿ ಪತ್ನಿಗೆ ಜ್ಯೂಸ್‌ನೊಂದಿಗೆ ಮದ್ಯ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಂದಿದ್ದ ಪತಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಕೊಳ್ಳೇಗಾಲ ತಾಲ್ಲೂಕಿನ ರಾಚಪ್ಪಾಜಿ ನಗರದ ಮುತ್ತುರಾಜ್ ಎಂಬಾತ ಶಿಕ್ಷೆಗೊಳಗಾಗಿರುವ ಅಪರಾಧಿ. ೨೦೧೩ ರಲ್ಲಿ ಗರ್ಭಿಣಿ ಪತ್ನಿ ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಮುತ್ತುರಾಜ್‌ಗೆ ಜೀವಾವಧಿ ಶಿಕ್ಷೆ ಮತ್ತು ೨.೧೦ ಲಕ್ಷ ರೂ. ದಂಡ ವಿಧಿಸಿದ್ದಾರೆ.

ಏನಿದು ಕೊಲೆ ಕಹಾನಿ?: ರಾಚಪ್ಪಾಜಿ ನಗರದ ನಿವಾಸಿ ಮುತ್ತುರಾಜ್ ಟ್ರ್ಯಾಕ್ಟರ್ ಚಾಲಕನಾಗಿದ್ದು, ಅದೇ ಗ್ರಾಮದ ಜ್ಯೋತಿ ಎಂಬ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ. ಬಳಿಕ, ತಗಾದೆ ತೆಗೆದು ಪತ್ನಿ ಜೊತೆ ನಿತ್ಯ ರಂಪಾಟ ಮಾಡುತ್ತಿದ್ದ. ಈ ಮಧ್ಯೆ ಜ್ಯೋತಿ ೩ ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿರುವುದರಿಂದ ತವರು ಮನೆಗೆ ಹೋಗಿ ಬಾ ಎಂದು ಪುಸಲಾಯಿಸಿ ಬೈಕಿನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜ್ಯೂಸ್ ನೊಟ್ಟಿಗೆ ಮದ್ಯ ಸೇರಿಸಿ ಕುಡಿಸಿ ಬಳಿಕ ಆಕೆಯ ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಗುರುತು ಪತ್ತೆಯಾಗದಿರಲೆಂದು ಎಡಕೆನ್ನೆಯನ್ನೇ ಸುಟ್ಟು ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುತ್ತುರಾಜ್​​ನನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನಿರಂತರ ವಿಚಾರಣೆ ನಡೆದು ಮುತ್ತುರಾಜ್​​ನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಟಿ.ಹೆಚ್.ಲೋಲಾಕ್ಷಿ ವಾದ ಮಂಡಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!