Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಚಾ.ನಗರ | ಇತಿಹಾಸ ಅರಿಯದವರಿಂದ ದಸರಾ ರದ್ದು ; ಸಾಹಿತಿ ಸೋಮಶೇಖರ್‌ ಬಿಸಲ್ವಾಡಿ

ಚಾಮರಾಜನಗರ : ನಗರದಲ್ಲಿ ೨೦೧೩ರಿಂದ ಆರಂಭವಾದ ಚಾಮರಾಜನಗರ ಸಾಂಸ್ಕೃತಿಕ ದಸರಾ ೨೦೨೪ರವರೆಗೂ ನಡೆಯಿತು. ಈ ಬಾರಿ ದಸರಾ ರದ್ದಾಗಿರುವುದು ಆಡಳಿತ ವರ್ಗಕ್ಕೆ ಚಾಮರಾಜನಗರದ ಇತಿಹಾಸದ ಅರಿವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಾಹಿತಿ ಸೋಮಶೇಖರ್ ಬಿಸಲ್ವಾಡಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ೨ ದಿನಗಳ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

ಚಾಮರಾಜನಗರದಲ್ಲಿ ಹಿಂದೆ ದಸರಾ ನಡೆದಿತ್ತೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅವರು ಚಾಮರಾಜನಗರ ದಸರಾ ಕಾರ್ಯಕ್ರಮ ರದ್ದುಪಡಿಸಿ, ಜಿಲ್ಲೆಗೆ ಅಪಚಾರ ಮಾಡಿದ್ದಾರೆ ಎಂದರು.

ಕಲಾವಿದರಾದ ನಾವು ಒಟ್ಟಾಗಿ ಚಾಮರಾಜನಗರ ದಸರಾ ಆಚರಿಸೋಣ ಎಂಬ ಸಂಕಲ್ಪ ಮಾಡಿರುವುದು ಪ್ರಶಂಸನೀಯ. ಕಲಾವಿದರೇ ಸ್ವಯಂಪ್ರೇರಿತವಾಗಿ ದಸರಾ ಆಚರಿಸುತ್ತಿರುವುದು ಸರ್ಕಾರಕ್ಕೆ ಕೊಟ್ಟ ಸಂದೇಶವಾಗಿದೆ ಎಂದರು.

ಇದನ್ನೂ ಓದಿ:-ಚಾ.ನಗರ ದಸರಾ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ; ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ

ಜಿಲ್ಲಾ ಯುವ ಕಲಾವಿದರ ಬಳಗದ ಅಧ್ಯಕ್ಷ ಶಿವಶಂಕರ್ ಎನ್.ಚಟ್ಟು ಮಾತನಾಡಿದರು. ವೇದಿಕೆಯಲ್ಲಿ ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ ಎಂಬ ಮಲೆ ಮಹದೇಶ್ವರರ ಭಕ್ತಿಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಿ ಗೀತೆ, ಜಾನಪದ ಗೀತೆ, ಸುಗಮ ಸಂಗೀತ, ಕುಂಚ ಗಾಯನ, ನೀಲಗಾರರ ಪದ, ಸೋಬಾನೆ, ತಂಬೂರಿ ಪದ, ಚಲನಚಿತ್ರ ಗೀತೆಗಳು, ರಂಗ ಗೀತೆಗಳು, ಹೋರಾಟ ಗೀತೆಗಳು, ಹಾಸ್ಯ ಜಾನಪದ, ಭಜನೆ, ವೀರಗಾಸೆ, ಹರಿಕಥೆ, ಗೊರವರ ಕುಣಿತ, ಡೊಳ್ಳು ಕುಣಿತ, ಸ್ಯಾಕ್ರೋಪೋನ್ ವಾದನ, ತತ್ವಪದ, ಭರತನಾಟ್ಯ, ನೃತ್ಯ, ಶಿವತಾಂಡವ ನೃತ್ಯ ನಾಟಕ ಕಲಾ ಪ್ರಕಾರಗಳಿಗೆ ಸಂಬಂಽಸಿದ ಕಲಾ ಪ್ರದರ್ಶನಗಳು ಜರುಗಿದವು.
ವೇದಿಕೆಯಲ್ಲಿ ಕಲಾವಿದ ಮಂಗಲ ಶಿವಣ್ಣ, ಕನ್ನಡಪರ ಸಂಘಟನೆ ಮುಖಂಡ ಚಾ.ರಂ.ಶ್ರೀನಿವಾಸಗೌಡ, ವೇಣುಗೋಪಾಲ್, ಯುವ ಕಲಾವಿದರಾದ ಸಿದ್ದರಾಜು, ಮಂಜು ಶ್ರೀರಾಂ, ದಡದಹಳ್ಳಿ ರಮೇಶ್, ರಾಕ್‌ಗಿರೀಶ್, ಆಲೂರು ದೊರೆಸ್ವಾಮಿ ಜಾನಪದ ಕಲಾವಿದರು ಭಾಗವಹಿಸಿದ್ದರು.

Tags:
error: Content is protected !!