ಹನೂರು : ಲಾರಿ ಮತ್ತು ಟಿಟಿ ವಾಹನದ ನಡುವೆ ಅಪಘಾತವಾಗಿದ್ದು, 12 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ಮಲ್ಲಯ್ಯನಪುರ ಗ್ರಾಮದ ಬಳಿ ಶನಿವಾರ ಮದ್ಯಾಹ್ನ ನಡೆದಿದೆ.
ತಾಲೂಕಿನ ಬೆಂಗಳೂರು ಮೂಲದ ಏಕನಾಥ್ ಟಿ.ಟಿ ವಾಹನ ಚಾಲಕನಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ
ಬೆಂಗಳೂರು ಮೂಲದ ಟಿ.ಟಿ ವಾಹನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂಜೆ ಮುಗಿಸಿ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಹನೂರು ಕಡೆಯಿಂದ ಕೌದಳ್ಳಿ ಕಡೆಗೆ ಬರುತ್ತಿದ್ದ ಮಲ್ಲಯ್ಯನ ಪುರ ಬಳಿ ಲಾರಿ ಹಾಗೂ ಟಿ.ಟಿ ವಾಹನ ಏಕಾಏಕಿ ಮುಖಾ ಮುಖಿ ಡಿಕ್ಕಿಯಾಗಿ ಅಪಘಾತ ಉಂಟಾಗಿದೆ.ಇದರಿಂದ ಟಿ ಟಿ ವಾಹನ ಮುಂಭಾಗ ನಜ್ಜು ಗುಜ್ಜಾಗಿದ್ದು, ಲಾರಿಯ ಮುಂಭಾಗ ಸಹ ನಜ್ಜು ಗುಜ್ಜಾಗಿದೆ. ಅಲ್ಲದೇ ಟಿಟಿ ವಾಹನ ಚಾಲಕನಿಗೆ ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿದ್ದು, ಟಿಟಿ ವಾಹನದಲ್ಲಿದ್ದ 12 ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಇದನ್ನು ಓದಿ:ಗೂಡ್ಸ್ ರೈಲು ಹಾಗೂ ಪ್ಯಾಸೆಂಜರ್ ರೈಲಿನ ನಡುವೆ ಅಪಘಾತ: 6 ಮಂದಿ ಪ್ರಯಾಣಿಕರು ಸಾವು
ಟ್ರಾಫಿಕ್ ಜಾಮ್
ಅಪಘಾತವಾದ ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಎರಡು ಬದಿಯಲ್ಲೂ ಸಹ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ರಾಮಾಪುರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿ ಟ್ರಾಫಿಕ್ ಜಾಮ್ ನ್ನು ನಿಯಂತ್ರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರ್ ಹಾಗೂ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು,ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





