ಗುಂಡ್ಲುಪೇಟೆ: ತಾಲ್ಲೂಕಿನ ಶ್ಯಾನಡ್ರಹಳ್ಳಿ-ಮೂಡಗೂರು ಗ್ರಾಮದ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಮೂಡಗೂರು ಗ್ರಾಮದ ನಾಗರಾಜಪ್ಪ ಎಂಬವರ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು.
ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ಕಾಡಾನೆ ಎಲ್ಲಿಂದ ಬಂತು ಎಂಬುದು ತಿಳಿದುಬಂದಿಲ್ಲ. ಕೂಡಲೇ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿದು ರೈತರ ಫಸಲುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಶ್ಯಾನಡ್ರಹಳ್ಳಿ ಗ್ರಾಮದ ಮುಖಂಡ ಮೃತ್ಯುಂಜಯರವರು ಒತ್ತಾಯಿಸಿದ್ದಾರೆ.
ಗುಂಡ್ಲುಪೇಟೆ ಬಫರ್ ಜೋನ್ ಎಸಿಎಫ್ ಸುರೇಶ್ ಕುಮಾರ್ ಮಾತನಾಡಿ, ಕಾಡಾನೆಯೊಂದು ಬಂದು ಕಬ್ಬಿನ ಗದ್ದೆಯೊಳಗೆ ಸೇರಿಕೊಂಡಿದ್ದು, ಮಧ್ಯಾಹ್ನದ ಸಮಯವಾದ ಕಾರಣ ರೈತರು, ಸಾರ್ವಜನಿಕರು ಜಮೀನಿನಲ್ಲಿ ಕೆಲಸ ಕಾರ್ಯ ಮಾಡುತ್ತಿರುತ್ತಾರೆ. ಕಾರ್ಯಾಚರಣೆ ಮಾಡಿದರೆ ಅಪಾಯ ಎದುರಾಗಬಹುದು. ಹಾಗಾಗಿ ಜಿಲ್ಲಾ ಕೇಂದ್ರದಿಂದ ಸಿಬ್ಬಂದಿ ಕರೆಸಿ ಕಾಡಾನೆ ಓಡಿಸಲು ತಂಡ ರಚಿಸಲಾಗಿದೆ. ಸಂಜೆಯ ನಂತರ ಅದನ್ನು ಹಿಮ್ಮೆಟ್ಟಿಸಲಾಗುವುದು ಎಂದರು.





