Mysore
16
broken clouds

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ಬೆಂಗಳೂರು ಡೈರಿ : ರಾಜ್ಯ ಕಾಂಗ್ರೆಸ್‌ನ ಗೊಂದಲ, ವರಿಷ್ಠರ ಪ್ಲಾನ್ ವಿಫಲ

ಜನವರಿ ಮೊದಲ ವಾರದ ವೇಳೆಗೆ ಪುನಃ ಶುರುವಾಗಲಿದೆ ಬಂಡಾಯದ ಬಿರುಗಾಳಿ

ರಾಜ್ಯ ಕಾಂಗ್ರೆಸ್‌ನ ಗೊಂದಲಕ್ಕೆ ಬ್ರೇಕ್ ಹಾಕಲು ದಿಲ್ಲಿಯ ಕಾಂಗ್ರೆಸ್ ವರಿಷ್ಠರು ಮಾಡಿದ ಯತ್ನ ವಿಫಲವಾಗಿದೆ. ಅಂದ ಹಾಗೆ ಅಧಿಕಾರ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ನಡೆಯುತ್ತಿ ರುವ ಸಂಘರ್ಷವನ್ನು ತಡೆಯಲು ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ವರಿಷ್ಠರು ರಾಜಿ ಸೂತ್ರವನ್ನು ರೂಪಿಸಿದ್ದರು.

ಅದರ ಪ್ರಕಾರ, ಸೂಕ್ತ ಕಾಲದಲ್ಲಿ ಹೈಕಮಾಂಡ್ ನೀಡುವ ಸೂಚನೆಯನ್ನು ನಾವು ಪಾಲಿಸುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಪ್ಪಿಕೊಂಡಿದ್ದಲ್ಲದೆ, ಪರಸ್ಪರ ಉಪಹಾರ ಕೂಟಗಳನ್ನು ಏರ್ಪಡಿಸುವ ಮೂಲಕ ವರಿಷ್ಠರ ರಾಜಿ ಸೂತ್ರಕ್ಕೆ ತಮ್ಮ ಒಪ್ಪಿಗೆಯಿದೆ ಎಂಬ ಸಂದೇಶ ರವಾನಿಸಿದ್ದರು.

ಆದರೆ ಇವರಿಬ್ಬರೂ ಇಂತಹ ಸಂದೇಶ ರವಾನಿಸಿದರೂ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಪಕ್ಷದ ವರಿಷ್ಠರು ರೂಪಿಸಿದ ರಾಜಿ ಸೂತ್ರ ಏನು ಎಂಬುದು ಮಾತ್ರ ಕೊನೆಗೂ ಬಹಿರಂಗವಾಗಲಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಹೈಕಮಾಂಡ್ ವರಿಷ್ಠರು ತರಾತುರಿಯಲ್ಲಿ ಇಂತಹ ರಾಜಿಸೂತ್ರವನ್ನು ರಚಿಸಲು ವಿಧಾನಮಂಡಲ ಅಧಿವೇಶನ ಕಾರಣ. ಡಿ.8ರಿಂದ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಅಧಿಕಾರ ಹಂಚಿಕೆಯ ವಿಷಯ ಕಚ್ಚಾಟಕ್ಕೆ ಕಾರಣವಾಗಬಾರದು ಮತ್ತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಲು ದಾರಿ ಮಾಡಿಕೊಡಬಾರದು ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿತ್ತು.

ಇದನ್ನು ಓದಿ: ಮದ್ಯವ್ಯಸನಕ್ಕೆ ಸಿಲುಕಿದ ಆದಿವಾಸಿಗಳು ; ಆಡಳಿತ ವರ್ಗ ಅರಿವು ಮೂಡಿಸಲಿ

ಆದರೆ ಅವರ ಇಂತಹ ಲೆಕ್ಕಾಚಾರ ವಿಧಾನಮಂಡಲ ಅಧಿವೇಶನ ಆರಂಭವಾದ ದಿನವೇ ತಿರುವು ಮುರುವಾಯಿತು. ಅರ್ಥಾತ್, ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಅವರು ಹೇಳಿಕೆಯೊಂದನ್ನು ನೀಡಿ; ಮುಖ್ಯಮಂತ್ರಿ ಹುದ್ದೆಗಾಗಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ವರಿಷ್ಠರ ಮುಂದೆ ಕೋರಿಕೆ ಇರಿಸಿದ್ದು ನಿಜ. ಆದರೆ ನಾಯಕತ್ವದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ವರಿಷ್ಠರು ತಯಾರಿಲ್ಲ ಅಂತ ಯತೀಂದ್ರ ಅವರೇನು ಹೇಳಿದರೋ ಇದಾದ ನಂತರ ಕ್ಷಿಪ್ರಗತಿಯ ಬೆಳವಣಿಗೆಗಳು ಶುರುವಾಗಿ ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವೇ ತಲೆಕೆಳಗಾಯಿತು.

ಯಾಕೆಂದರೆ ಯತೀಂದ್ರ ಅವರ ಹೇಳಿಕೆಯ ಬೆನ್ನಲ್ಲೇ ಹಲವು ನಾಯಕರು ಹೇಳಿಕೆಗಳನ್ನು ಕೊಡುತ್ತಾ ಒಟ್ಟಾರೆ ವಾತಾವರಣವೇ ಗೊಂದಲಕ್ಕೆ ಕಾರಣವಾಗುವಂತೆ ಮಾಡಿದರು. ಯಾಕೆಂದರೆ ಯತೀಂದ್ರ ಅವರ ಹೇಳಿಕೆಯ ಬೆನ್ನಲ್ಲಿ ರಾಮನಗರದ ಶಾಸಕ ಇಕ್ವಾಲ್ ಹುಸೇನ್ ಅವರು ಹೇಳಿಕೆ ನೀಡಿ; ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಜನವರಿ ಎರಡರ ನಂತರ ಕಾದು ನೋಡಿ ಎಂದರು. ಅರ್ಥಾತ್, ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಮತ್ತು ಡಿಸಿಎಂ ನಡುವೆ ಹೊಂದಾಣಿಕೆಯ ಸೂತ್ರ ರೂಪಿಸಿದ ವರಿಷ್ಠರು ಯಾವ ಕಾಲದಲ್ಲಿ ನಿಮಗೆ ಸಿಎಂ ಹುದ್ದೆ ಸಿಗಬಹುದು? ಎಂದು ಡಿ.ಕೆ. ಶಿವಕುಮಾರ್‌ ಅವರಿಗೆ ಭರವಸೆ ನೀಡಿದ್ದಾರೆ.

ಹಾಗೊಂದು ವೇಳೆ ಅವರು ಭರವಸೆ ನೀಡದಿದ್ದರೆ ಡಿಕೆಶಿ ಕ್ಯಾಂಪಿನ ಮುಂಚೂಣಿಯಲ್ಲಿರುವ ಇಕ್ವಾಲ್ ಹುಸೇನ್ ಅವರು ಯಾಕೆ ಇಂತಹ ಮಾತುಗಳನ್ನಾಡುತ್ತಿದ್ದರು?

ಹೋಗಲಿ ಎಂದರೆ ಇಕ್ವಾಲ್ ಹುಸೇನ್ ಅವರ ಹೇಳಿಕೆಯ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರು ಹೇಳಿಕೆಯೊಂದನ್ನು ನೀಡಿ, ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಹಾಗೊಂದು ಅವರನ್ನು
ವೇಳೆ ಕೆಳಗಿಳಿಸುವುದು ಅನಿವಾರ್ಯವಾದರೆ ಆ ಜಾಗಕ್ಕೆ ಡಿಕೆಶಿ ಮಾತ್ರವಲ್ಲ, ಹಿರಿಯ ಸಚಿವರಾದ ಹೆಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್ ಮತ್ತು ಎಂ.ಬಿ.ಪಾಟೀಲ್ ಅವರೂ ಅರ್ಹರಾಗಿದ್ದಾರೆ ಎಂದರು.

ಇದನ್ನು ಓದಿ : ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಅಷ್ಟೇ ಅಲ್ಲ, ಒಂದು ವೇಳೆ ಡಿಕೆಶಿ ಮುಖ್ಯಮಂತ್ರಿಯಾದರೆ ನಾನು ಅವರ ಸಚಿವ ಸಂಪುಟಕ್ಕೆ ಸೇರ್ಪಡೆ ಆಗುವುದಿಲ್ಲ ಎಂದರು. ಅಂದರೆ? ದಿಲ್ಲಿ ಮಟ್ಟದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಏನಾದರೂ ಚರ್ಚೆ ಎಂಬುದು ನಡೆಯದೇ ಇದ್ದಿದ್ದರೆ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರೇಕೆ ಇಂತಹ ಮಾತನಾಡುತ್ತಿದ್ದರು? ಸಿದ್ದರಾಮಯ್ಯ ಅವರನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದಾಗಿದ್ದರೆ, ಡಿಕೆಶಿ ಸಂಪುಟದಲ್ಲಿ ನಾನು ಸೇರ್ಪಡೆ ಆಗುವುದಿಲ್ಲ ಎಂಬ ಮಾತೇಕೆ ಕೇಳಿ ಬರುತ್ತಿತ್ತು?

ಅದೇ ರೀತಿ ಸಿದ್ದರಾಮಯ್ಯ ಅವರು ಕೆಳಗಿಳಿಯುವುದು ಅನಿವಾರ್ಯವೇ ಆದರೆ ಆ ಜಾಗಕ್ಕೆ ಬರಲು ಹಿರಿಯ ಸಚಿವರಾದ ಹೆಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್ ಮತ್ತು ಎಂ.ಬಿ.ಪಾಟೀಲ್ ಅರ್ಹರಿದ್ದಾರೆ ಎಂಬ ಮಾತುಗಳೇಕೆ ಕೇಳಿ ಬರುತ್ತಿದ್ದವು?
ಹೀಗೆ ಕೆ.ಎನ್.ರಾಜಣ್ಣ ಅವರ ಮಾತಿನಿಂದ ಸೃಷ್ಟಿಯಾದ ಗೊಂದಲ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಮಾತಿನಿಂದ ಇನ್ನಷ್ಟು ಹೆಚ್ಚಾಯಿತು. ಅಂದ ಹಾಗೆ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದೇನು?

ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಲು ಲೋಕೋಪ
ಯೋಗಿ ಸಚಿವ ಸತೀಶ್ ಜಾರಕಿಹೊಳಿ ಅರ್ಹರು. ಯಾಕೆಂದರೆ ಅವರು ಅಹಿಂದ ವರ್ಗಗಳ ಪರವಾಗಿ ಧ್ವನಿ ಎತ್ತಬಲ್ಲರು ಎಂಬುದು ಬಿ.ಕೆ. ಹರಿಪ್ರಸಾದ್ ಅವರ ಮಾತು. ಹೀಗೆ ಹಲವು ಹಿರಿಯ ನಾಯಕರು ಆಡಿದ ಮಾತುಗಳು ಅಧಿಕಾರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದ ಗೊಂದಲ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದ್ದಲ್ಲದೆ, ಅಧಿವೇಶನದ ವೇಳೆಯಲ್ಲಿಗೆ ಪರಿಸ್ಥಿತಿ ಶಾಂತವಾಗಿರಬೇಕು ಎಂದು ಕಾಂಗ್ರೆಸ್ ವರಿಷ್ಠರು ಏನು ಬಯಸಿದ್ದರೋ ಅದು ವಿಫಲವಾಯಿತು.

ಅಂದ ಹಾಗೆ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಬದಲಿಸಲೇಬೇಕು ಎಂದರೆ ಕಾಲ ಪಕ್ವವಲ್ಲ. ಯಾಕೆಂದರೆ ಸದ್ಯದಲ್ಲೇ ಎದುರಾಗಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಅಲ್ಲಿ ಚುನಾವಣೆಗಳಿಗೆ ಹೋಗುವುದು ಸರಳವಲ್ಲ.

ಯಾಕೆಂದರೆ ಈ ಎಲ್ಲ ರಾಜ್ಯಗಳಲ್ಲೂ ಅಹಿಂದ ವರ್ಗಗಳ ಮತದಾರರ ಪ್ರಮಾಣ ಹೆಚ್ಚು. ಹೀಗಿರುವಾಗಿ ಕರ್ನಾಟಕದಲ್ಲಿ ಅಹಿಂದ ವರ್ಗಗಳ ಚಾಂಪಿಯನ್ ಅನಿಸಿಕೊಂಡ ಚಾಂಪಿಯನ್ ಅನ್ನಿಸಿಕೊಂಡ ನಾಯಕ ರೊಬ್ಬರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ಅದನ್ನು ದಕ್ಕಿಸಿಕೊಳ್ಳುವುದು ಸುಲಭವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪಿದರೂ ಪರಿಸ್ಥಿತಿ ಅಷ್ಟು ಸರಳವಾಗಿರಲು ಸಾಧ್ಯವೇ ಇಲ್ಲ.

ಆದರೆ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರಾಡಿದ ಮಾತುಗಳು ಅಧಿಕಾರ ಹಂಚಿಕೆಯ ಗೊಂದಲವನ್ನು ಮತ್ತಷ್ಟು ಹೆಚ್ಚು ಮಾಡಿರುವುದರಿಂದ ಜನವರಿ ಮೊದಲ ವಾರದ ವೇಳೆಗೆ ಪುನಃ ಕರ್ನಾಟಕದಲ್ಲಿ
ಬಂಡಾಯದ ಬಿರುಗಾಳಿ ಶುರುವಾಗಲಿದೆ.

ಯಥಾ ಪ್ರಕಾರ, ಈ ಬಿರುಗಾಳಿಯ ಜವಾಬ್ದಾರಿಯನ್ನೂ ಕಾಂಗ್ರೆಸ್ ವರಿಷ್ಠರೇ ಹೆಗಲ ಮೇಲೆ ಹೊರಬೇಕು.

Tags:
error: Content is protected !!