Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಪ್ರೀತಿಯ ಖಜಾನೆ ಇದ್ದರೆ  ಹಣ, ಆಸ್ತಿ ಸಂಪಾದನೆ ಯಾಕೆ 

senior-citizens

ಸೌಮ್ಯಕೋಠಿ, ಮೈಸೂರು

‘ಮಾಡಿದ್ದುಣ್ಣೋ ಮಹಾ ರಾಯ’ ಎನ್ನುವ ಗಾದೆ ಮಾತಿನಂತೆ ನಾವು ವಯಸ್ಸಿದ್ದಾಗ ಹೇಗೆ ನಡೆದುಕೊಳ್ಳುತ್ತೇವೋ ಹಾಗೆ ವಯಸ್ಸಾದ ಮೇಲೆ ಅದರ ಫಲ ಇರುತ್ತದೆ. ಜಾತಕದಲ್ಲಿ ಏನು ಬರೆದಿದೆ ಎನ್ನುವುದಕ್ಕಿಂತ , ನಮ್ಮ ಕರ್ಮದ ಫಲ ನಮಗೆ ದೊರೆಯುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯವಾದ ಮಾತು. ಜೇನುತುಪ್ಪವನ್ನು ಇಷ್ಟಪಡುವ ಜನ ಜೇನು ನೊಣವನ್ನು ಇಷ್ಟಪಡುವುದಿಲ್ಲ . ನಾವು ಹಾಗೆ ಜೇನು ತುಪ್ಪದ ಹಾಗೆ ನಮ್ಮ ನುಡಿ ಎಷ್ಟು ಸಿಹಿಯಾಗಿರುತ್ತದೆ ನಮ್ಮನ್ನು ಜನ ಅಷ್ಟು ಪ್ರೀತಿಸುತ್ತಾರೆ. ಇವರು ಇರುವುದೇ ಹಾಗೆ ಎಂದು ಬೇರೆಯವರು ಬೇಸರ ಪಡುವ ರೀತಿ ಇರುವುದಕ್ಕಿಂತ ಇದ್ದರೆ ಇವರ ಹಾಗೆ ಇರಬೇಕು ಎನ್ನುವಂತೆ ನಾವು ಆದರ್ಶ ಪ್ರಾಯವಾಗಿ ಇರಬೇಕು.

ಆದರ್ಶ ಅಂದರೆ ಶ್ರೇಷ್ಠತೆ, ಮಾರ್ಗದರ್ಶನ ಅನ್ನುವ ಅರ್ಥ ಬರುವ ಹಾಗೆ ಕನ್ನಡಿಯ ಹಾಗೆ ಅಂತ ಹೇಳುತ್ತಾ ಹೋಗುತ್ತಾರೆ. ರಾಮನ ಹಾಗೆ ನಡೆ , ಅಂದರೆ ಅದರ ಅರ್ಥ ನಾನು ಹೇಗೆ ಕಾಣುತ್ತೇನೆ, ನಾವು ಕನ್ನಡಿಯ ಮುಂದೆ ನಿಂತು ಬೇರೆಯವರನ್ನು ಸರಿಪಡಿಸಲು ಆಗುವುದಿಲ್ಲ,  ಕನ್ನಡಿಯ ಮುಂದೆ ನಿಲ್ಲುವುದು ನನ್ನನ್ನು ನಾನು ಸಿಂಗರಿಸಿಕೊಳ್ಳಲು. ನನ್ನನ್ನು ನಾನು ಸರಿಪಡಿಸಿಕೊಳ್ಳಲು. ಹಾಗೆಯೇ ನಾವೂ ಕೂಡ ನಮ್ಮ ಜೀವನದಲ್ಲಿ ನಮ್ಮನ್ನ ನಾವು ಸುಂದರ ಮಾಡಿಕೊಳ್ಳುವ ಹಾಗೆ ನಡೆದುಕೊಳ್ಳಬೇಕು.

ಆಗಿದ್ದೆಲ್ಲಾ ಆಯಿತು ಎಂದು ಒಮ್ಮೆ ಎಲ್ಲವನ್ನ್ನೂ ಕ್ಷಮಿಸಿ, ಭೂತಕಾಲಕ್ಕೆ ಹೋಗಿ ಯಾವುದನ್ನು ಸರಿಪಡಿಸಲು ಆಗುವುದಿಲ್ಲ. ಆದರೆ ಇದೇ ತಪ್ಪನ್ನು ನಾವು ಮುಂದುವರಿಸಿದಾಗ ಮುಂದಿನ ಜೀವನವೂ   ಹಾಳಾಗುತ್ತದೆ ಎನ್ನುವ ಕಲ್ಪನೆ ನಮಗಿರಬೇಕು.

ಎಲ್ಲವನ್ನೂ ಎಲ್ಲರನ್ನೂ  ಕ್ಷಮಿಸಿ ಒಮ್ಮೆ ನಿಮ್ಮ ಸಂಬಂಧವನ್ನು ನೋಡಿದಾಗ ನಿಮ್ಮ ಸಂಬಂಧಗಳು ಜೀವಂತವಾಗುವ ಸಾಧ್ಯತೆಗಳಿರುತ್ತದೆ . ನೀವು ಬದುಕಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎನ್ನುವುದಕ್ಕಿಂತ ನೀವು ಜನರೊಂದಿಗೆ ಹೇಗೆ ನಡೆದುಕೊಂಡಿದ್ದೀರಿ ಎಂಬುದು ಅವರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ಮಗಳು- ಅಳಿಯ,  ಮಗ -ಸೊಸೆ ,  ಮೊಮ್ಮಕ್ಕಳು,  ಸ್ನೇಹಿತರು ಸಂಬಂಽಗಳು ಅವರನ್ನೆಲ್ಲ ನೀವು ಎಷ್ಟು ಕ್ಷಮಿಸಿದ್ದೀರಿ, ಅವರ ಕಷ್ಟಕ್ಕೆ ಹೇಗೆ ಆದಿರಿ ಎಂಬುದೇ ಅವರ ಮನಸ್ಸಿನಲ್ಲಿ ಉಳಿಯುವ ನೆನಪುಗಳು. ಹಣ,  ಆಸ್ತಿ ಎನ್ನುವುದಕ್ಕಿಂತ ಪ್ರೀತಿಯ ಖಜಾನೆಯೇ ನೀವಾಗುವ ಮಾರ್ಗದಲ್ಲಿ ಒಮ್ಮೆ ನಡೆದು ನೋಡಿ,  ಪ್ರೀತಿಯ ಹಸಿರಿನ ಮಾರ್ಗ ನಿಮ್ಮದಾಗುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಆ ಇಗೋವನ್ನು ಒಮ್ಮೆ ಹೊರಹಾಕಿ ನೋಡಿದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ.

ಹೌದು ಇಷ್ಟು ದಿನ ನೀವು ನಡೆದ ದಾರಿಯಲ್ಲಿ ಹೊಸ ಮಾರ್ಗದಲ್ಲಿ ನಡೆಯುವುದು ಕಷ್ಟ ಆದರೆ ಖಂಡಿತವಾಗಿಯೂ ಅಸಾಧ್ಯವಾದ ಮಾರ್ಗವನ್ನು .  ಸಾಧ್ಯವಾಗಿಸಬಹುದು.ಮಾವಿನ ಬೀಜ ನೆಟ್ಟಾಗ ಮಾತ್ರ ಮಾವು ಬರಲು ಸಾಧ್ಯ, ಬೇವಿನ ಬೀಜವನ್ನು ಬಿತ್ತಿ ಮಾವನ್ನು ಅಪೇಕ್ಷಿಸುವುದು ಮೂರ್ಖತನ. ಅವರು ಬದಲಾಗಲಿ, ಇವರು ಬದಲಾಗಲಿ ಎನ್ನುವುದಕ್ಕಿಂತ ಆ ಬದಲಾವಣೆ ನಿಮ್ಮಿಂದ ಆರಂಭವಾಗಬೇಕು. ಮನೆಯ ಹಿರಿಯರಾಗಿ ಆ ಕೆಲಸವನ್ನು ಒಮ್ಮೆ ಆರಂಭಿಸಿ ನೋಡಿ,  ನಿಮ್ಮ ಮುಂದಿನ ಪೀಳಿಗೆಗೆ ಪ್ರೀತಿಯೆಂಬ ಆಸ್ತಿಯನ್ನು ಹಂಚಿ ಹೋಗಿ ಅವರು ಇರುವವರೆಗೂ ನಿಮ್ಮನ್ನು ನೆನೆಯುತ್ತಾರೆ, ಹೊಸ ದೃಷ್ಟಿಕೋನದಲ್ಲಿ ಯೋಚಿಸಿ.

Tags:
error: Content is protected !!