ಧಾರ್ಮಿಕ ಪರಂಪರೆಯ ಶ್ರೀಕಂಠೇಶ್ವರ ದೇವಾಲಯದಿಂದ ದಕ್ಷಿಣಕಾಶಿ ಎಂದುಪ್ರಖ್ಯಾತವಾದ ನಂಜನಗೂಡು, ಈಗ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದ (ಆರ್ವಿ ಕಾಲೇಜು) ಪ್ರವೇಶದೊಂದಿಗೆ ಶಿಕ್ಷಣ ಕಾಶಿಯಾಗುವತ್ತ ದಾಪುಗಾಲು ಹಾಕುತ್ತಿದೆ.
ತಾಲ್ಲೂಕಿನ ಸುತ್ತೂರಿನ ಜಗದ್ಗುರು ಶಿವರಾತ್ರೀಶ್ವರ ಶಿಕ್ಷಣ ಸಂಸ್ಥೆ (ಜೆಎಸ್ಎಸ್) ಯು ತನ್ನ ಶೈಕ್ಷಣಿಕಸೇವೆಯನ್ನು ಸುತ್ತೂರಿನಿಂದ ಹತ್ತೂರು ದಾಟಿ ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿ ವಿಶ್ವಮಟ್ಟದ ಶೈಕ್ಷಣಿಕ ರಂಗದಲ್ಲಿಯೂ ತನ್ನದೇ ಛಾಪು ಮೂಡಿಸಿ ನಂಜನಗೂಡಿನ ಹೆಸರನ್ನು ವಿಶ್ವವಿಖ್ಯಾತಿಗೇರಿಸಿದ್ದು, ಈಗ ಶೈಕ್ಷಣಿಕ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ.
ಜೆಎಸ್ಎಸ್ ಶೈಕ್ಷಣಿಕ ಸಂಸ್ಥೆ ಇಂದು ೩೩೦ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ಆರಂಭಿಸಿ, ತನ್ನದೇ ಆದ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಿಕೊಂಡು ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಾ ೩ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಅಲ್ಲದೆ, ೪ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿರುವುದು ತಾಲ್ಲೂಕಿನ ಹೆಮ್ಮೆಯಾಗಿದೆ.
ಇದಲ್ಲದೆ, ಹಾಸ್ಟೆಲ್ ಸುಬ್ಬಣ್ಣವರ ಸಾರ್ವಜನಿಕ ಶಿಕ್ಷಣ ಸಂಸ್ಥೆ, ದಿ.ಜಾವೀದ್ ಅಹ್ಮದ್ ಅವರು ಸ್ಥಾಪಿಸಿದ ಸಿಟಿಜನ್ ಶಿಕ್ಷಣ ಸಂಸ್ಥೆ, ಮಂಗಳಾ ಸೋಮಶೇಖರ್ ಅವರ ವಿಸ್ಡಮ್, ಕಾರ್ಮಲ್ ಶಾಲೆ, ಕ್ರೈಸ್ತ ಶಾಲೆ,ರೋಟರಿ, ಲಯನ್, ಗ್ಲೋಬಲ್, ನೀಲಕಂಠೇಶ್ವರ , ಯುನಿಟಿ, ಸಮುದ್ರ, ಭಾರತ್ ವಿಕಾಸ್ ಪರಿಷತ್, ಗೋಕುಲ ಶಿಕ್ಷಣ ಸಂಸ್ಥೆಗಳು ಕೂಡ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ.
ಇಂತಹ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ನಂಜನಗೂಡಿಗೆ ಈಗ ರಾಜ್ಯದ ರಾಜಧಾನಿಯ ದೈತ್ಯ ಶಿಕ್ಷಣ ಸಂಸ್ಥೆ ಆರ್ವಿ ( ರಾಷ್ಟ್ರೀಯ ವಿದ್ಯಾಲಯ) ಕಾಲೇಜು ಹೊಸದಾಗಿ ಪದಾರ್ಪಣೆ ಮಾಡುತ್ತಿದೆ. ನಂಜನಗೂಡಿಗೆ ಪ್ರವೇಶ ಮಾಡುವುದರೊಂದಿಗೆ ತಾಲ್ಲೂಕಿನ ಶೈಕ್ಷಣಿಕ ರಂಗದಲ್ಲಿ ಬೃಹದಾಕಾರವಾಗಿ ವಿಸ್ತಾರ ಗೊಳ್ಳಲು ಸಿದ್ಧತೆ ನಡೆಸಿದೆ. ಆರ್ವಿ ಕಾಲೇಜು ತನ್ನ ಶೈಕ್ಷಣಿಕ ವಸಾಹತುವಾಗಿ ಧಾರ್ಮಿಕ ಕ್ಷೇತ್ರ ಶ್ರೀಕಂಠೇಶ್ವರನ ತವರು ನಂಜನಗೂಡನ್ನು ಆಯ್ಕೆಮಾಡಿಕೊಂಡಿದೆ. ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿ ಮೊದಲ ಹಂತವಾಗಿ ೪೪ ಎಕರೆ ಪ್ರದೇಶದಲ್ಲಿ ತನ್ನ ಶೈಕ್ಷಣಿಕ ಹಬ್ ನಿರ್ಮಿಸುವ ಮೂಲಕ ರಾಷ್ಟ್ರೀಯ ವಿಶ್ವವಿದ್ಯಾಲಯ ಆರಂಭಿಸಲು ಮುಂದಾಗಿದೆ.
ಕಳೆದೆರಡು ತಿಂಗಳುಗಳಿಂದ ಈ ಆರ್ವಿ ಶೈಕ್ಷಣಿಕ ಸಂಸ್ಥೆಯ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ೨೦೨೫ ಡಿಸೆಂಬರ್ ಅಂತ್ಯದೊಳಗೆ ಈ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಚಯದ ಕಾಮಗಾರಿ ಮುಗಿಸಿ ೨೦೨೬ ಆಗಸ್ಟ್ ಹದಿನೈದರಂದುತನ್ನ ಶಿಕ್ಷಣ ಸೇವೆಯನ್ನು ವಿಧ್ಯುಕ್ತವಾಗಿ ಆರಂಭಿಸಲು ಉದ್ದೇಶಿಲಾಗಿದೆ ಎನ್ನಲಾಗಿದ್ದು, ಅದಕ್ಕಾಗಿ ಭಾರಿ ಸಿದ್ಧತೆ ಕೈಗೊಳ್ಳಲಾಗಿದೆ.
ಮುಂದಿನ ವರ್ಷ ಆರಂಭಗೊಳ್ಳುವ ಆರ್ವಿ ವಿಶ್ವವಿದ್ಯಾಲಯದಲ್ಲಿ ಮೊದಲ ಹಂತದಲ್ಲಿ ೨,೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಲಾಗಿದೆ.
ಈ ವರ್ಷದ ಅಂತ್ಯದೊಳಗಾಗಿ ೩೦೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಆರ್ವಿ ವಿಶ್ವವಿದ್ಯಾಲಯ ಮುಂದಾಗುವ ಮೂಲಕ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸುವ ಗುರಿಯನ್ನು ಹೊಂದಿದೆ. ಈ ಶೈಕ್ಷಣಿಕ ಪ್ರಾಂಗಣದಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ರೂಪಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಮಿನಿ ಕ್ರೀಡಾಂಗಣ ಸೇರಿದಂತೆ ಪ್ರಪಂಚದ ಹೆಸರಾಂತ ವಿಶ್ವವಿದ್ಯಾಲಯ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಆ ಮೂಲಕ ವಿದೇಶಗಳಿಗೆ ತೆರಳ ಬಯಸುವ ಭಾರತೀಯ ಪ್ರತಿಭೆಗಳನ್ನು ಇಲ್ಲೇ ಉಳಿಸಿಕೊಳ್ಳಲು ಆರ್ವಿ ಶಿಕ್ಷಣ ಸಂಸ್ಥೆಯ ಆಡಳಿತ ವರ್ಗ ವಿಶೇಷ ಯೋಜನೆಯನ್ನು ರೂಪಿಸಿದೆ.
ಈ ವಿಶ್ವವಿದ್ಯಾಲಯದಲ್ಲಿ ಪ್ಯಾರಾ ಮೆಡಿಕಲ್ನ ವಿವಿಧ ಕೋರ್ಸುಗಳು ಸೇರಿದಂತೆ ಇಂಜಿನಿಯರಿಂಗ್, ಎಂ.ಸಿಎ., ಬಿ.ಇ. (ಎಲೆಕ್ಟ್ರಾನಿಕ್), ಬಿ.ಎಸ್ಸಿ. (ಕಂಪ್ಯೂಟರ್ ಸೈನ್ಸ್), ಬಿ.ಎಸ್ಸಿ. (ಮೆಡಿಸಿನ್ ಸೈನ್ಸ್), ಬಿ.ಬಿ.ಎ., ಸ್ಕೂಲ್ ಆಫ್ ಬಿಸಿನೆಸ್, ಸ್ಕೂಲ್ ಆಫ್ ಡಿಸೈನರ್, ಇಂಟ್ರಿ ಗ್ರೇಟಡ್ ಹೆಲ್ತ್, ಫಿಸಿಯೋ ಥೆರಪಿ, ಯೋಗ ಸೇರಿದಂತೆ ೩೩ಕ್ಕೂ ಹೆಚ್ಚು ಕೋರ್ಸ್ಗಳನ್ನು ಇಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಆರ್ವಿ ವಿಶ್ವವಿದ್ಯಾಲಯದ ಕಾರ್ಯಾರಂಭದ ಜೊತೆಗೆ ವಿಶ್ವ ಭೂಪಟದಲ್ಲಿ ಧಾರ್ಮಿಕ, ಕೈಗಾರಿಕಾ ಕೇಂದ್ರವೆಂದು ಗುರುತಿಸಿಕೊಂಡಿರುವ ದಕ್ಷಿಣಕಾಶಿ ನಂಜನಗೂಡು, ಶೈಕ್ಷಣಿಕ ಕಾಶಿಯಾಗಿಯೂ ಗುರುತಿಸಿಕೊಳ್ಳಲಿದೆ.
“ಕಳೆದೆರಡು ತಿಂಗಳುಗಳಿಂದ ಈ ಆರ್ವಿ ಶೈಕ್ಷಣಿಕ ಸಂಸ್ಥೆಯ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.೨೦೨೫ ಡಿಸೆಂಬರ್ ಅಂತ್ಯದೊಳಗೆ ಈ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಚಯದ ಕಾಮಗಾರಿ ಮುಗಿಸಿ ೨೦೨೬ ಆಗಸ್ಟ್ ೧೫ರಂದು ತನ್ನ ಶಿಕ್ಷಣ ಸೇವೆಯನ್ನು ವಿಧ್ಯುಕ್ತವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದ್ದು, ಅದಕ್ಕಾಗಿ ಭರದ ಸಿದ್ಧತೆ ನಡೆದಿದೆ.”
– ಶ್ರೀಧರ್ ಆರ್. ಭಟ್





