Mysore
20
overcast clouds
Light
Dark

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹೆಚ್ಚುವರಿ 900 ಯೋಧರನ್ನು ರವಾನಿಸಿದ ಕೇಂದ್ರ ಸರ್ಕಾರ

ಇಂಫಾಲ್ (ಮಣಿಪುರ) : ಮಣಿಪುರ ಗಲಭೆ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ರಾಜ್ಯಾದ್ಯಂತ ಕುಕಿ ಹಾಗೂ ಮೀಟಿ ಸಮುದಾಯಗಳು ಮತ್ತೊಮ್ಮೆ ಘರ್ಷಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 900ಕ್ಕೂ ಹೆಚ್ಚು ಭದ್ರತಾ ಪಡೆ ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಿದೆ.

ಕೇಂದ್ರ ಸರ್ಕಾರದ ಗೃಹ ಸಚಿವಾಲಯವು 10ಕ್ಕೂ ಹೆಚ್ಚು ಕಂಪನಿಗಳ 900ಕ್ಕೂ ಹೆಚ್ಚು ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಿದೆ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ 900 ಯೋಧರ ಪೈಕಿ ಪ್ಯಾರಾ ಮಿಲಿಟರಿ ಪಡೆ, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಹಾಗೂ ಎಸ್‌ಎಸ್‌ಬಿ ಪಡೆಗಳ ಯೋಧರೂ ಸೇರಿದ್ದಾರೆ.

ಶನಿವಾರ ರಾತ್ರಿಯೇ 900 ಯೋಧರು ಮಣಿಪುರ ರಾಜಧಾನಿ ಇಂಫಾಲ್‌ಗೆ ಆಗಮಿಸಿದ್ದಾರೆ. ಮಣಿಪುರ ರಾಜ್ಯದ ಹಲವು ಜಿಲ್ಲೆಗಳಿಗೆ ಈ ಯೋಧರನ್ನು ರವಾನಿಸಲಾಗಿದೆ. ಭಾನುವಾರದಿಂದಲೇ ಈ ಯೋಧರು ಕಾರ್ಯಾರಂಭ ಮಾಡಿದ್ದಾರೆ.

ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೆ 40 ಸಾವಿರಕ್ಕೂ ಹೆಚ್ಚು ಸೇನಾ ಪಡೆ ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಶತಾಯಗತಾಯ ಹಿಂಸಾಚಾರನ್ನು ಹತ್ತಿಕ್ಕಲೇ ಬೇಕು ಎಂದು ನಿರ್ಧರಿಸಿದ್ದು, ಅಸ್ಸಾಂ ರೈಫಲ್ಸ್, ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆ ಸೇರಿದಂತೆ ಹಲವು ವಿಭಾಗಗಳ ಯೋಧರನ್ನು ಮಣಿಪುರದಲ್ಲಿ ನಿಯೋಜನೆ ಮಾಡಿದೆ.

ಇತ್ತ ಮಣಿಪುರದಲ್ಲಿ ಇರುವ ಮೀಟಿ ಹಾಗೂ ಕುಕಿ ಸಮುದಾಯಗಳ ನಾಯಕರು ರಾಜ್ಯದ ಪೊಲೀಸ್ ಪಡೆ ಹಾಗೂ ಕೇಂದ್ರೀಯ ಪಡೆಗಳು ನಮ್ಮ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದ್ದಾರೆ. ಕೆಲವು ಮಹಿಳಾ ಸಂಘಟನೆಗಳು ಭದ್ರತಾ ಪಡೆಗಳ ಕಾರ್ಯಾಚರಣೆಗೆ ತೊಡಕು ಉಂಟು ಮಾಡುತ್ತಿದ್ದಾರೆ. ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ಸೇನಾ ಪಡೆಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಲಾಗುತ್ತಿದೆ.

ಈ ನಡುವೆ ಮಣಿಪುರ ಪೊಲೀಸರು ರಾಜ್ಯಾದ್ಯಂತ ಸರ್ಕಾರಿ ಶಸ್ತ್ರಾಗಾರಗಳಿಂದ ಲೂಟಿ ಮಾಡಲಾಗಿದ್ದ 1,195 ಶಸ್ತ್ರಾಸ್ತ್ರಗಳು ಹಾಗೂ 14,322 ಮದ್ದು ಗುಂಡುಗಳನ್ನು ಮೀಟಿ ಹಾಗೂ ಕುಕಿ ಸಮುದಾಯದ ಪ್ರತಿಭಟನಾಕಾರರಿಂದ ವಶಕ್ಕೆ ಪಡೆದಿದ್ದಾರೆ. ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಸಂಘರ್ಷ ಆರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೆ 4 ಸಾವಿರಕ್ಕೂ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಲಕ್ಷಾಂತರ ಮದ್ದು ಗುಂಡುಗಳನ್ನು ಸರ್ಕಾರಿ ಶಸ್ತ್ರಾಗಾರಗಳು ಹಾಗೂ ಪೊಲೀಸ್ ಠಾಣೆಗಳಿಂದ ಕಳ್ಳತನ ಮಾಡಲಾಗಿದೆ.

ಮಣಿಪುರದಲ್ಲಿ ಗಲಭೆ ಆರಂಭವಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಹಲವು ಬಾರಿ ಮಣಿಪುರಕ್ಕೆ ಭೇಟಿ ನೀಡಿ ಭದ್ರತಾ ಸ್ಥಿತಿಯ ಅವಲೋಕನ ನಡೆಸಿದ್ದಾರೆ. ವಿವಿಧ ಸಮುದಾಯಗಳ ಜೊತೆ ಮಾತುಕತೆ ಕೂಡಾ ನಡೆಸಿದ್ದಾರೆ. ಇತ್ತ ವಿಪಕ್ಷ ಇಂಡಿಯಾ ಮೈತ್ರಿ ಕೂಟದ ಸಂಸದರ ನಿಯೋಗ ಕೂಡಾ ಇತ್ತೀಚೆಗಷ್ಟೇ ಮಣಿಪುರದಲ್ಲಿ ಅವಲೋಕನ ನಡೆಸಿ ಸರ್ಕಾರದ ಲೋಪ ದೋಷಗಳತ್ತ ಬೊಟ್ಟು ಮಾಡಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ