Mysore
23
overcast clouds

Social Media

ಶುಕ್ರವಾರ, 12 ಜೂನ್ 2026
Light
Dark

ನಂದಿನಿ ಜೊತೆ ಸ್ಪರ್ಧೆಯಿಲ್ಲ : ಅಮುಲ್‌ ಎಂಡಿ ಜಯನ್‌ ಮೆಹ್ತಾ

ನವದೆಹಲಿ : ಕರ್ನಾಟಕದ ಡೈರಿ ಮಾರುಕಟ್ಟೆಗೆ ಅಮುಲ್‌ ಪ್ರವೇಶಿಸುತ್ತಿರುವುದು ನಂದಿನಿ ಬ್ರಾಂಡ್‌ನೊಂದಿಗೆ ಸ್ಪರ್ಧಿಸಲು ಅಲ್ಲ. ಬದಲಿಗೆ ಸಹಬಾಳ್ವೆ ನಡೆಸಲು ಇನ್ನೂ 10 ವರ್ಷಗಳವರೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವೇ ಇಲ್ಲ ಎಂದು ಅಮುಲ್‌ ಬ್ರ್ಯಾಂಡ್‌ನ್ನು ಮುನ್ನಡೆಸುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ.

ಒಂದೆಡೆ ಕರ್ನಾಟಕದಲ್ಲಿ ಡೈರಿ ದೈತ್ಯ ಅಮುಲ್‌ನ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ರಾಜಕೀಯ, ಸಾಮಾಜಿಕ ನಾಯಕರು ಕರೆ ನೀಡಿದ್ದರೆ, ಇನ್ನೊಂದೆಡೆ ಅಮುಲ್‌ Vs ನಂದಿನಿ ಗದ್ದಲ ತಾರಕಕ್ಕೇರಿದೆ. ಇಂಥಹ ಮಹತ್ವದ ಸಂದರ್ಭದಲ್ಲಿ ಆಂಗ್ಲ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಜಯನ್‌ ಮೆಹ್ತಾ ಕರ್ನಾಟಕದಲ್ಲಿ ಅಮುಲ್‌ನ ವಹಿವಾಟಿನ ಆಳ-ಅಗಲ, ಗುರಿ-ಉದ್ದೇಶಗಳನ್ನು ಬಿಚ್ಚಿಟ್ಟಿದ್ದಾರೆ.

ಅಮುಲ್‌ ವರ್ಸಸ್‌ ನಂದಿನಿ ಅಲ್ಲ : ಇದು ಅಮುಲ್ ವರ್ಸಸ್ ನಂದಿನಿ ಅಲ್ಲ. ಬದಲಿಗೆ ಅಮುಲ್ ಮತ್ತು ನಂದಿನಿ. ಇವೆರಡೂ ಒಂದೇ ರೀತಿಯ ಹಿತಾಸಕ್ತಿಗಳ ಮೇಲೆ ಕೆಲಸ ಮಾಡುತ್ತಿರುವ ರೈತರ ಮಾಲಿಕತ್ವದ ಸಹಕಾರಿ ಸಂಸ್ಥೆಗಳು. ನಾವಿಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮುಲ್ ಬಹಿಷ್ಕರಿಸಿ ಮತ್ತು ಗೋಬ್ಯಾಕ್ ಅಮುಲ್ ನಂತಹ ಘೋಷಣೆಗಳಿಗೆ ಪ್ರತಿಕ್ರಿಯಿಸಿರುವ ಮೆಹ್ತಾ, ನಮ್ಮ ದಾರಿಯಲ್ಲಿ ಬರುವ ಪ್ರತಿಕ್ರಿಯೆಗಳನ್ನು ನಾವು ಟೀಕಿಸಲು ಆಗಲ್ಲ. ನಮ್ಮನ್ನು ವಿರೋಧಿಸುವವರು ಕೂಡ ನಮ್ಮ ಗ್ರಾಹಕರೇ. ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಅವರು ಸ್ವತಂತ್ರರು. ಆದರೆ ನಂದಿನಿ ಮತ್ತು ಅಮುಲ್ ನಡುವಿನ ಉತ್ತಮ ಬಾಂಧವ್ಯವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಹಲವು ವಿಚಾರಗಳಲ್ಲಿ ನಾವು ನಂದಿನಿಯೊಂದಿಗೆ ಕೈ ಜೋಡಿಸಿದ್ದೇವೆ. ಕಳೆದ ಒಂದು ದಶಕದಿಂದ ಬೆಂಗಳೂರಿನ ಮದರ್ ಡೈರಿ ಪ್ಲಾಂಟ್‌ನಲ್ಲಿ ನಂದಿನಿ ಹಾಲನ್ನು ಬಳಸಿಯೇ ನಾವು ಅಮುಲ್ ಐಸ್ ಕ್ರೀಂ ತಯಾರಿಸುತ್ತಿದ್ದೇವೆ. ನಮಗೆ ಚೀಸ್‌ನ ಕೊರತೆ ಇದ್ದಾಗ ನಾವು ನಂದಿನಿಯಿಂದಲೇ ಚೆಡ್ಡಾರ್ ಚೀಸ್ ಖರೀದಿಸಿದ್ದೇವೆ ಎಂದು ಹೇಳಿದ್ದಾರೆ.ಅಮುಲ್‌ ಹಾಲು ಮತ್ತು ಮೊಸರನ್ನು ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಕೆ ಮಾಡುವುದನ್ನು ತಳ್ಳಿ ಹಾಕಿರುವ ಅವರು, ಕಂಪನಿಯು ಬೆಂಗಳೂರಿನಲ್ಲಿ ಇ-ಕಾಮರ್ಸ್ ಮತ್ತು ಕ್ವಿಕ್‌ ಕಾಮರ್ಸ್‌ ವೇದಿಕೆಗಳ ಮೂಲಕ ಮಾತ್ರ ಹಾಲು ಹಾಗೂ ಮೊಸರನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!