Mysore
25
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಪ್ರಧಾನಿ ಉದ್ಘಾಟಿಸಿದ ಮೆಟ್ರೋ ಸ್ಟೇಷನ್‌ ಮಳೆಗೆ ಜಲಾವೃತ: ನೆಟ್ಟಿಗರ ಆಕ್ರೋಶ

ಬೆಂಗಳೂರು : ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ನಲ್ಲೂರು ಹಳ್ಳಿ ಮೆಟ್ರೋ ಸ್ಟೇಷನ್‌ ಮಂಗಳವಾರ ಸುರಿದ ಮಳೆಗೆ ಜಲಾವೃತಗೊಂಡಿದ್ದು, ಟ್ವೀಟ್ಟರ್‌ನಲ್ಲಿ ಮೆಟ್ರೋ ಸ್ಟೇಷನ್‌ ಒಳಗಡೆ ನೀರು ನಿಂತ ಪೋಟೋ ಹಂಚಿಕೊಂಡ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣ ಸಮಯವನ್ನು ಕಡಿತಗೊಳಿಸುವ ಉದ್ದೇಶದಿಂದ ವೈಟ್‌ಫೀಲ್ಡ್‌ನಿಂದ ಕೆ.ಆರ್‌.ಪುರಂವರೆಗೆ ‌13.71 ಕಿಮೀ ಉದ್ದದ ಮೆಟ್ರೋ ಸೇವೆಯನ್ನು ಬಿಎಂಆರ್‌ಸಿಎಲ್ ಪ್ರಾರಂಭಿಸಿದ್ದು, ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಈ ಮಾರ್ಗದ ಕಾಮಗಾರಿಗೆ ಸುಮಾರು 4,249 ಕೋಟಿ ವೆಚ್ಚ ಮಾಡಲಾಗಿತ್ತು.

ನಲ್ಲೂರು ಮೆಟ್ರೋ ಸ್ಟೇಷನ್‌ನ ಟಿಕೆಟ್‌ ಕೌಂಟರ್‌ ಹಾಗೂ ಪ್ಲಾಟ್‌ ಫಾರ್ಮ್‌ನ ಮೇಲೆ ನೀರು ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಉದ್ಘಾಟನೆಗೊಂಡ ಕೇವಲ ಹತ್ತು ದಿನಕ್ಕೆ ಹೀಗಾಗಿರುವುದನ್ನು ಕಂಡು ಜನರು ಅಸಮಾಧಾನ ಹೊರಹಾಕಿದ್ದಾರೆ.

ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಟ್ವೀಟಿಗರೊಬ್ಬರು, ‘ಒಂದು ಸಣ್ಣ ಮಳೆಗೆ ನೀರು ಸ್ಟೇಷನ್‌ನ ಒಳಗೆ ನುಗ್ಗಿದೆ ಎಂದರೆ ಮಳೆಗಾಲದಲ್ಲಿ ಗತಿಯೇನು?. ಎರಡು ನಿಮಿಷದ ಹೆಡ್‌ಲೈನ್‌ಗೋಸ್ಕರ ಅಪೂರ್ಣವಾಗಿರುವ ಮೆಟ್ರೋ ಸ್ಟೇಷನ್‌ನನ್ನು ಪ್ರಧಾನಿಯಿಂದ ಉದ್ಘಾಟನೆ ಮಾಡಲಾಯಿತೇ? ‘ಎಂದು ಪ್ರಶ್ನಿಸಿದ್ದಾರೆ.

‘ಕಾಮಗಾರಿಗಳನ್ನು ಸರಿಯಾಗಿ ಪೂರ್ಣಗೊಳಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದಾಗ ಇಂತಹ ಅನಾಹುತಗಳು ಸಂಭವಿಸುತ್ತವೆ‘ ಎಂದು ಇನ್ನೊಬ್ಬ ಟ್ವೀಟಿಗರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರದ ಮಳೆಗೆ ವಿಮಾನ ಸೇವೆಗಳನ್ನು ರದ್ದುಪಡಿಸಲಾಗಿತ್ತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!