ಸೋನಿಯಾ ಎಮ್.ವಿ.,
ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್
ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ಪ್ರಸಿದ್ಧರಾದವರು. ೧೯೨೬ರ ಕರ ನಿರಾಕರಣೆ ಚಳುವಳಿಯಲ್ಲಿ ನಂತರ ಸಿರಸಿ-ಸಿದ್ಧಾಪುರದಲ್ಲಿ ನಡೆದ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆವಾಸವನ್ನು ಅನುಭವಿಸಿದ್ದರು. ಎಲ್ಲ ಚಟುವಟಿಕೆಗಳಲ್ಲಿ ಗಂಡನನ್ನೆ ಅನುಸರಿಸುತ್ತಿದ್ದ ಸುಬ್ಬಮ್ಮನವರಿಗೂ ಸೆರೆವಾಸದ ಅನಭವವಾಗಿತ್ತು.
ಮೈಸೂರಿನ ಮನೆಗೆ ಹಿಂತಿರುಗಿದಾಗ ಸಂಪ್ರದಾಯವಾದಿಗಳಾಗಿದ್ದ ಮನೆಯವರು ಸೆರೆಮನೆಗೆ ಹೋಗಿದ್ದ ಈ ದಂಪತಿಗಳನ್ನು ಸ್ವೀಕರಿಸದೆ, ಕೆಲವು ತಿಂಗಳವರೆಗೆ ಮನೆಯ ಜಗುಲಿಯಲ್ಲಿ ಇವರಿಬ್ಬರೂ ನೆಲಸ ಬೇಕಾಗಿತ್ತು. ಜೋಯಿಸರ ತಾಯಿ ಅವರಿಬ್ಬರಿಗೂ ಅಲ್ಲಿಯೇ ಊಟ ಬಡಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಜೋಯಿಸರ ತಾಯಿ ಸುಬ್ಬಮ್ಮನವರನ್ನು ಕನಿಕರಿಸಿ ಇಬ್ಬರನ್ನು ಮನೆಯೊಳಗೆ ಬರಮಾಡಿಕೊಂಡಿದ್ದರು.
೧೯೨೯ರಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಪ್ರತಿಭಠಟಿಸಲು ರಾಷ್ಟ್ರೀಯ ಕಾಂಗ್ರೆಸ್ ತನ್ನ ಲಾಹೋರ್ ಅಧಿವೇಶನದಲ್ಲಿ ಇನ್ನು ಮುಂದೆ ಪ್ರತಿವರ್ಷ ಜನವರಿ ೨೬ರಂದು ಸ್ವತಂತ್ರ ದಿನಾಚರಣೆಯನ್ನು ಆಚರಿಸಲು ಮತ್ತು ತಮ್ಮ ತ್ರಿವರ್ಣಧ್ವಜವನ್ನು ಹಾರಿಸಲು ನಿರ್ಧರಿಸಿದ್ದರು. ಅದರಂತೆ ಪ್ರತಿವರ್ಷ ಜನವರಿ ೨೬ರನ್ನು ಸ್ವತಂತ್ರ ದಿನಾಚರಣೆ ಯಾಗಿ ಆಚರಿಸಲು ಮತ್ತು ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಧರಿಸಲಾಯಿತು.
ಅದರಂತೆ ಮೈಸೂರಿನ ಕಾಂಗ್ರೆಸ್ಸಿಗರೂ, ಸ್ವತಂತ್ರ ಹೋರಾಟದ ಮುಂಚೂಣಿಯಲ್ಲಿ ಕಂಡು ಬರುತ್ತಿದ ಎಮ್.ಎನ್.ಜೋಯಿಸರು ಮತ್ತವರ ಅನುಯಾಯಿಗಳು ಪೋಲಿಸರ ವಿರೋಧದ ನಡುವೆಯೂ ಮೈಸೂರಿನ ಯಾವುದಾದರು ಒಂದು ಭಾಗದಲ್ಲಿ ಧ್ವಜವನ್ನು ಹಾರಿಸಿ ಮೆರವಣಿಗೆ ಹೋಗುತ್ತಿದ್ದರು. ಪೋಲಿಸರು ಅವರನ್ನು ಹಲವು ಬಾರಿ ಬಂಽಸಿ, ಎಚ್ಚರಿಸಿದ್ದರು. ಇದು ಪ್ರತಿವರ್ಷದ ಕಥೆಯಾಯಿತು.
೧೯೩೮ರಲ್ಲಿ ಮದ್ದೂರಿನ ಬಳಿಯ ಶಿವಪುರದಲ್ಲಿ ಮೈಸೂರ್ ಕಾಂಗ್ರೆಸ್ ಸ್ಥಾಪನೆಯಾಗಿ ಅಲ್ಲಿ ನಡೆದ ಧ್ವಜ ಸತ್ಯಾಗ್ರಹದ ಕಾರಣ ಕಾಂಗ್ರೆಸ್ನ ಎಲ್ಲಾ ಪ್ರಮುಖ ನಾಯಕರೂ ಬಂಽತರಾಗಿದ್ದರು. ಎಮ್ ಎನ್ ಜೋಯಿಸರು ಸೆರೆಯಲ್ಲಿದ್ದರು. ಜನವರಿ ೨೬ ಸಮೀಪಿಸುತ್ತಿದ್ದಂತೆ ಸುಬ್ಬಮ್ಮನವರಿಗೆ ತಳಮಳ. ಈ ವರ್ಷ ಧ್ವಜ ಹಾರಿಸುವ ಕ್ರಮ ನಿಂತು ಹೋಗಬಾರದೆಂಬ ಬಲವಾದ ಅನಿಸಿಕೆ. ಹೇಗಾದರೂ ಧ್ವಜವನ್ನು ಹಾರಿಸಲೇಬೇಕೆಂಬ ನಿರ್ಧಾರ.
ಆ ದಿನ ಬರುತ್ತಿದ್ದಂತೆ ಸುಬ್ಬಮ್ಮನವರು ತಮ್ಮ ಆಳು ಹುಡುಗನ ಜೊತೆ ತಮ್ಮ ಬಳಿಯಿದ್ದ ತ್ರಿವರ್ಣ ಬಾವುಟದೊಂದಿಗೆ ಮನೆಯ ಸಮೀಪದ ಸುಬ್ಬರಾಯನ ಕೆರೆಗೆ ಬಂದರು. ನಿಷೇದಾಜ್ಞೆ ಇದ್ದದರಿಂದ ಪೋಲಿಸರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಆದರು ಸುಬ್ಬಮ್ಮನವರು ಅಳುಕದೆ ಜೊತೆಯಿದ್ದ ಹುಡುಗನಿಗೆ ಉದ್ದನೆಯ ಗಳ ಹೂಳಲು ಹೇಳಿ ಅದರ ಮೇಲೆ ತ್ರಿವರ್ಣ ಧ್ವಜವನ್ನು ಕಟ್ಟಿ ಮೇಲೆತ್ತಿದರು. ಅಂದು ಮೈಸೂರಿನಲ್ಲಿ ಸ್ವತಂತ್ರ ಹೋರಾಟದ ಪ್ರತೀಕದ ತ್ರಿವರ್ಣಧ್ವಜ ಹಾರಿಸಿದ ಕೀರ್ತಿ ಸುಬ್ಬಮ್ಮನವರದಾಯಿತು. ಪೋಲಿಸರಿಗೆ ಏನು ನಡೆಯುತ್ತಿದೆ ಎಂಬ ಅರಿವಾಗುವ ವೇಳೆಗೆ ತ್ರಿವರ್ಣ ಧ್ವಜ ಮೇಲೆ ಹಾರುತ್ತಿತ್ತು.
ಪೋಲಿಸರು ಸುಬ್ಬಮ್ಮನವರನ್ನೂ, ಆಳು ಹುಡುಗನ್ನನು ಬಂಧಿಸಿ, ಎಚ್ಚರಿಸಿ ಕಳುಹಿಸಿದರು. ತಮ್ಮ ಸಮಯ ಪ್ರಜ್ಞೆಯಿಂದ ದೇಶಪ್ರೇಮ ತುಂಬಿದ್ದ ಸುಬ್ಬಮ್ಮನವರು ಮೈಸೂರಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಪ್ರತಿಭಟನೆ ತೋರಿದ ಪ್ರಥಮ ಮಹಿಳೆಯಾದರು. ಇಂದು ಆ ಸ್ಥಳ ನಗರದ ಮಧ್ಯಭಾಗದ ಶಾಂತಲ ಸರ್ಕಲ್ ಬಳಿಯಿರುವ ಸುಬ್ಬರಾಯನಕೆರೆ ಉದ್ಯಾನ, ಸ್ವಾತಂತ್ರ್ಯವೀರರ ನೆನಪಿನಲ್ಲಿ ಗಾಂಧಿಜಿಯವರ ಉಪ್ಪಿನ ಸತ್ಯಾಗ್ರಹಕ್ಕಾಗಿ ನಡೆಸಿದ ದಂಡಿ ಮೆರವಣಿಗೆಯ ಪ್ರತಿಕೃತಿಯನ್ನು ನಿಲ್ಲಿಸಲಾಗಿದೆ.




