Mysore
22
broken clouds

Social Media

ಸೋಮವಾರ, 29 ಜೂನ್ 2026
Light
Dark

ಮಣಿಪುರ ಹಿಂಸಾಚಾರ ತನಿಖೆ ಆಮೆಗತಿಯಲ್ಲಿ ನಡೆಯುತ್ತಿದೆ: ಸುಪ್ರೀಂಕೋರ್ಟ್ ಅಸಮಾಧಾನ

ನವದೆಹಲಿ : ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿನ ಹಿಂಸಾಚಾರ ಘಟನೆಗಳ ಕುರಿತ ತನಿಖೆಯು ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿದೆ ಎಂದು scroll.in ವರದಿ ಮಾಡಿದೆ.

ಜನಾಂಗೀಯ ಸಂಘರ್ಷದ ಕುರಿತು ನಡೆಯುತ್ತಿರುವ ಕೇಂದ್ರ ತನಿಖಾ ದಳದ ತನಿಖೆಯ ಮೇಲುಸ್ತುವಾರಿ ವಹಿಸುವಂತೆ ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರೀಕ್ಷಕ ದತ್ತಾತ್ರಯ್ ಪಡ್ಸಲ್ಗಿಕರ್ ಅವರಿಗೆ ಸೂಚನೆ ನೀಡಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ಸೋಮವಾರ ಸುಪ್ರೀಂಕೋರ್ಟ್ ಆದೇಶಿಸಿದ್ದು, ವಿವರವಾದ ಆದೇಶವು ಗುರುವಾರವಷ್ಟೇ ಸಾರ್ವಜನಿಕಗೊಂಡಿದೆ.

“ನ್ಯಾಯಪೀಠದ ಮುಂದಿರುವ ಸಾಕ್ಸ್ಯಗಳು ಹತ್ಯೆ, ಅತ್ಯಾಚಾರ, ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಶೂನ್ಯ ಪ್ರಾಥಮಿಕ ಮಾಹಿತಿ ವರದಿ ದಾಖಲೆಯನ್ನು ಒಳಗೊಂಡಿರುವ ಘಟನೆಗಳ ನಡುವೆ ಗಮನಾರ್ಹವಾದ ವಿಳಂಬವಾಗಿದೆ ಎಂಬುದನ್ನು ಸೂಚಿಸುತ್ತಿವೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.

ಸಾಮಾನ್ಯವಾಗಿ ಅಪರಾಧ ಘಟಿಸಿದ ಪ್ರದೇಶದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಬೇಕಾಗುತ್ತದೆ. ಆದರೆ, ಯಾವುದೇ ಪೊಲೀಸ್ ಠಾಣೆಯಲ್ಲಾದರೂ ಶೂನ್ಯ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಬಹುದಾಗಿದ್ದು, ನಂತರ ಆ ದೂರನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾಗುತ್ತದೆ.

ಘಟನೆಗಳು ನಡೆದ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಶೂನ್ಯ ಪ್ರಾಥಮಿಕ ಮಾಹಿತಿ ವರದಿಗಳನ್ನು ವರ್ಗಾಯಿಸುವಲ್ಲಿ ಗಮನಾರ್ಹ ವಿಳಂಬವಾಗಿದೆ ಎಂದೂ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 161 (ಪೊಲೀಸರಿಂದ ಸಾಕ್ಷಿದಾರರ ವಿಚಾರಣೆ) ಹಾಗೂ ಸೆಕ್ಷನ್ 164 (ಮ್ಯಾಜಿಸ್ಟ್ರೇಟ್ ಎದುರು ನೀಡಲಾಗುವ ತಪ್ಪೊಪ್ಪಿಗೆ ಹೇಳಿಕೆಗಳು) ಅನ್ವಯ ದಾಖಲಿಸಿಕೊಂಡಿರುವ ಸಾಕ್ಷಿಗಳ ಹೇಳಿಕೆಗಳು ವಿಳಂಬಗೊಂಡಿವೆ ಹಾಗೂ ಆ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಲ್ಲಿ ಶ್ರದ್ಧೆಯ ಕೊರತೆಯನ್ನು ಕಾಣಬಹುದಾಗಿದೆ ಎಂಬುದರತ್ತಲೂ ಸುಪ್ರೀಂಕೋರ್ಟ್ ಬೊಟ್ಟು ಮಾಡಿದೆ.

ಲೈಂಗಿಕ ಹಿಂಸಾಚಾರವನ್ನು ತಡೆಯುವುದು ಮತ್ತು ಅಂತಹ ಅಪರಾಧ ಕ್ರಿಯೆಗಳಿಗೆ ಒಳಗಾದವರಿಗೆ ರಕ್ಷಣೆ ಒದಗಿಸುವುದು ಯಾವುದೇ ಸರ್ಕಾರದ ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದೂ ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!