Mysore
29
overcast clouds

Social Media

ಶನಿವಾರ, 13 ಜೂನ್ 2026
Light
Dark

ಕೋಲಾರ: ಮೋದಿ ಸರ್ಕಾರಕ್ಕೆ ರಾಹುಲ್‍ ಗಾಂಧಿ ಸವಾಲ್

ಬೆಂಗಳೂರು: ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಮೊದಲು 2011ರ ಗಣತಿಯಲ್ಲಿ ಸಂಗ್ರಹಿಸಲಾಗಿರುವ ಜಾತಿವಾರು ಮಾಹಿತಿಯನ್ನು ಬಹಿರಂಗ ಪಡಿಸಿ, ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಿ, ಮೀಸಲಾತಿಗೆ ಜಾರಿಯಲ್ಲಿರುವ ಶೇ.50ರಷ್ಟು ಗರಿಷ್ಠ ಮಿತಿಯನ್ನು ತೆಗೆದು ಹಾಕಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೋಲಾರದಲ್ಲಿ ಜೈಭಾರತ್ ಯಾತ್ರೆಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಸಂಸತ್ ಕಲಾಪ ನಡೆಸಲು ಅಡ್ಡಿ ಪಡಿಸಿದೆ. ಬಿಜೆಪಿ ಸಂಸದರು, ಸಚಿವರು ನನ್ನ ವಿರುದ್ಧ ಸುಳ್ಳು ಹೇಳುತ್ತಾ ಗಲಾಟೆ ಮಾಡಿ, ಅಪಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.

ಯಾವುದೇ ಸದಸ್ಯನ ವಿರುದ್ಧ ಆರೋಪ ಮಾಡಿದಾಗ ಸ್ಪಷ್ಟನೆ ನೀಡಲು ಅವಕಾಶ ನೀಡುವುದು ಸಂಸತ್ ನಿಯಮಗಳಲ್ಲಿದೆ. ನಾನು ಸಭಾಧ್ಯಕ್ಷರಿಗೆ ಎರಡು ಪತ್ರ ಬರೆದು ಸಂಸತ್‍ನಲ್ಲಿ ಉತ್ತರ ನೀಡಲು ಅವಕಾಶ ಕೇಳಿದೆ. ನಂತರ ನಾನು ಸಭಾಧ್ಯಕ್ಷರ ಕಚೇರಿಗೂ ಹೋಗಿ ಸಂಸತ್‍ನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಅದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು ನಾನು ಏನು ಮಾಡಲಾಗುವುದಿಲ್ಲ ಎಂದರು. ನಿಮಗೆ ವಿಶೇಷ ಅಕಾರಗಳಿವೆ, ಅದನ್ನು ಚಾಲು ಮಾಡಿ ನನಗೆ ಅವಕಾಶ ನೀಡಿ ಎಂದು ಪದೇ ಪದೇ ಮನವಿ ಮಾಡಿದ್ದೆ. ಆದರೆ ಅವರು ನಗುತ್ತಾ ಪ್ರತಿಕ್ರಿಯಿಸಿ, ಅವಕಾಶ ನಿರಾಕರಿಸಿದರು ಎಂದರು.

ಸಂಸತ್‍ನಲ್ಲಿ ನಾನು ಅದಾನಿ ವಿಚಾರ ಪ್ರಸ್ತಾಪಿಸುತ್ತೇನೆ ಎಂದು ಅವರು ಭಯ ಬಿದ್ದಿದ್ದಾರೆ. ಅದಕ್ಕಾಗಿ ನನ್ನನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಇದರಿಂದ ನನ್ನನ್ನು ಹೆದರಿಸಬಹುದು ಎಂದು ಅವರು ಅಂದುಕೊಂಡಿದ್ದಾರೆ.

ಆದರೆ ನಾನು ಹೆದರುವುದಿಲ್ಲ. ಅದಾನಿ ಅವರ ನಕಲಿ ಕಂಪೆನಿಗಳಲ್ಲಿ ಇರುವ 20 ಸಾವಿರ ಕೋಟಿ ರೂಪಾಯಿಗಳು ಎಲ್ಲಿಯದು ಎಂಬ ಪ್ರಶ್ನೆಯವನ್ನು ಕೇಳುತ್ತಲೇ ಇರುತ್ತೇನೆ. ಉತ್ತರ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ. ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಯಾವುದಕ್ಕೂ ಜಗ್ಗುವುದಿಲ್ಲ ಎಂದರು.

ಅದಾನಿ ಮೋದಿ ಭ್ರಷ್ಟಾಚಾರ ಮಾದರಿಯಾಗಿದ್ದಾರೆ. ಭಾರತದ ಎಲ್ಲಾ ಮೂಲ ಸೌಲಭ್ಯಗಳನ್ನು ಅದಾನಿಗೆ ನೀಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅದಾನಿ ಕಂಪೆನಿಗೆ ಬಂದು ಸೇರುತ್ತಿದೆ. ದೇಶದ ರಕ್ಷಣಾ ಇಲಾಖೆಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ.

ಅದಾನಿಯ ಸೆಲ್ ಕಂಪೆನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಅವರನ್ನು ಯಾಕೆ ಅಲ್ಲಿ ಕೂರಿಸಿಕೊಂಡಿದ್ದೀರಾ ಎಂದು ಯಾರು ಪ್ರಶ್ನೆ ಮಾಡುತ್ತಿಲ್ಲ. ಈ ಬಗ್ಗೆ ನಾನು ಪ್ರಶ್ನೆ ಕೇಳಿದರೆ, ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ನಾನು ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದ್ದೇನೆ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ನಾವು ದಲಿತರ, ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಲು ಶುರು ಮಾಡೋಣ. ಇಲ್ಲಿ ಪ್ರಮುಖ ಪ್ರಶ್ನೆ ಏನೆಂದರೆ ದೇಶದಲ್ಲಿ ಎಲ್ಲಾ ಹುದ್ದೆಗಳಲ್ಲಿ ಯಾವ ಸಮುದಾಯದ ಜನ ಹೆಚ್ಚಿದ್ದಾರೆ ಎಂಬುದನ್ನು ಗಮನಿಸಬೇಕಿದೆ. ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿರುವ ಹುದ್ದೆಗಳಲ್ಲಿ ದಲಿತರು, ಹಿಂದುಳಿದ ವರ್ಗಗಳ ಜನ ಕೇವಲ ಶೇ.7ರಷ್ಟು ಮಾತ್ರ ಇದ್ದಾರೆ. ದೇಶದಲ್ಲಿ ಹಿಂದುಳಿದ, ದಲಿತ, ಆದಿವಾಸಿಗಳು ಎಷ್ಟು ಜನ ಸಂಖ್ಯೆ ಎಷ್ಟಿದ್ದಾರೆ ಅಷ್ಟು ಪ್ರಮಾಣದಲ್ಲಿ ಅವಕಾಶಗಳನ್ನು ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2011ರಲ್ಲಿ ಜನಗಣತಿ ಮಾಡಿ, ಎಲ್ಲಾ ಜಾತಿವಾರು ಅಂಕಿ ಅಂಶಗಳನ್ನು ಕಲೆ ಹಾಕಿದೆ. ಮೋದಿ ಅವರಿಗೆ ಧೈರ್ಯವಾಗಿದ್ದರೆ ಆ ಜನಗಣತಿ ವರದಿಯನ್ನು ಬಹಿರಂಗ ಮಾಡಿ. ಯಾರ ಜನಸಂಖ್ಯೆ ಎಷ್ಟಿದೆ, ಎಷ್ಟು ಸೌಲಭ್ಯ ಸಿಕ್ಕಿದೆ ಎಂದು ಜನರಿಗೆ ಗೋತ್ತಾಗಲಿ ಎಂದು ಆಗ್ರಹಿಸಿದರು.

ಜಾತಿವಾರು ಮಾಹಿತಿಯನ್ನು ಬಹಿರಂಗ ಮಾಡದಿದ್ದರೆ ಮೋದಿ ಸರ್ಕಾರ ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದೆ ಎಂದು ಭಾವಿಸಬೇಕಾಗುತ್ತದೆ. ಬಾಯಿ ಮಾತಿನಲ್ಲಿ ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಭಾಷಣ ಮಾಡಿದ್ದಾರೆ ಸಾಲದು. ದಲಿತರಿಗೂ ಜನಸಂಖ್ಯೆ ಆಧಾರಿತವಾಗಿ ಅವಕಾಶಗಳನ್ನು ನೀಡಬೇಕು. ದೇಶದಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ.50ರಷ್ಟಕ್ಕೆ ಸೀಮಿತಗೊಳಿಸಲಾಗಿದೆ. ಅದನ್ನು ತೆಗೆದು ಹಾಕಿ, ಬಳಿಕ ಹಿಂದುಳಿದ ವರ್ಗಗಳ ಕುರಿತು ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!