ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರವ್ಯಾಮೋಹ ಧೃತರಾಷ್ಟ್ರನನ್ನೇ ಮೀರಿಸುವಂತಿದೆ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
ಯತೀಂದ್ರ ಸಿದ್ದರಾಮಯ್ಯರನ್ನು ಶ್ಯಾಡೋ ಸಿಎಂ ಎಂದು ಬಿಜೆಪಿ ಕರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಸದ್ದಿಲ್ಲದೇ ಸಂವಿಧಾನಿಕ ಹುದ್ದೆಯನ್ನು ನೀಡಲಾಗಿದೆ ಎಂಬ ವಿಚಾರವಾಗಿ ಟೀಕಾ ಪ್ರಹಾರ ನಡೆಸಿದೆ.
ಸಿಎಂ ಸಿದ್ದರಾಮಯ್ಯ ರವರ ಪುತ್ರವ್ಯಾಮೋಹ, ಧೃತರಾಷ್ಟ್ರನನ್ನೇ ಮೀರಿಸುವಂತಿದೆ. ಸರ್ಕಾರದ ಆಡಳಿತದಲ್ಲಿ ಹಾಗೂ ವರ್ಗಾವಣೆ ದಂಧೆಯಲ್ಲಿ ಇನ್ನಿಲ್ಲದಂತೆ ಹಸ್ತಕ್ಷೇಪ ಮಾಡುವ ಆರೋಪ ಹೊತ್ತಿರುವ ಶ್ಯಾಡೋ ಸಿಎಂ ಡಾ. ಯತೀಂದ್ರರವರಿಗೆ ಈಗ ಸಾಂವಿಧಾನಿಕ ಹುದ್ದೆಯನ್ನು ದಯಪಾಲಿಸಲಾಗಿದೆ, ಅದು ಗುಟ್ಟಾಗಿ! ಎಂದು ಟೀಕೆ ಮಾಡಿದೆ.
ತಮ್ಮದು ಪಾರದರ್ಶಕ ಸರ್ಕಾರ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯರವರು, ತಮ್ಮ ಪುತ್ರನಿಗೆ ನೀಡಿದ ಹುದ್ದೆಯ ನೇಮಕಾತಿ ಆದೇಶವನ್ನು ಇಷ್ಟು ದಿನ ಗುಟ್ಟಾಗಿರಿಸಿದ್ದರು ಎಂದು ಬಿಜೆಪಿ ವಾಗ್ದಾಳಿಯನ್ನು ನಡೆಸಿದೆ.





