ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಿಕೆ ಪಾಳ್ಯ ಎಂಬಲ್ಲಿ ವಾಟರ್ ಟ್ರ್ಯಾಕ್ಟರ್ ಹರಿದು ಭುವನ್ ಎಂಬ ನಾಲ್ಕು ವರ್ಷ ವಯಸ್ಸಿನ ಬಾಲಕ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಭವಿಸಿದೆ. ಅಣ್ಣನ ಜತೆ ಐಸ್ಕ್ರೀಸ್ ಕೊಳ್ಳಲು ಬೇಕರಿಗೆ ಬಂದಿದ್ದ ಭುವನ್ ಮೇಲೆ ಟ್ರ್ಯಾಕ್ಟರ್ ಚಲಿಸಿದೆ. ಚಾಲಕ ಕುಡಿದ ಅಮಲಿನಲ್ಲಿ ವಾಟರ್ ಟ್ಯಾಂಕರ್ ಚಲಾಯಿಸುತ್ತಿದ್ದ ಎನ್ನಲಾಗಿದೆ.
ವಾಟರ್ ಟ್ರ್ಯಾಕ್ಟರ್ ಭುವನ್ ತಲೆ ಮೇಲೆ ಹರಿದಿದ್ದು ಗಂಭೀರ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಗಾಯಾಳು ಬಾಲಕ ಮೃತಪಟ್ಟಿದ್ದಾನೆ. ಘಟನೆ ನಂತರ ವಾಟರ್ ಟ್ಯಾಂಕರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಭುವನ್ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ಸೇತುವೆ ಬಳಿ ಇತ್ತೀಚೆಗಷ್ಟೇ ಸಂಭವಿಸಿತ್ತು. ಇದರ ಕಹಿ ನೆನಪು ಮಾಸುವ ಮುನ್ನವೇ ಇದೀಗ ಟ್ರ್ಯಾಕ್ಟರ್ ಚಾಲಕನ ಬೇಜವಾಬ್ದಾರಿ, ಅಜಾಗರೂಕತೆಯ ಚಾಲನೆಯಿಂದ ಬಾಲಕ ಮೃತಪಟ್ಟಿದ್ದಾನೆ.



