Mysore
25
overcast clouds
Light
Dark

ದಸರಾ ಗಜಪಡೆಯ ಹಿರಿಯಣ್ಣ ಅರ್ಜುನ ಇನ್ನಿಲ್ಲ

ಮೈಸೂರು : ದಸರಾ ಗಜಪಡೆಯ ಹಿರಿಯಣ್ಣನಂತಿದ್ದ ಅರ್ಜುನ ಆನೆ ಇನ್ನಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆಯೊಂದರ ವೇಳೆ ಅರ್ಜುನ ಒಂಟಿ ಸಲಗದ ಜತೆ ಕಾಳಗಕ್ಕಿಳಿದು ದಾರುಣ ಸಾವು ಕಂಡಿದೆ.

ಇತರ ಮೂರು ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರ್ಜುನ, ಕಾಡಾನೆಗೆ ಅರಿವಳಿಕೆ ಶೂಟ್ ಮಾಡುವ ಸಮಯದಲ್ಲಿ ಒಂಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿತ್ತು. ಇತರ ಮೂರು ಸಾಕಾನೆಗಳು ಮತ್ತು ಮಾವುತರು ಅಲ್ಲಿಂದ ಓಡಿ ದಾಳಿಯಿಂದ ತಪ್ಪಿಸಿಕೊಂಡರೂ. ೬೪ ವರ್ಷ ವಯಸ್ಸಿನ ಅರ್ಜುನ ದಿಟ್ಟತನದಿಂದ ಅದನ್ನು ಎದುರಿಸುವ ಸಾಹಸಕ್ಕಿಳಿಯಿತು.

ಈ ಕಾದಾಟದಲ್ಲಿ ಅರ್ಜುನ ತೀವ್ರ ಗಾಯಕ್ಕೊಳಗಾದ ಅರ್ಜುನ ಮೃತಪಟ್ಟಿದೆ. ಹೊಟ್ಟೆ ಭಾಗಕ್ಕೆ ಒಂಟಿ ಸಲಗದ ತಿವಿದ ಗಾಯ ದಸರಾ ಗಜಪಡೆಯ ಅತ್ಯಂತ ಬಲಿಷ್ಠ ಆನೆ ಎನಿಸಿದ್ದ ಅರ್ಜುನನ್ನು ಬಲಿ ತೆಗೆದುಕೊಂಡಿದೆ.

2012ರಿಂದ 2019ರವರಗೆ ಒಟ್ಟು ಒಂಬತ್ತು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡ ಅರ್ಜುನ, 2019ರಲ್ಲಿ ೬೦ರ ವಯಸ್ಸುದಾಟಿದ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ವಯಸ್ಸಿನ ಅಭಿಮನ್ಯುಗೆ ವಹಿಸಿ, ತಾನು ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸುತ್ತಿತ್ತು.

ಅಸೀಮ ಸಾಹಸಿ ಅರ್ಜುನನ ಸೇವೆಯನ್ನು ಪುಂಡಾನೆಗಳನ್ನು ಹಿಡಿಯಲು, ಹುಲಿ ಸೆರೆ ಕಾರ್ಯಾಚರಣೆ ವೇಳೆ ನಿರಂತರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಂಬಾರಿ ಆನೆ ಬಲರಾಮನ ನಿವೃತ್ತಿಯ ನಂತರ ಅಂಬಾರಿಯನ್ನು ಹೊರಲು ಆರಂಭಿಸಿದ್ದ ಅರ್ಜುನ ಅದಕ್ಕೂ ಸಾಕಷ್ಟು ವರ್ಷಗಳ ಹಿಂದೆ ಒಮ್ಮೆ ಅಂಬಾರಿ ಹೊತ್ತುಸಾಗಿತ್ತು. ಆದರೆ ದೊಡ್ಡಕೆರೆ ಮೈದಾನದಲ್ಲಿ ತನ್ನ ಮಾವುತನನ್ನೇ ತುಳಿದು ಸಾಯಿಸಿದ ಪ್ರಕರಣದ ಬಳಿಕ ಹಲವು ವರ್ಷಗಳ ಕಾಲ ಅರ್ಜುನನನ್ನು ಗಜಪಡೆಯಿಂದ ದೂರವಿಡಲಾಗಿತ್ತು. ಆದರೆ ಮಾವುತ ದೊಡ್ಡ ಮಾಸ್ತಿ ಅವರ ಗರಡಿಯಲ್ಲಿ ಪಳಗಿದ ಅರ್ಜುನ 2012ರಿಂದ ನಿರಂತರವಾಗಿ ಗಜಪಡೆಯ ಭಾಗವಾಗಿದ್ದ.

ತೂಕದ ಆನೆ : ಅಂದಾಜು ೬ ಸಾವಿರ ಕಿಲೋ ತೂಗುತ್ತಿದ್ದ ಅರ್ಜುನ, ಗಜಪಡೆಯ ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕದ ಆನೆಯಾಗಿ ಗುರುತಿಸಿಕೊಂಡಿದ್ದ. 2010ರಲ್ಲಿ 4541 ಕೆಜಿ ತೂಕವಿದ್ದ ಅರ್ಜುನ, 2011ರಲ್ಲಿ 5055 ಕೆಜಿಗೆ ತೂಕ ಏರಿಸಿಕೊಂಡಿದ್ದ. ಅಲ್ಲಿಂದ 2019ರವರೆಗೆ ಸುಸೂತ್ರವಾಗಿ ಅಂಬಾರಿ ಹೊತ್ತು ಗಮನಸೆಳೆದಿದ್ದ. ೨೦೨೩ರ ದಸರಾ ವೇಳೆಗೆ ಆರ್ಜುನ ೫೬೮೦ ಕಿಲೋ ದೇಹ ತೂಕ ದಾಖಲಿಸಿದ್ದ.

ಮಾವುತ ದೊಡ್ಡಮಾಸ್ತಿ ಅವರ ನಿಧನದ ಬಳಿಕ ವಿನು ಅವರು ಮಾವುತರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಕಾಡಾನೆ ಜತೆಗಿನ ಕಾದಾಟದಲ್ಲಿ ತನ್ನ ನೆಚ್ಚಿನ ಆನೆಯನ್ನು ಉಳಿಸಿಕೊಳ್ಳಲಾಗದ ದು:ಖದಿಂದ ವಿನು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನ ಕರಗುವಂತಿತ್ತು.

ಕಾಕನ ಕೋಟೆಯ ಭೀಮ : ಹೆಚ್.ಡಿ.ಕೋಟೆಯ ಬಳ್ಳೆ ಶಿಬಿರದ ಅರ್ಜುನ 2.80 ಮೀಟರ್ ಎತ್ತರ, 3.75 ಮೀಟರ್ ಉದ್ದ ಹೊಂದಿದ್ದು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಪುಂಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಿಸ್ಸೀಮ : ದಸರಾ ಹೊರತು ಪಡಿಸಿ ಇತರೆ ದಿನಗಳಲ್ಲಿ ಬಳ್ಳೆ ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡುವ ಅರ್ಜುನ ಎಲ್ಲಿಯೇ ಹುಲಿ ಸೆರೆ, ಪುಂಡಾನೆ ಸೆರೆ ಕಾರ್ಯಾಚರಣೆ ಇರಲಿ ಅಲ್ಲಿಗೆ ರೆಡಿ ಒಯ್ಯಲಾಗುತ್ತಿತ್ತು. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಆನೆಗಳನ್ನು ಹಿಡಿಯಲು ಬಳಸಿರುವುದು ಅರ್ಜುನನ ಶೌರ್ಯಕ್ಕೆ ಸಾಕ್ಷಿ.

2019ರಲ್ಲಿ ನಾಲ್ಕು ಜನರನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರ್ಜುನನ್ನು ಬಳಸಿಕೊಂಡು ಮೂರು ದಿನ ಕಾರ್ಯಾಚರಣೆ ನಡೆಸಿ ಹುಲಿಯ ಹೆಜ್ಜೆಗುರುತು ಆದರಿಸಿ ಹುಲಿಯನ್ನು ಹಿಡಿಯಲಾಗಿತ್ತು. ಇದಕ್ಕೆ ಮೆಚ್ಚಿ ಸರಕಾರ ಅರ್ಜುನ ಮತ್ತು ಮಾವುತ ವಿನುಗೆ ಪ್ರಶಸ್ತಿ ಪತ್ರ ನೀಡಿತ್ತು. ಇದೀಗ ಇಂಥದ್ದೇ ಕಾರ್ಯಾಚರಣೆಯಲ್ಲಿ ಅರ್ಜುನ ಪ್ರಾಣ ತೆತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ