Mysore
30
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಗಾಳಿಯಲ್ಲಿ ಮಾತನಾಡುವ ಬಳ್ಳಿ ಆಲೂಗೆಡ್ಡೆ!

ಜಿ.ಕೃಷ್ಣ ಪ್ರಸಾದ್

ಮಣ್ಣಿನಲ್ಲಿ ಆಲೂಗೆಡ್ಡೆ ಬೆಳೆಯುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಬಳ್ಳಿಯಲ್ಲಿ ಬಿಡುವ ಆಲೂಗೆಡ್ಡೆಯನ್ನು ನೋಡಿದ್ದೀರಾ? ಅದೂ ಗಾಳಿಯಲ್ಲಿ ನೇತಾಡುವ ಆಲೂಗೆಡ್ಡೆ ಅರ್ಥಾತ್ ಬಳ್ಳಿ ಆಲೂಗೆಡ್ಡೆ.

ನಿಜ ಹೇಳಬೇಕೆಂದರೆ ಇದು ಆಲೂಗೆಡ್ಡೆ ಕುಟುಂಬಕ್ಕೆ ಸೇರಿದ ಸಸ್ಯ ಅಲ್ಲ. ಕಾಡು ಜಾತಿಗಳ ಗೆಡ್ಡೆ ಗೆಣಸಿನ ಪ್ರವರ್ಗಕ್ಕೆ ಸೇರುವ ಬಳ್ಳಿ ಆಲೂಗೆಡ್ಡೆ. ವೈಜ್ಞಾನಿಕ ಹೆಸರು ಡಯೋ ಸ್ಕೋರಿಯಾ ಬಲ್ಬಿಫೆರಾ. ಏರ್ ಪೊಟ್ಯಾಟೋ, ಏರಿಯಲ್ ಯಾಮ್ ಎಂದೂ ಕರೆಯುತ್ತಾರೆ.

ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ತಾನದ ಕಾಡುಗಳಲ್ಲಿ ಬಳ್ಳಿ ಆಲೂಗೆಡ್ಡೆ ಸಾಮಾನ್ಯವಾಗಿ ಕಾಣಸಿಗುತ್ತದೆ. ‘ಕಂದ ಗೋಲ್’ ಎಂದು ಕರೆಯುತ್ತಾರೆ. ತಿಳಿ ಕಪ್ಪುಬಣ್ಣದ ಇದರ ಗೆಡ್ಡೆಗಳನ್ನು ಬೇಯಿಸಿ ತಿನ್ನುತ್ತಾರೆ.

ಮಲೆನಾಡಿನ ಕಾಡುಗಳಲ್ಲಿ ಬಳ್ಳಿ ಆಲೂಗೆಡ್ಡೆಯನ್ನು ಹೋಲುವ ಅನೇಕ ತಳಿಗಳಿವೆ. ಅವುಗಳ ಮೈ ಮೇಲೆ ಉರುಟು ಉರುಟಾದ ರಚನೆ ಇರುತ್ತದೆ. ಇವುಗಳು ಕಹಿ ಗುಣ ಹೊಂದಿದ್ದು, ಕೃಷಿಗೆ ಯೋಗ್ಯವಲ್ಲ. ಸಹಜ ಸಮೃದ್ಧ ಪರಿಚಯಿಸಿದ, ಆಲೂಗೆಡ್ಡೆಯನ್ನು ಹೋಲುವ ತಳಿಗಳು ಕೃಷಿಗೆ ಸೂಕ್ತ.

ಜೈನ ಮುನಿಗಳಿಗೆ ನೆಲದಲ್ಲಿ ಬೆಳೆಯುವ ಆಹಾರ ನಿಷಿದ್ಧ. ಬಳ್ಳಿಯಲ್ಲಿ ಸಿಗುವ ಈ ಆಲೂಗೆಡ್ಡೆ ಅವರ ಪ್ರೀತಿಗೆ ಪಾತ್ರ. ಹಾಗಾಗಿ ಇದಕ್ಕೆ ‘ಜೈನ್ ಆಲೂ’ ಎಂಬ ಹೆಸರೂ ಇದೆ. ಬಳ್ಳಿ ಆಲೂಗೆಡ್ಡೆಯ ಕೃಷಿ ಬಳ್ಳಿ ಆಲೂಗೆಡ್ಡೆ ಬೆಳೆಸುವುದು ಸುಲಭ. ಮಾರ್ಚ್-ಏಪ್ರಿಲ್‌ನಲ್ಲಿ ಇದರ ಗೆಡ್ಡೆಯ ಕಣ್ಣು ಗಳಲ್ಲಿ ಮೊಳಕೆ ಕಾಣಿಸುತ್ತದೆ. ಆಗ ಬಳ್ಳಿ ಆಲೂಗೆಡ್ಡೆಯನ್ನು ನೆಡಬೇಕು. ಒಂದು ಅಡಿ ಆಳದ ಗುಂಡಿ ಮಾಡಿ, ಅದಕ್ಕೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ಕೊಟ್ಟು ಗೆಡ್ಡೆ ನೆಡಿ. ಮೊಳಕೆ ಬಳ್ಳಿಯ ರೂಪಕ್ಕೆ ತಿರುಗಿ ಬೆಳೆಯುತ್ತಾ ಹೋಗುತ್ತದೆ. ಚಪ್ಪರ ಹಾಕಿ ಬಳ್ಳಿ ಹಬ್ಬಿಸಿ. ಆಗಸ್ಟ್-ಸೆಪ್ಟೆಂಬರ್ ಹೊತ್ತಿಗೆ ಬಳ್ಳಿಯಲ್ಲಿ ಸಣ್ಣ ಗಂಟುಗಳು ಕಾಣಿಸಿಕೊಂಡು, ಕ್ರಮೇಣ ದೊಡ್ಡದಾಗುತ್ತದೆ. ಆಲೂಗೆಡ್ಡೆ ಗಾತ್ರಕ್ಕೆ ಬಂದಾಗ ಕಟಾವು ಮಾಡಬಹುದು.

ಎಳೆಯ ಗೆಡ್ಡೆಗಳನ್ನು ಬಳಸದೆ ಹಾಗೇ ಬಿಟ್ಟರೆ ಬಲಿತು ತಾನಾಗೇ ಬಳ್ಳಿಯಿಂದ ನೆಲಕ್ಕೆ ಬೀಳುತ್ತವೆ. ನವೆಂಬರ್ ಕೊನೆಯ ಹೊತ್ತಿಗೆ ಬಳ್ಳಿ ಒಣಗಲು ಶುರುವಾಗುತ್ತದೆ. ಆಗ ಬಳ್ಳಿಯಲ್ಲಿರುವ ಗೆಡ್ಡೆಗಳನ್ನು ಕಿತ್ತು ಬೀಜಕ್ಕೆ ಬಳಸಬಹುದು. ಬಳ್ಳಿಯ ಬೇರಿನಲ್ಲಿ ಮುಂಗೈ ಗಾತ್ರದ ಗೆಡ್ಡೆ ಇರುತ್ತದೆ.

ಮುಂಗಾರಿನ ಮಳೆಗೆ ಈ ಬೇರು ಗೆಡ್ಡೆ ಚಿಗುರಿ ಬಳ್ಳಿ ಹರಿಯಲು ಆರಂಭವಾಗುತ್ತದೆ. ಈ ಫಸಲು ಚಕ್ರ ಮುಂದಿನ ನಾಲ್ಕೆ ದು ವರ್ಷಗಳಕಾಲ ಪುನರಾವರ್ತನೆಗೊಳ್ಳುತ್ತದೆ. ಬಳ್ಳಿ ಆಲೂಗೆಡ್ಡೆಗೆ ಹೇಳಿಕೊಳ್ಳುವಂಥ ಯಾವುದೇ ರೋಗ ಮತ್ತು ಕೀಟಗಳ ಹಾವಳಿ ಇಲ್ಲ. ಹೆಚ್ಚು ನೀರು ಕೂಡ ಕೇಳುವುದಿಲ್ಲ. ನಗರವಾಸಿಗರು ಇದನ್ನು ಸುಲಭವಾಗಿ ಕುಂಡ ಅಥವಾ ಗ್ರೋ ಬ್ಯಾಗ್‌ನಲ್ಲಿ ಬೆಳೆಸಿಕೊಳ್ಳಬಹುದು.

ಕನ್ನಂಬಾಡಿ ಬಯಲಲ್ಲಿ ಬಳಿ ಆಲೂಗೆಡ್ಡೆ ಗೆಡ್ಡೆ ಗೆಣಸು ಮೇಳದ ಮೂಲಕ ಪರಿಚಯ ವಾಗಿರುವ ಬಳ್ಳಿ ಆಲೂಗೆಡ್ಡೆಯನ್ನು ಮೈಸೂರು ಜಿಲ್ಲೆಯ ಅನೇಕ ರೈತರು ಮನೆ ಬಳಕೆಗೆ ಬೆಳೆಸು ತ್ತಿದ್ದಾರೆ. ಇದನ್ನು ಬೆಳೆಸೋದು ಸುಲಭ. ಮಳೆ ಗಾಲದಲ್ಲಿ ಚಪ್ಪರಕ್ಕೋ, ಬೇಲಿಗೋ ಹಬ್ಬಿಸಿದರೆ ಸಾಕಷ್ಟು ಕಾಯಿ ಕೊಡುತ್ತದೆ. ಮುಂದಿನ ವರ್ಷ ಅದೇ ಹುಟ್ಟಿಕೊಳ್ತದೆ; ನಾವು ಗೆಡ್ಡೆ ನೆಡೋ ಕೆಲಸಾನೇ ಇಲ್ಲ’ ಎನ್ನುತ್ತಾರೆ ಎಚ್.ಡಿ.ಕೋಟೆ ತಾಲ್ಲೂಕಿನ ಮಚ್ಚರೆ ಗ್ರಾಮದ ನೀಲೇ ಗೌಡರು. ೩ ವರ್ಷಗಳಿಂದ ಇವರು ಬಳ್ಳಿ ಆಲೂಗೆಡ್ಡೆಯನ್ನು ಬೆಳೆಯುತ್ತಿದ್ದಾರೆ.

ಆನೇಕಲ್ಲಿನ ಮಾಯಸಂದ್ರದ ಕಾಂತರಾಜು, ನಾಲ್ಕು ವರ್ಷಗಳ ಹಿಂದೆ ಹೊಲದ ಸುತ್ತಲಿನ ತಂತಿ ಬೇಲಿಗೆ ‘ಬಳ್ಳಿ ಆಲೂಗೆಡ್ಡೆ’ ನೆಟ್ಟಿದ್ದರು. ‘ಪ್ರತಿ ವರ್ಷ ಮುಂಗಾರಿಗೆ ತಾನಾಗೇ ಹುಟ್ಟಿ, ಸಂಕ್ರಾಂತಿಗೆ ಒಣಗಿ ಹೋಗುವ ಬಳ್ಳಿ ಆಲೂ ಗೆಡ್ಡೆ ಪ್ರತಿವರ್ಷ ಏನಿಲ್ಲೆಂದರೂ ಎರಡರಿಂದ ಮೂರು ಕ್ವಿಂಟಾಲ್ ಗೆಡ್ಡೆಗಳನ್ನು ಕೊಡುತ್ತದೆ. ‘ಕೆಜಿಗೆ ೫೦ ರೂಪಾಯಿ ಸಿಕ್ಕಿದರೂ, ಒಂದ್ಹತ್ತು ಸಾವಿರ ಗಳಿಕೆಯಾಗುತ್ತದೆ’ ಎನ್ನುತ್ತಾರೆ ಕಾಂತರಾಜು. ಬಳ್ಳಿ ಆಲೂಗೆಡ್ಡೆಯನ್ನು ಬೆಳೆಸಲು ಆಸಕ್ತಿ ಯುಳ್ಳವರು ಸಹಜ ಸೀಡ್ಸ್ – ೭೦೯೦೦ ೦೯೯೧೧ನಲ್ಲಿ ಬಿತ್ತನೆ ಗೆಡ್ಡೆ ಕೊಳ್ಳಬಹುದು.

ಔಷಧಿಯ ಖಜಾನೆ: 

ಔಷಧಿಯ ಗುಣಗಳಿಂದ ಸಮೃದ್ಧವಾಗಿರುವ ಬಳ್ಳಿ ಆಲೂಗೆಡ್ಡೆ ಸಂಽವಾತದಿಂದಬಳಲುವವರಿಗೆ ಉತ್ತಮ. ಮಧುಮೇಹಿ ಗಳೂ ಇದನ್ನು ಸೇವಿಸಬಹುದು. ಇದನ್ನು ತಿಂದರೆ ವಾಯುವಿನ ಭಯವಿಲ್ಲ. ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂನಿಂದ ಸಮೃದ್ಧವಾಗಿರುವ ಬಳ್ಳಿ ಆಲೂಗೆಡ್ಡೆಯು ರಕ್ತದೊತ್ತಡ ನಿಯಂತ್ರಣ ಮತ್ತು ಮೂಳೆ ಸವೆಯುವುದನ್ನು ತಪ್ಪಿಸುತ್ತದೆ. ಅತಿಸಾರ ಮತ್ತು ಭೇದಿಗೆ ಔಷಧಿಯಾಗುತ್ತದೆ. ಸಪ್ಪೆ ರುಚಿಯ, ಕತ್ತರಿಸಿದರೆ ಕೊಂಚ ಅಂಟು ಇರುವ ಬಳ್ಳಿ ಆಲೂಗೆಡ್ಡೆಯಿಂದ ಹತ್ತಾರು ಖಾದ್ಯಗಳನ್ನು ತಯಾರಿಸಬಹುದು. ಚಿಪ್ಸ್, ಫಿಂಗರ್ ಚಿಪ್ಸ್, ಪಲ್ಯ ಮತ್ತು ಸಾಂಬಾರಿಗೆ ಸೂಕ್ತ.

Tags:
error: Content is protected !!