Mysore
18
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ನಂಜನಗೂಡಲ್ಲಿ ಎಗ್ಗಿಲ್ಲದ ಮಣ್ಣು ಮಾಫಿಯಾ

sand mafia

ಶ್ರೀಧರ್‌ ಆರ್.ಭಟ್‌

ನಂಜನಗೂಡು: ತಾಲ್ಲೂಕಿನಲ್ಲಿ ಹಾದು ಹೋಗಿರುವ ಕಬಿನಿ ಹಾಗೂ ನುಗು ನಾಲೆಗಳ ಮಣ್ಣು ಎಗ್ಗಿಲ್ಲದೆ ಸಾಗಾಣಿಕೆಯಾಗುತ್ತಿದೆ. ಹೆಗ್ಗಡದೇವನ ಕೋಟೆ ತಾಲ್ಲೂಕಿನ ಗಡಿಯಿಂದ ಚಾಮರಾಜನಗರ ಜಿಲ್ಲೆ ಗಡಿಯವರೆಗೆ ಇರುವ ಈ ಎರಡು ನಾಲೆಗಳ ಮಣ್ಣು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಗಳಾಗಿವೆ. ಮಣ್ಣು ಮಾಫಿಯಾ ದಂಧೆ ರಾತ್ರಿ-ಹಗಲೆನ್ನದೆ ನಡೆಯುತ್ತಿದೆ.

ಮಣ್ಣು ಬೇಕಾದವರು ಸರ್ಕಾರಕ್ಕೆ ರಾಯಲ್ಟಿ ಪಾವತಿಸಿ ಈ ನಾಲೆಗಳ ಮಣ್ಣು , ಕಲ್ಲುಗಳ ಸಾಗಾಣಿಕೆಗಾಗಿ ಅನುಮತಿ ಪಡೆದುಕೊಳ್ಳ ಬೇಕು. ಆದರೆ ಇಲ್ಲಿ ಅದಾಗುತ್ತಿಲ್ಲ, ರಾಯಲ್ಟಿ ಎಂಬ ಸೊಲ್ಲು ಇಲ್ಲದೆಯೇ ಮಣ್ಣು ಸಾಗಾಣಿಕೆಯಾಗುತ್ತಿದೆ.

sand mafia

ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪಾಲಿಗೆ ಹಣ ಬಾಚುವ ದಂಧೆಯಾಗಿರುವುದರಿಂದ ಈಗಾಗಲೇ ಹತ್ತಾರು ಸಾವಿರ ಟನ್ ಮಣ್ಣು ಸಾಗಾಣಿಕೆಯಾಗಿ, ಅನೇಕ ಹಳ್ಳಕೊಳ್ಳಗಳನ್ನು ಭರ್ತಿ ಮಾಡಿದೆ.

ನುಗು ಬಲದಂಡೆ ನಾಲೆಯ ಸಿಂಧುವಳ್ಳಿ ಬಳಿ ಬುಧವಾರ ಅಕ್ರಮವಾಗಿ ಮಣ್ಣು ತೆಗೆದು ಸಾಗಿಸುತ್ತಿದ್ದ ಸ್ಥಳಕ್ಕೆ ವಿದ್ಯಾಸಾಗರ್ ಬಣದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮತ್ತಿತರರು, ದಾಳಿ ಮಾಡಿ ಮಣ್ಣು ಸಾಗಾಣಿಕೆಗೆ ತಡೆಯೊಡ್ಡಿ, ಕಾವೇರಿ ನೀರಾವರಿ ನಿಗಮ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.

ಮಣ್ಣು ಸಾಗಾಣಿಕೆಗೆ ಬಳಸಿರುವ ಜೆಸಿಬಿ ವಶಪಡಿಸಿಕೊಳ್ಳುವಂತೆ ಆಗ್ರಹಿಸಿದರು. ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ಆಗಮಿಸಿದ ಕಬಿನಿ ನೀರಾವರಿ ನಿಗಮದ ಇಂಜಿನಿಯರ್ ದರ್ಶನ್ ಅವರ ಸುಪರ್ದಿಗೆ ಒಪ್ಪಿಸಿದರಲ್ಲದೆ, ಮಣ್ಣು ಸಾಗಾಣಿಕೆ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಠಾಣೆಯ ವ್ಯಾಪ್ತಿಯಲ್ಲಿ ಜೆಸಿಬಿ ತಂದು ನಿಲ್ಲಿಸಿದ್ದಾರೆ. ಆದರೆ ಬುಧವಾರ ಸಂಜೆ 6.30 ವೇಳೆ ಆದರೂ ಯಾವುದೇ ದೂರೂ ನೀಡಿಲ್ಲ . ದೂರು ಬಾರದಿದ್ದರೆ ನಾವೇನೂ ಮಾಡಲು ಸಾಧ್ಯ.

-ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ

ನಾಲೆಯ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮಣ್ಣು ತೆಗೆಯಲು ಬಳಸುತ್ತಿದ್ದ ಜೆಸಿಬಿ ಯಂತ್ರವನ್ನು ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದೇವೆ. ಮುಂದಿನ ಕ್ರಮವನ್ನು ಅಧಿಕಾರಿಗಳು ಜರುಗಿಸಲೇಬೇಕು ತಪ್ಪಿದಲ್ಲಿ ನಾವು ಕಬಿನಿ ನೀರಾವರಿ ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ.

-ಸತೀಶ ರಾವ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ

ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ನಾಲೆ ಮಣ್ಣನ್ನು ತೆಗೆಯುತ್ತಿದ್ದ ಜೆಸಿಬಿ ಯಂತ್ರವನ್ನು ರೈತರು ನಮ್ಮ ಸುಪರ್ದಿಗೆ ನೀಡಿದ್ದಾರೆ. ಅದನ್ನು ನಂಜನಗೂಡು ಗ್ರಾಮಾಂತರ ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ, ದೂರು ನೀಡಲು ಹೋದಾಗ, ಮಾಲು ಇಲ್ಲದ ವಾಹನ ಕುರಿತು ದೂರು ದಾಖ ಲಿಸುವುದು ಹೇಗೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ.

– ದರ್ಶನ್, ಕಬಿನಿ ನಾಲಾ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ

ಮಣ್ಣು ಸಾಗಾಣಿಕೆದಾರರು, ಅಧಿಕಾರಿಗಳು ಹಾಗೂ ಹೋರಾಟಗಾರರ ನಡುವೆ ರಾಜಿಗಾಗಿ ಪ್ರಯತ್ನ ಆರಂಭವಾಗಿದ್ದು, ಅದಕ್ಕಾಗಿಯೇ ದೂರು ದಾಖಲಾಗುತ್ತಿಲ್ಲ.

 – ಸಾರ್ವಜನಿಕರು

Tags:
error: Content is protected !!