Mysore
26
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

‘ಶಕ್ತಿ’ ಸ್ಕೀಮ್‌ನಿಂದ ಸಾರಿಗೆ ನಿಗಮಗಳಿಗೆ ನಿಶ್ಶಕ್ತಿ!

ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಶಕ್ತಿ’ ಯೋಜನೆಯಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು ನಿಶ್ಶಕ್ತಿಗೆ ಒಳಗಾಗುತ್ತಿದ್ದರೆ, ಸಾರಿಗೆ ನಿಗಮಗಳಿಗೆ ಸರ್ಕಾರ ಸಕಾಲಕ್ಕೆ ಶಕ್ತಿ ಯೋಜನೆಯ ಹಣ ಬಿಡುಗಡೆ ಮಾಡದೆ ಕೋಟಿ ಕೋಟಿ ರೂ. ಹಣ ಬಾಕಿ ಉಳಿಸಿ ಕೊಳ್ಳುತ್ತಿರುವುದರಿಂದ ಸಾರಿಗೆ ನಿಗಮಗಳು ಏದುಸಿರು ಬಿಡು ವಂತಾಗಿದೆ.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಯ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ೨೦೨೩ರ ಜೂನ್ ೧೧ರಂದು ಜಾರಿಗೊಳಿಸಿದ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ೨೦೨೫ರ ನವೆಂಬರ್ ೨೫ರವರೆಗೆ ೬೫೦ ಕೋಟಿ ಟ್ರಿಪ್‌ಗಳಲ್ಲಿ ಫಲಾನುಭವಿಗಳು ಪ್ರಯಾಣ ಮಾಡಿದ್ದಾರೆ ಎಂದು ಸರ್ಕಾರ ಬೀಗುತ್ತಿದೆ. ಆದರೆ, ಇದೇ ಅವಽಯಲ್ಲಿ ಅಂದಾಜು ೫೪ ಆಸನಗಳ ಸಾಮರ್ಥ್ಯದ ಸಾರಿಗೆ ಬಸ್‌ಗಳು ದಿನದ ಪೀಕ್ ಅವಧಿಯಲ್ಲಿ ಹಾಗೂ ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ ಸರಿಸುಮಾರು ೯೦ರಿಂದ ೧೦೦ ಪ್ರಯಾಣಿಕರನ್ನು ಹೊತ್ತು ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಿ, ಅಽಕ ಭಾರವನ್ನು ಹೊತ್ತು ಏದುಸಿರು ಬಿಡುತ್ತಾ ರಸ್ತೆಗಳಲ್ಲಿ ಸಾಗುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಂದ ತಾಲ್ಲೂಕು ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಗಳಿಗೆ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಬಸ್‌ಗಳಲ್ಲಿ ಸೀಟು ಸಿಕ್ಕು ಕುಳಿತು ಪ್ರಯಾಣಿಸುವುದಿರಲಿ, ಸಾವಕಾಶವಾಗಿ ನಿಂತು ಪ್ರಯಾಣಿಸಲೂ ಸಾಧ್ಯವಾಗದೆ, ಈ ಬಸ್ ಬಿಟ್ಟರೆ ಕಾಲೇಜು, ಕಚೇರಿ ಕೆಲಸ ತಪ್ಪಿಸಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಪ್ರಯಾಣಿಸುವ ಸ್ಥಿತಿ ಬಂದೊದಗಿದೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿಲ್ಲ. ಬದಲಿಗೆ ಲಾಭದಲ್ಲಿವೆ ಎಂದು ಸರ್ಕಾರ ಹೇಳುತ್ತಲೇ ಬರುತ್ತಿದ್ದರೂ ವಾಸ್ತವದಲ್ಲಿ ಅಧಿಕೃತ ಅಂಕಿ ಆಂಶಗಳ ಪ್ರಕಾರ ಶಕ್ತಿ ಯೋಜನೆಯ ಬಾಕಿ ಹಣದಿಂದಾಗಿ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಸರ್ಕಾರ ಒಟ್ಟಾರೆ ೪,೦೦೬.೪೭ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಇದರ ಪರಿಣಾಮ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಸರಿಯಾಗಿ ಹಣ ಪಾವತಿಯಾದೇ ಸಾರಿಗೆ ನಿಗಮಗಳು ನಷ್ಟದ ಹಾದಿಗೆ ದೂಡಲ್ಪಟ್ಟಿವೆ.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ:  ವಿಪಕ್ಷ ಟೀಕೆಗಳಿಂದಾಗಿ ಕಡೆಗೂ ಸರ್ಕಾರ ಗುರುವಾರನವೆಂಬರ್ ತಿಂಗಳ ಅನುದಾನವಾಗಿ ಸಾರಿಗೆ ಇಲಾಖೆಗೆ ೪೪೧ ಕೋಟಿ ರೂ. ಬಿಡುಗಡೆ ಮಾಡಿದೆ. ಕೆಎಸ್‌ಆರ್‌ಟಿಸಿಗೆ ೧೭೧.೪೧ ಕೋಟಿ ರೂ., ಬಿಎಂಟಿಸಿಗೆ ೭೫.೬೫ ಕೋಟಿ ರೂ., ಕೆಕೆಆರ್‌ಟಿಸಿಗೆ ೮೬.೯೨ ಕೋಟಿ ರೂ. ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ೧೦೭.೬೭ ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಶಕ್ತಿ ಯೋಜನೆಯ ೪,೦೦೬ ಕೋಟಿ ರೂ. ಬಾಕಿ ಹಾಗೆಯೇ ಉಳಿದಿದೆ.

 ಗಿರೀಶ್ ಹುಣಸೂರು

Tags:
error: Content is protected !!