ಕನ್ನಡ ಪ್ರೇಮಿ ರಾಮಚಂದ್ರಾಚಾರಿಯ ಪ್ರಕರಣಕ್ಕೆ ಮುಕ್ತಿ ಕೊಡದ ಆಡಳಿತ
ಮಂಡ್ಯ: ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕನ್ನಡ ಪ್ರೀತಿಯ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಆಶಯವನ್ನೇ ಮಣ್ಣುಪಾಲು ಮಾಡಿದಂತಿದೆ ನಮ್ಮ ಸರ್ಕಾರಗಳ ನೀತಿ. ಒಂದೆಡೆ ನವೆಂಬರ್ ತಿಂಗಳು ಪೂರ್ತಿ ನಾಡು, ನುಡಿಯ ಬಗ್ಗೆ ಇನ್ನಿಲ್ಲದಂತೆ ಭಾಷಣ ಮಾಡುವ ರಾಜಕಾರಣಿಗಳು ಕನ್ನಡದಲ್ಲಿಯೇ ಕಡತಗಳನ್ನು ನಿರ್ವಹಿಸಿದ ಓರ್ವ ಸರ್ಕಾರಿ ನೌಕರನನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಮಾನಸಿಕ ಹಿಂಸೆಗೊಳಪಡಿಸಿ ವೃದ್ಧಾಪ್ಯ ದಲ್ಲೂ ಪಿಂಚಣಿ ಸಿಗದಂತೆ ಮಾಡಿದೆ.
ವಯಸ್ಕರ ಶಿಕ್ಷಣ ಸಮಿತಿಯ ನೌಕರರಾಗಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿಯ ರಾಮ ಚಂದ್ರಾಚಾರ್ ಎಂಬವರು ೧೯೮೪ರಲ್ಲಿ ಹಾಸನದಲ್ಲಿ ದ್ವಿತೀಯ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಅವರು ಆಡಳಿತದಲ್ಲಿ ಅಂಕಿ ಸಂಖ್ಯೆಗಳನ್ನು ಕನ್ನಡದಲ್ಲೇ ನಮೂದಿಸುತ್ತಿದ್ದ ಕಾರಣಕ್ಕಾಗಿ ಅಮಾನತ್ತು ಮಾಡಿದ್ದಲ್ಲದೆ, ಸಲ್ಲದ ಆರೋಪದ ಮೇಲೆ ೧೯೯೩ರಲ್ಲಿ ಸೇವೆಯಿಂದಲೇ ವಜಾಗೊಳಿಸಲಾಯಿತು. ಮಾತ್ರವಲ್ಲ, ೨೦೦೫ರಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನೂ ಹಾಕಲಾಗಿತ್ತು. ೨೦೧೭ರಲ್ಲಿ ನ್ಯಾಯಾಲಯ ದೇಶಹಳ್ಳಿ ರಾಮ ಚಂದ್ರಾಚಾರಿ ಅವರನ್ನು ಆರೋಪದಿಂದ ಮುಕ್ತಗೊಳಿಸಿತು. ಅಷ್ಟುಮಾತ್ರವಲ್ಲ ಇದು ಮೇಲ್ಮನವಿಗೆ ಯೋಗ್ಯವಲ್ಲದ ಪ್ರಕರಣ ಎಂದು ಅಭಿಯೋಗ ಇಲಾಖೆ ಹೇಳಿತ್ತು. ಅಷ್ಟಾದರೂ ಇವರ ಸಹೋದ್ಯೋಗಿಗಳು, ಮೇಲಧಿಕಾರಿಗಳು, ಇಲಾಖೆಯ ಹಲವರು ಅನಗತ್ಯ ಪತ್ರ ವ್ಯವಹಾರದಲ್ಲಿ ತೊಡಗಿ ವ್ಯರ್ಥ ಕಾಲಹರಣ ಮಾಡಿ ಈ ಕನ್ನಡ ಪ್ರೇಮಿಗೆ ನ್ಯಾಯ ಸಿಗಲೇಬಾರದು ಎಂಬಂತೆ ವರ್ತಿಸುತ್ತಿರುವುದು ದುರ್ದೈವದ ಸಂಗತಿ.
ರಾಮಚಂದ್ರಾಚಾರಿ ನಿರಪರಾಧಿ ಎಂದು ಸಾಬೀತಾದ ಮೇಲೆ ವಜಾ ನಂತರದ ಸಕಲ ಸೌಲಭ್ಯಗಳನ್ನೂ ನೀಡಿ ನಿವೃತ್ತಿಯ ನಂತರವಾದರೂ ಅವರನ್ನು ಅವರ ಪಾಡಿಗೆ ನೆಮ್ಮದಿಯಿಂದ ಬದುಕಲು ಬಿಡಬೇಕಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೨೦೧೪ರಲ್ಲಿ ಸರ್ಕಾರಕ್ಕೆ ಪತ್ರ ಬರೆದು ಪ್ರಕರಣವನ್ನು ಗಮನಕ್ಕೆ ತಂದಾದ ಮೇಲೆ ಜಿ.ನಾರಾಯಣ, ಹಂಪ ನಾಗರಾಜಯ್ಯ, ಖಾದ್ರಿ ಶಾಮಣ್ಣ, ಮುಖ್ಯಮಂತ್ರಿ ಚಂದ್ರು, ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಕಸಾಪ ಅಧ್ಯಕ್ಷ ರಾಗಿದ್ದ ಹರಿಕೃಷ್ಣ ಪುನರೂರು ಸೇರಿದಂತೆ ಅನೇಕ ಹಿರಿಯರು ರಾಮಚಂದ್ರಾಚಾರಿಯವರಿಗೆ ಅನ್ಯಾಯ ವಾಗಿದ್ದು, ಕೂಡಲೇ ನ್ಯಾಯ ದೊರಕಿಸಬೇಕೆಂದು ಆಯಾಕಾಲದ ಮುಖ್ಯ ಮಂತ್ರಿಗಳು ಹಾಗೂ ಇಲಾಖೆಯ ಮುಖ್ಯಸ್ಥರುಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆದರೂ ಕಳೆದ ೪೨ ವರ್ಷಗಳಿಂದ ಈ ತಬರನ ಕಥೆಗೆ ಪೂರ್ಣವಿರಾಮ ಹಾಡಲು ಯಾರೂ ಮುಂದೆ ಬಾರದಿರುವುದು ಕನ್ನಡ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿ: ಬೆಂಗಾಡು ಬಡ್ಮೆರ್ಗೆ ನೀರುಣಿಸಿದ ಟೀನಾ ಡಾಬಿ
ಅಸಲಿಗೆ ಇವರ ವಿರುದ್ಧವೇ ಹಣದುರುಪಯೋಗದ ಆರೋಪ ಹೊರಿಸಿ ಜನರ ಮುಂದೆ ಇವರನ್ನು ಆರೋಪಿ ಸ್ಥಾನದಲ್ಲಿರಿಸುವ ದುಷ್ಟ ಪ್ರಯತ್ನವೂ ನಡೆದಿದೆ. ಈ ಇಳಿ ವಯಸ್ಸಿನಲ್ಲಿಯೂ ಇಲಾಖೆಯೊಂದಿಗೆ ಪತ್ರವ್ಯವಹಾರ ಮಾಡುತ್ತಾ, ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಹಿರಿಯ ಜೀವ ರಾಮಚಂದ್ರಾಚಾರಿ ಅವರು ೨೦೦೫ರಲ್ಲೇ ಮಾಹಿತಿ ಹಕ್ಕು ಕಾಯ್ದೆಯಡಿ ಯಾವ ಬಾಬ್ತಿನಡಿ ಹಣ ದುರ್ಬಳಕೆಯಾಗಿದೆ ಎಂಬ ಮಾಹಿತಿ ಕೋರಿದರು. ಆಗ ಸರ್ಕಾರದ ಅಧಿಕಾರಿಗಳು, ಯಾವ ಬಾಬ್ತಿನಲ್ಲೂ ಹಣ ದುರ್ಬಳಕೆಯಾಗಿರುವ ಮಾಹಿತಿ ಇಲ್ಲವೆಂದು ಷರಾ ಬರೆದುಕೊಟ್ಟರು.
ಇಷ್ಟಾದರೂ ಕನ್ನಡಪ್ರೇಮಿ ನೌಕರನನ್ನು ಸೇವೆಗೆ ವಾಪಸ್ ಪಡೆಯಲು ಯಾರೂ ಮನಸ್ಸು ಮಾಡಲಿಲ್ಲ. ಹೀಗೆ ಯಾವ ಗುರುತರ ಆರೋಪ ಇಲ್ಲದೆಯೂ ಅಧಿಕಾರಿಗಳು ಇವರನ್ನು ನಿರ್ದಯವಾಗಿ ನಡೆಸಿ ಕೊಂಡಿದ್ದಾರೆ. ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರಬೇಕೆಂದು ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಅದಕ್ಕಾಗಿ ಸಾಕಷ್ಟು ಅಧಿಕಾರಿಗಳನ್ನೂ ನಿಯೋಜನೆ ಮಾಡಿತು. ಮತ್ತೊಂದೆಡೆ ನ್ಯಾಯಾ ಲಯಗಳಲ್ಲೂ ಕನ್ನಡದಲ್ಲೇ ತೀರ್ಪು ನೀಡುತ್ತಿರುವಾಗ ಈ ಕನ್ನಡಪ್ರೇಮಿ ರಾಮಚಂದ್ರಾಚಾರಿ ಮಾಡಿದ ತಪ್ಪಾದರೂ ಏನು ಎಂಬುದನ್ನು ಇಲಾಖೆ ತಿಳಿಸಬೇಕಿದೆ. ಇಲ್ಲವೆಂದರೆ ಇಲ್ಲೇನೋ ಮಸಲತ್ತು ನಡೆದಿದೆ ಎಂದೇ ಜನ ಪರಿಭಾವಿಸುತ್ತಾರೆ.
ಈ ಪ್ರಕರಣವೀಗ ಕೌಶಲಾಭಿವೃದ್ಧಿ ಇಲಾಖೆಯ ಮೇಜಿನಲ್ಲಿದೆ. ರಾಜ್ಯಾದ್ಯಂತ ಕನ್ನಡವನ್ನು ಸಂಭ್ರ ಮಿಸುತ್ತಿರುವ ಈ ಮಾಸದಲ್ಲಿ ಕನ್ನಡಪ್ರೇಮಿ ರಾಮಚಂದ್ರಾಚಾರಿ ಅವರಿಗೆ ನ್ಯಾಯ ಕಲ್ಪಿಸಬೇಕಿದೆ. ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕುಎಂದು ಸಾಹಿತಿ ಬನ್ನೂರು ಕೆ.ರಾಜು ಅವರುಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್, ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇವರೆಲ್ಲರಿಗೂ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಯಾವ ನಾಯಕರೂ ಸ್ಪಂದಿಸದಿರುವುದು ಅವರ ಕನ್ನಡ ಪ್ರೇಮದ ಭಾಷಣಗಳನ್ನೇ ಅಣಕಿಸುವಂತಿದೆ.
” ಸರ್ಕಾರವೇ ಎಲ್ಲ ಹಂತಗಳಲ್ಲೂ ಕನ್ನಡ ಬಳಕೆಯಾಗಬೇಕು ಎಂದಿರುವಾಗ ಕನ್ನಡಪ್ರೇಮಿ ದೇಶಹಳ್ಳಿ ರಾಮಚಂದ್ರಾಚಾರಿ ಕನ್ನಡದಲ್ಲೇ ಕಡತಗಳನ್ನು ನಿರ್ವಹಿಸಿದ್ದಕ್ಕೆ ಅವರಿಗೆ ಸಾಕ್ಷರತಾ ಸಮಿತಿಯಲ್ಲಿ ಅನ್ಯಾಯವಾಗಿದೆ. ವರ್ಗಾವಣೆ ಹಿಂಸೆಯ ಬಳಿಕ ನೌಕರಿಯಿಂದಲೇ ವಜಾಗೊಳಿಸಿರುವುದು ಅತ್ಯಂತ ನೋವಿನ ಸಂಗತಿ. ವೃದ್ಧಾಪ್ಯದಲ್ಲಿರುವ ಅವರಿಗೆ ಇಲಾಖೆಯ ಮುಖ್ಯಸ್ಥರು ನ್ಯಾಯ ಕೊಡಿಸಲು ಮುಂದಾಗದಿದ್ದರೆ, ಕನ್ನಡ ಸೇನೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.”
-ಎಚ್.ಸಿ.ಮಂಜುನಾಥ್, ಜಿಲ್ಲಾಧ್ಯಕ್ಷರು, ಕನ್ನಡ ಸೇನೆ, ಮಂಡ್ಯ
” ನಮ್ಮ ತಾಲ್ಲೂಕಿನ ದೇಶಹಳ್ಳಿ ಗ್ರಾಮದವರಾದ ರಾಮ ಚಂದ್ರಾಚಾರಿಯವರು ಅಪ್ಪಟ ಕನ್ನಡಪ್ರೇಮಿ. ಸರ್ಕಾರಿ ಕಡತವನ್ನು ಕನ್ನಡದಲ್ಲಿ ನಿರ್ವಹಿಸಿದರೆಂಬ ಕಾರಣಕ್ಕೆ ಅವರ ವಿರುದ್ಧ ಅನೇಕ ಆರೋಪಗಳನ್ನು ಮಾಡಿ ಮಾನಸಿಕವಾಗಿ ಹಿಂಸಿಸಿರುವುದು ಕಂಡುಬರುತ್ತಿದೆ.ನ್ಯಾಯಾಲಯವೇ ಇವರನ್ನು ಆರೋಪದಿಂದ ಮುಕ್ತಗೊಳಿಸಿದರೂ ಇಂದಿಗೂ ಅವರಿಗೆ ಸೂಕ್ತ ನ್ಯಾಯ ದೊರಕಿಲ್ಲದಿರುವುದು ನೋವಿನ ಸಂಗತಿ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನ್ಯಾಯೋಚಿತ ತೀರ್ಮಾನ ಕೈಗೊಳ್ಳಬೇಕು.”
-ವಿ.ಸಿ.ಉಮಾಶಂಕರ್, ಜಿಲ್ಲಾಧ್ಯಕ್ಷರು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ
–ಹೇಮಂತ್ಕುಮಾರ್





