೨ ದಿನದಲ್ಲಿ ನಾಲೆಗೆ ನೀರು: ಇಂಜಿನಿಯರ್ ದರ್ಶನ್
ನಂಜನಗೂಡು: ಕಬಿನಿ ಬಲದಂಡೆ ನಾಲೆಯ ಉಪನಾಲೆ ಹುಲ್ಲಹಳ್ಳಿ ನಾಲೆಗೆ ಕುಸಿದು ಬಿದ್ದು, ಎರಡೂ ನಾಲೆಗಳಲ್ಲಿ ನೀರಿಲ್ಲದ ಸುದ್ದಿ ಮಂಗಳವಾರ ‘ಆಂದೋಲನ’ ದಿನಪತ್ರಿಕೆ ಯಲ್ಲಿ ಬಿತ್ತರವಾಗಿದ್ದನ್ನು ಗಮಿಸಿದ ಅಧಿಕಾರಿಗಳು, ಮಂಗಳವಾರ ಬೆಳಿಗ್ಗೆಯಿಂದಲೇ ದುರಸ್ತಿ ಕೆಲಸ ಆರಂಭಿಸಿದ್ದಾರೆ.
ಮಂಗಳವಾರ ಕೊರೆಹುಂಡಿ ಸಮೀಪದಲ್ಲಿ ನಾಲೆ ಕುಸಿದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಹಾಲಪ್ಪ ಹಾಗೂ ದರ್ಶನ್ ಪತ್ರಿಕೆಯೊಂದಿಗೆ ಮಾತನಾಡಿ, ಈ ಕಿರುನಾಲೆ ಶಿಥಿಲವಾಗಿದ್ದನ್ನು ಗಮನಿಸಿ ೨ ತಿಂಗಳ ಹಿಂದೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದು ನಿಜ. ಆದರೆ ಮಳೆಯಿಂದಾಗಿ ಹೆಚ್ಚಿನ ನೀರು ಹರಿದ ಪರಿಣಾಮ ನಾಲೆ ಕುಸಿದಿದೆ
ಇನ್ನೆರಡು ದಿನಗಳಲ್ಲಿ ಹುಲ್ಲಹಳ್ಳಿ ನಾಲೆಯಲ್ಲಿ ನೀರು ಹರಿಸಲಾಗುವುದು ಎಂದರು. ಈಗ ತಾತ್ಕಾಲಿಕವಾಗಿ ಕಬ್ಬಿಣದ ಬೃಹತ್ ಗಾರ್ಡ್ ಬಳಸಿ ಕಿರುನಾಲೆಯಲ್ಲಿ ನೀರು ಹರಿಸಲು ಕ್ರಮ ಜುರುಗಿಸಲು ಸಿದ್ಧತೆ ನಡೆದಿದೆ. ಹದಿನೈದು ದಿನಗಳಲ್ಲಿ ಕಿರುನಾಲೆಯಲ್ಲಿ ನೀರು ಹರಿಸಲಾಗುತ್ತದೆ. ಈ ನಾಲೆಯ ದುರಸ್ತಿಗಾಗಿ ೧ ಕೋಟಿ ೯೦ ಲಕ್ಷ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಅದು ಮಂಜೂರಾಗಿ ಬರುವವರಿಗೆ ನೀರು ಹರಿಸಲು ಈಗ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದರು.
” ಹುಲ್ಲಹಳ್ಳಿ ನಾಲೆಯಲ್ಲಿ ಬಿದ್ದ ಕಿರುನಾಲೆಯ ಮಣ್ಣು ಕಬ್ಬಿಣ ಸೇರಿದಂತೆ ಇನ್ನಿತರ ಅವಶೇಷಗಳನ್ನು ೨ ದಿನಗಳಲ್ಲಿ ಹೊರ ಸಾಗಿಸಿ ಶುಕ್ರವಾರದೊಳಗಾಗಿ ನಾಲೆಯಲ್ಲಿ ನೀರು ಹರಿಸಲಾಗುವುದು. ಇದರಿಂದ ಬಿಳಿಗರೆ ಹೋಬಳಿಯ ಹುಲ್ಲಹಳ್ಳಿ ನಾಲೆಯ ೭,೨೦೦ ಎಕರೆ ಪ್ರದೇಶದ ಅಚ್ಚುಕಟ್ಟುದಾರರ ನೀರಿನ ಬವಣೆ ನಿವಾರಣೆಯಾಗಲಿದೆ.”
-ದರ್ಶನ್, ಇಂಜಿನಿಯರ್ , ಕಾವೇರಿ ನೀರಾವರಿ ನಿಗಮ





