Mysore
22
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

20 ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಟ

ಮಹಾದೇಶ್ ಎಂ.ಗೌಡ

ಅಧಿಕಾರಿಗಳ ವಿರುದ್ಧ ಕೌದಳ್ಳಿ ಗ್ರಾಮದ ಮಹಿಳೆಯರ ಆಕ್ರೋಶ 

ಹನೂರು: ಕುಡಿಯುವ ನೀರಿಗಾಗಿ ಕಳೆದ ಹಲವು ದಿನಗಳಿಂದ ಪರಿತಪಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಕೌದಳ್ಳಿ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಕೌದಳ್ಳಿ ಗ್ರಾಮದ ನಾಯಕರ ಬೀದಿ, ಮೊದಲನೇ ವಾರ್ಡ್, ವಾಲ್ಮೀಕಿ ನಗರ, ಇನ್ನಿತರ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾರೂ ಇತ್ತ ಗಮನಹರಿಸುತ್ತಿಲ್ಲ ಎಂದು ಮಹಿಳೆಯರು ದೂರಿದ್ದಾರೆ. ಈ ಕುರಿತು ಮಾತನಾಡಿದ ಮಹಿಳೆಯರು, ೨೦ ದಿನಗಳಿಂದ ವ್ಯವಸ್ಥಿತವಾಗಿ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಮಹಿಳೆಯರೆಲ್ಲರೂ ತೀವ್ರ ತೊಂದರೆಗೆ ಸಿಲುಕಿದ್ದೇವೆ. ಅಧಿಕಾರಿಗಳಿಗೆ ಮನವಿ ಮಾಡಿದ್ದಾಗ್ಯೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಾವು ನೀರು ಹಿಡಿಯುವ ಕೆಲಸ ಮಾಡಬೇಕೋ ಅಥವಾ ಕೂಲಿ ಕೆಲಸಕ್ಕೆ ಹೋಗಬೇಕೋ ಎಂಬಂತಹ ಪರಿಸ್ಥಿತಿಯನ್ನು ಇಲಾಖೆ ಅಧಿಕಾರಿಗಳು ಸೃಷ್ಟಿ ಮಾಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೂಲಿ ಬಿಟ್ಟು ನೀರು ಹಿಡಿಯುವ ಪರಿಸ್ಥಿತಿ: ಗ್ರಾಮದಲ್ಲಿ ಬಹುತೇಕ ಬಡ ಕುಟುಂಬದ ಮಹಿಳೆ ಯರೇ ಇದ್ದು, ಜೀವನ ನಿರ್ವಹಣೆಗಾಗಿ ಕೂಲಿಯನ್ನು ಅವಲಂಬಿಸಿದ್ದಾರೆ. ಸಮರ್ಪಕವಾಗಿ ನೀರು ಸರಬರಾಜು ಆಗದ ಕಾರಣ ಕೂಲಿಗೆ ಹೋಗದೆ ಪ್ರತಿದಿನ ತೋಟಗಳಲ್ಲಿ, ನಲ್ಲಿಗಳಲ್ಲಿ ನೀರು ಬರುವ ಸಮಯವನ್ನೇ ಕಾದು ಕೂರಬೇಕಾಗಿದೆ. ಇದರಿಂದ ಜೀವನ ನಿರ್ವಹಣೆಗೂ ತೊಂದರೆಯಾಗಿದೆ ಎಂದು ನಾಯಕರ ಬೀದಿಯ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಟ್ಯಾಂಕರ್ ಮೂಲಕ ನೀರು ಕೊಡಿ:  ದಿನನಿತ್ಯದ ಬಳಕೆಗೂ ನೀರು ಸಿಗದಂತಾಗಿದೆ. ಆದ್ದರಿಂದ ಪ್ರತಿ ಬೀದಿಗೂ ದಿನಕ್ಕೊಮ್ಮೆಯಾದರೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಕೌದಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

 

Tags:
error: Content is protected !!