ಚನ್ನೇಶ ಬಿ.ಇದರಮನಿ
ಮೈಸೂರಿನ ಶ್ರೀರಾಂಪುರದಲ್ಲಿ ಆವರಿಸಿರುವ ಶ್ವಾನ ಭೀತಿ
ಐದಾರು ಜನರಿಗೆ ಕಚ್ಚಿರುವ ನಾಯಿಗಳು; ಜನರ ಮನವಿಗೆ ಸ್ಪಂದಿಸದ ನಗರಪಾಲಿಕೆ: ಆರೋಪ
ಮೈಸೂರು: ಸ್ವಾಮಿ ನಿಷ್ಠೆಗೆ ಹೆಸರಾಗಿರುವ ನಾಯಿಗಳು ನಗರದ ಬಡಾವಣೆಯೊಂದರಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದಿವೆ. ಇದರಿಂದ ಸ್ಥಳೀಯರು ನಿರಾತಂಕವಾಗಿ ಓಡಾಡುವುದು ದುಸ್ತರವಾಗಿದೆ. ಅದರಲ್ಲಿಯೂ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ.
ಹೌದು. ಇದು ನಗರದ ಶ್ರೀರಾಂಪುರ ಎರಡನೇ ಹಂತದ ಎಸ್ಬಿಎಂ ಕಾಲೋನಿ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಜನರ ಪರಿಸ್ಥಿತಿ. ರಸ್ತೆಗಳಲ್ಲಿ ಓಡಾಡುವ ಜನರ ಮೇಲೆ ಎರಗುವ ಬೀದಿ ನಾಯಿಗಳು ಭಯ ಹುಟ್ಟಿಸುತ್ತಿವೆ. ಈ ಬೀದಿ ನಾಯಿಗಳಿಂದಾಗಿ ಮಹಿಳೆಯರು, ಮಕ್ಕಳು ನಿರಾತಂಕ ವಾಗಿ ಮನೆಯಿಂದ ಹೊರಗೆ ಬರುವುದಕ್ಕೆ ಹೆದರುವಂತಾಗಿದೆ.
ಅಂಗಡಿಗಳು, ಮೆಡಿಕಲ್ ಶಾಪ್ಗಳು ಇತರೆ ಡೆಗೆ ತೆರಳುವ ಸಾರ್ವಜನಿಕರ ಮೇಲೆ ಬಿ ದಿ ನಾಯಿ ಗಳು ದಾಳಿ ಮಾಡುತ್ತಿವೆ. ಇದು ಸ್ಥಳೀಯರನ್ನು ತೀವ್ರ ತೊಂದ ರೆಗೆ ದೂಡಿದೆ. ಅದರಲ್ಲೂ ಮಹಿಳೆಯರು, ಮಕ್ಕಳು ಬೀದಿ ನಾಯಿಗಳ ಹಾವಳಿಯಿಂದಾಗಿ ಮನೆಯಿಂದ ಹೊರಗೆ ಬರಲು ಅಂಜುತ್ತಿದ್ದಾರೆ.
ನಾಯಿಗಳು ಕಚ್ಚುವುದರಿಂದ ರೇಬಿಸ್ ಕಾಯಿಲೆ ಬರುತ್ತದೆ. ಆದ್ದರಿಂದ, ನಮ್ಮ ಮಕ್ಕಳನ್ನು ಹೊರಗೆ ಕಳುಹಿಸುವುದಕ್ಕೆ ತುಂಬಾ ಹೆದರಿಕೆ ಆಗುತ್ತದೆ ಎನ್ನುತ್ತಾರೆ ನಂಜುಂಡಸ್ವಾಮಿ ಮತ್ತಿತರರು. ಈ ಬಡಾವಣೆಯಲ್ಲಿ ಮನೆಗಳಿಗೆ ದಿನಪತ್ರಿಕೆ ಹಾಕುವವರು, ದಾರಿಹೋಕರು, ಆಡುವ ಮಕ್ಕಳನ್ನೂ ಬಿಡದೇ ನಾಯಿಗಳು ಕಚ್ಚಿ ಗಾಯಗೊಳಿಸಿರುವ ಪ್ರಕರಣಗಳೂ ಉಂಟು.
ಈ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವಂತೆ ನಗರಪಾಲಿಕೆ ಅಧಿಕಾರಿಗಳನ್ನು ಎಸ್ಬಿಎಂ ಕಾಲೋನಿಯ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಅನೇಕ ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಸ್ಬಿಎಂ ಕಾಲೋನಿ ಬ್ಲಾಕ್ ನಂಬರ್ ೭, ೮ ಮತ್ತು ೯ರಲ್ಲಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಮನೆ ಮನೆಗೆ ದಿನಪತ್ರಿಕೆ ಹಂಚುವ ಹುಡುಗರು ಸೈಕಲ್ನಲ್ಲಿ ಹೋಗುವಾಗಲೇ ನಾಯಿಗಳು ಓಡಿಸಿಕೊಂಡು ಹೋಗಿ ಕಚ್ಚಿದ್ದು, ಇದರಿಂದ ಹಲವು ಹುಡುಗರು ಹೆದರಿ ಕೆಳಗೆ ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ. ನಾಯಿಗಳ ದಾಳಿಯಿಂದಾಗಿ ಪತ್ರಿಕೆ, ಹಾಲು ವಿತರಕರು ಬಡಾವಣೆಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವಾರ ವ್ಯಕ್ತಿಯೊಬ್ಬರಿಗೆ ಕಚ್ಚಿದ್ದ ನಾಯಿಯನ್ನು ನಗರಪಾಲಿಕೆಯ ಸಿಬ್ಬಂದಿ ಹಿಡಿದಿದ್ದು, ರೇಬಿಸ್ ಲಸಿಕೆ ಹಾಕಲು ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ನಾಯಿ ಸತ್ತು ಹೋಗಿತ್ತು. ಈ ನಾಯಿಯಿಂದ ಕಚ್ಚಿಸಿಕೊಂಡ ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾಗಾಗಿ, ಎಸ್ಬಿಎಂ ಕಾಲೋನಿ ನಾಯಿಗಳಿಗೆ ರೇಬಿಸ್ ವ್ಯಾಕ್ಸಿನ್ ಕೊಡಿಸುವಂತೆ ಪ್ರಾಣಿ ದಯಾ ಸಂಘ, ಇತರೆ ಪ್ರಾಣಿ ಪ್ರಿಯರ ಗಮನಕ್ಕೂ ತಂದಾಗ ಈ ಸಮಸ್ಯೆಗೆ ಪರಿಹಾರ ನೀಡದೇ ದೂರು ಹೇಳಿದವರಿಗೆ ಸಾಂತ್ವನದ ಮಾತುಗಳನ್ನು ಹೇಳಿ ಹೋಗುತ್ತಿದ್ದಾರೆಯೇ ಹೊರತು ಯಾರೂ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ನೊಂದವರು ಹೇಳುತ್ತಾರೆ.
” ಬೀದಿ ನಾಯಿಗಳ ದಾಳಿ ಸ್ಥಳಕ್ಕೆ ಮಹಾನಗರ ಪಾಲಿಕೆಯ ವತಿಯಿಂದ ಭೇಟಿ ನೀಡಿ ಪರಿಶೀಲಿಸಲಾಗಿದೆ. ೬ ನಾಯಿಗಳು ಕಂಡುಬಂದಿವೆ. ಅವುಗಳಿಗೆ ರೇಬಿಸ್ ವ್ಯಾಕ್ಸಿನ್ ನೀಡಲಾಗಿದೆ. ರಾತ್ರಿ ವೇಳೆ ಅಽಕ ಸಂಖ್ಯೆಯಲ್ಲಿ ಬೀದಿ ನಾಯಿಗಳು ಬರುತ್ತಿವೆ ಎಂಬುದಾಗಿ ನಾಗರಿಕರು ದೂರು ನೀಡಿದ್ದಾರೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
-ಕೆ.ಎಸ್.ಮೃತ್ಯುಂಜಯ, ಪರಿಸರ ಇಂಜಿನಿಯರ್, ಮಹಾನಗರ ಪಾಲಿಕೆ, ಮೈಸೂರು
” ಮೈಸೂರು ನಗರದ ಶ್ರೀರಾಂಪುರ ಎರಡನೇ ಹಂತದ ಎಸ್ಬಿಎಂ ಕಾಲೋನಿ ಸುತ್ತ- ಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರ ಪಾಲಿಕೆಯವರು ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.”
-ಸುರೇಶ್, ಶ್ರೀರಾಂಪುರ, ಎಸ್ಬಿಎಂ ಕಾಲೋನಿ,
” ಮೈಸೂರು ಪ್ರತಿದಿನ ಸಂಜೆ ಐದಾರು ಗಂಟೆಯಾದರೆ ಸಾಕು. ನಾಯಿಗಳು ಗುಂಪು-ಗುಂಪಾಗಿ ಸಂಚರಿಸುತ್ತಿರುತ್ತವೆ. ಕತ್ತಲಾದ ಮೇಲಂತೂ ಜನರು ಓಡಾಡುವುದೇ ದುಸ್ತರವಾಗಿದೆ. ನಾಯಿಗಳನ್ನು ನಿಯಂತ್ರಿಸಿ, ಸಾರ್ವಜನಿಕರ ನೆಮ್ಮದಿಗೆ ಅನುವು ಮಾಡಿಕೊಡಬೇಕು.”
-ಎಂ.ಆನಂದ್, ಶ್ರೀರಾಂಪುರ, ಎಸ್ಬಿಎಂ ಕಾಲೋನಿ, ಮೈಸೂರು
” ಬೀದಿ ನಾಯಿಗಳ ದಾಳಿಗೆ ಜನರು ಕಂಗಾಲಾಗಿ ದ್ದಾರೆ. ಮಕ್ಕಳು, ಮಹಿಳೆಯರು ಅಂಗಡಿ ಮತ್ತಿತರ ಸ್ಥಳಗಳಿಗೆ ತೆರಳಲು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ನಾಯಿಗಳನ್ನು ನಿಯಂತ್ರಿಸುವ ಕೆಲಸ ತುರ್ತಾಗಿ ಆಗಬೇಕಿದೆ.”
-ಎಸ್.ನಾಗರಾಜು, ಶ್ರೀರಾಂಪುರ, ಎಸ್ಬಿಎಂ ಕಾಲೋನಿ,
” ಮೈಸೂರು ರಸ್ತೆ ಬದಿಯ ತ್ಯಾಜ್ಯ, ಹೋಟೆಲ್ಗಳ ತ್ಯಾಜ್ಯ ತಿನ್ನಲು ಆಗಮಿಸುವ ಬೀದಿ ನಾಯಿಗಳು ರಸ್ತೆ ಮೇಲೆ ಓಡಾಡುವ ಸಾರ್ವಜನಿಕರ ಮೇಲೆ ಎರಗುತ್ತಿವೆ. ಇದರಿಂದಾಗಿ ಜನರು ಭೀತಿಗೊಳಗಾಗಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು.”
-ಎಸ್.ಚಂದನ್, ಶ್ರೀರಾಂಪುರ, ಎಸ್ಬಿಎಂ ಕಾಲೋನಿ, ಮೈಸೂರು




