‘ಆಂದೋಲನ’ ದಿನಪತ್ರಿಕೆ ವರದಿಗಾರ ಸಿಂಧುವಳ್ಳಿ ಸುಧೀರ್ ರಚಿಸಿದ ಪುಸ್ತಕ
ಮೈಸೂರು: ಸಿದ್ದರಾಮಯ್ಯನವರ ರಾಜಕೀಯ ಜೀವಮಾನ ಸಾಧನೆ ಕುರಿತು ‘ಆಂದೋಲನ’ ದಿನಪತ್ರಿಕೆ ವರದಿಗಾರ ಸಿಂಧುವಳ್ಳಿ ಸುಧೀರ್ ಅವರು ರಚಿಸಿರುವ ‘ಭಾಗ್ಯವಿಧಾತ’ ಕೃತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಲೋಕಾರ್ಪಣೆ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೃತಿ ಬಿಡುಗಡೆ ಮಾಡಿ,ನಂತರ ಮಾತನಾಡಿದ ಖಾದರ್ ಅವರು, ಜನರು ಸ್ವಾಭಿಮಾನದಿಂದ ಬದುಕಲು ಏನೆಲ್ಲಾ ಅವಶ್ಯ ಇದೆಯೋ, ಅದೆಲ್ಲವುಗಳ ಜಾರಿಗೆ ಸೂಕ್ತವಾದ ಕಾರ್ಯಕ್ರಮಗಳನ್ನು ನೀಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಹೇಳಿದರು.
ಬಡ ಮಕ್ಕಳಿಗೂ ಪೌಷ್ಟಿಕಾಂಶ ದೊರಕಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಕ್ಷೀರಭಾಗ್ಯ ಯೋಜನೆ ಸಿದ್ದರಾಮಯ್ಯ ಮಾನವೀಯ ಕಾರ್ಯಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಅವರು ಕುಗ್ರಾಮದಲ್ಲಿ ಹುಟ್ಟಿದರೂ, ತಮ್ಮ ಪ್ರಾಮಾಣಿಕತೆ, ಕಾಳಜಿ, ಸಾಮಾಜಿಕ ಬದ್ಧತೆ ಹಾಗೂ ಛಲದಿಂದ ಹಂತಹಂತವಾಗಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಶಿಕ್ಷಣ, ಸಂವಿಧಾನದ ಮೂಲಕ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸಾಽಸಿ ತೋರಿಸಿದ್ದಾರೆ ಎಂದರು. ಸಂವಿಧಾನದಲ್ಲಿ ಲಭ್ಯವಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ಯಾರಾದರೂ ಉತ್ತಮ ಸಾಧನೆ ಮಾಡ ಬಹುದು ಎಂಬುದಕ್ಕೆ ಸಿ ದ್ದರಾಮಯ್ಯ ಅವರೇ ಸಾಕ್ಷಿಯಾಗಿದ್ದಾರೆ ಎಂದು ಖಾದರ್ ಹೇಳಿದರು.
ಆಹಾರ ಭದ್ರತಾ ಕಾಯ್ದೆ ರಾಷ್ಟ್ರದಲ್ಲಿ ಜಾರಿಗೆ ಬರುವ ಮೊದಲೇ ನಮ್ಮಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ತಂದರು. ಆ ಮೂಲಕ ಬಡಜನತೆಯ ಸ್ವಾಭಿಮಾನದ ಬದುಕಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಕೃತಿ ಕುರಿತು ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅವರು, ಸಿದ್ದರಾಮಯ್ಯ ಅವರ ಬಹು ದೊಡ್ಡ ವ್ಯಕ್ತಿತ್ವವನ್ನು ಇತರರಿಗೂ ತಿಳಿಸಬೇಕಾದ ಅಗತ್ಯವಿದೆ. ಈ ರೀತಿ ಮಾಡಿದಲ್ಲಿ ಯುವ ಪೀಳಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಈ ಕೆಲಸವನ್ನು ಸಿಂಧುವಳ್ಳಿ ಸುಧೀರ್ ಅವರ ‘ಭಾಗ್ಯವಿಧಾತ’ ಪುಸ್ತಕ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದರು. ಸಿದ್ಧರಾಮಯ್ಯ ಅವರು ಎದುರಿಸಿದ ಸಂಕಷ್ಟ, ಏಳು ಬೀಳು, ರಾಜಕಾರಣದಲ್ಲಿ ಎದುರಿಸಿದ ಸವಾಲುಗಳನ್ನು ಈ ಕೃತಿಯಲ್ಲಿ ಅತ್ಯಂತ ಸೊಗಸಾಗಿ ನಿರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್ ಹಾಗೂ ಕೃತಿ ಕರ್ತೃ ಸಿಂಧುವಳ್ಳಿ ಸುಧೀರ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಹಾಜರಿದ್ದರು.
” ಅತ್ಯಂತ ಬಡ ಕುಟುಂಬದಿಂದ ಬಂದಿರುವ ಸುಧೀರ್ ಅವರು ತಮ್ಮ ತಾಯಿ ಕ್ಯಾನ್ಸರ್ ಪೀಡಿತರಾಗಿ ಹಾಸಿಗೆ ಹಿಡಿದು ಮಲಗಿದ್ದಾಗ ಅವರನ್ನು ಉಪಚರಿಸುವ ವೇಳೆ ಸಿಕ್ಕ ಬಿಡುವಿನಲ್ಲಿ ಈ ಕೃತಿ ರಚಿಸಿದ್ದಾರೆ ಎಂಬುದು ಗಮನಾರ್ಹ. ಸಿದ್ದರಾಮಯ್ಯ ಅವರು ಶೋಷಿತ ಸಮುದಾಯದ ಕಷ್ಟ ಸಂಕೋಲೆಗಳನ್ನು ಗಮನಿಸಿ ಕೊಡುಗೆಗಳನ್ನು ನೀಡಿದ ಪರಿಯ ಬಗ್ಗೆ ಕೃತಿ ರಚನೆ ಮಾಡುವ ಸಾಹಸಕ್ಕೆ ಕೈ ಹಾಕಿದ ರೀತಿ ಶ್ಲಾಘನೀಯ.”
-ಡಾ.ಬಿ.ಜೆ.ವಿಜಯಕುಮಾರ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್.