Mysore
34
broken clouds

Social Media

ಗುರುವಾರ, 14 ಮೇ 2026
Light
Dark

ಸಿದ್ದಾಪುರ ಓರ್ಫನೇಜ್‌ಗೆ ಸುವರ್ಣ ಮಹೋತ್ಸವ ಸಂಭ್ರಮ

ಕೃಷ್ಣ ಸಿದ್ದಾಪುರ

ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಸ್ಥಾಪನೆಯಾದ ಸಂಸ್ಥೆ; ಇಂದು,ನಾಳೆ ಅದ್ಧೂರಿ ಕಾರ್ಯಕ್ರಮ

ಸಿದ್ದಾಪುರ: ಕೊಡಗು ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿರ್ಗತಿಕ ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಭೌತಿಕ ಕ್ಷೇತ್ರದಲ್ಲಿ ಅಗತ್ಯ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಸ್ಥಾಪನೆಯಾದ ಸಿದ್ದಾಪುರಂ ಮುಸ್ಲಿಂ ಓರ್ಫನೇಜ್ (ಎಸ್‌ಎಂಓ) ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಅದ್ಧೂರಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

೧೯೭೫ರಲ್ಲಿ ಸಿದ್ದಾಪುರಂ ಮುಸ್ಲಿಂ ಓರ್ಫನೇಜ್ ಸ್ಥಾಪನೆಯಾಯಿತು. ಯುವ ಘಟಕವಾದ ವೈಎಂಎ ನೇತೃತ್ವದಲ್ಲಿ ೬ ಮಕ್ಕಳೊಂದಿಗೆ ಪ್ರಾರಂಭವಾದ ಸಂಸ್ಥೆ, ನಂತರ ಮಹಲ್ ಸಮಿತಿ ಎಸ್ ಎಂಎ ನೇತೃತ್ವದಲ್ಲಿ ಸಾಗಿಬಂದಿತು. ೧೯೭೯ರಲ್ಲಿ ಅನಾಥಾಲಯದ ಹೊಸ ಕಟ್ಟಡವನ್ನು ನಿರ್ಮಿಸಿ ಸಾಕಷ್ಟು ಮಕ್ಕಳಿಗೆ ಕಲಿಕಾ ಸೌಲಭ್ಯಗಳನ್ನು ಒದಗಿಸಲಾಯಿತು. ಅಂದಿನ ಅಧ್ಯಕ್ಷರಾಗಿದ್ದ ಅಬ್ದುಲ್ ಮಜೀದ್ ಹಾಜಿಯವರು ಸಂಸ್ಥೆಯ ನೇತೃತ್ವ ವಹಿಸಿದ್ದರು.

ಸಂಸ್ಥೆಯ ಪ್ರಥಮ ಕಟ್ಟಡವನ್ನು ಕೇರಳ ಶಿಕ್ಷಣ ಸಚಿವರಾಗಿದ್ದ ಸಿ.ಎಚ್.ಮಹಮ್ಮದ್ ಕೋಯ ಹಾಗೂ ಕರ್ನಾಟಕ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಗುಂಡೂರಾವ್ ಇಬ್ಬರೂ ಸೇರಿ ಉದ್ಘಾಟಿಸಿದ್ದರು. ಮರ್ಹೂಮ್ ಉಸ್ಮಾನ್ ಹಾಜಿ ಅವರು ಸಂಸ್ಥೆಯ ಪ್ರಗತಿಗಾಗಿ ೩೫ ವರ್ಷಗಳ ಕಾಲ ಶ್ರಮಿಸಿದ್ದರು. ಅವರ ದೀರ್ಘ ಕಾಲದ್ತ ನೇತೃತ್ವವು ಸಂಸ್ಥೆಯ ಪ್ರಗತಿಗೆ ಪೂರಕವಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿದ್ದಾರೆ.

ಪ್ರಸ್ತುತ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಎಲ್ಲ ರೀತಿಯ ಸೌಲಭ್ಯಗಳು, ಅಧ್ಯಯನದ ಪ್ರಗತಿಗೆ ಅಗತ್ಯ ಚಟುವಟಿಕೆಗಳು, ಆಧ್ಯಾತ್ಮಿಕ ಮತ್ತು ಭೌತಿಕ ಬೆಳವಣಿಗೆಗೆ ಅಗತ್ಯವಾದ ವ್ಯವಸ್ಥೆ ಯೊಂದಿಗೆ ಸಂಸ್ಥೆಯು ಮುಂದುವರಿಯುತ್ತಿದೆ. ೫೦ ವರ್ಷಗಳನ್ನು ಪೂರೈಸಿರುವ ಸಂಸ್ಥೆಯು ಮಕ್ಕಳ ಅಧ್ಯಯನದ ಪ್ರಗತಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಎಸ್‌ಎಂಒ ಸುವರ್ಣ ಮಹೋತ್ಸವದ ಅಂಗವಾಗಿ ಮೇ ೧೩ ಮತ್ತು ೧೪ರಂದು ವಿವಿಧ ಕಾರ್ಯಕ್ರಮಗಳು ಹಾಗೂ ಮಹಾ ಸಮ್ಮೇಳನ ಸಿದ್ದಾಪುರದಲ್ಲಿ ನಡೆಯಲಿದೆ. ಮೇ ೧೩ ರಂದು ಅಪರಾಹ್ನ ೩.೩೦ ಕ್ಕೆ ಮಖಾಂ ಝಿಯಾರತ್ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಬಳಿಕ ಮರ್ಹೂಮ್ ಮಜೀದ್ ಹಾಜಿ ನಗರದಲ್ಲಿ ಮ್ಯಾನೇಜ್‌ಮೆಂಟ್ ಸಮ್ಮೇಳನ ಹಾಗೂ ರಾತ್ರಿ ೭ ಗಂಟೆಗೆ ಮರ್ಹೂಮ್ ಉಸ್ಮಾನ್ ಹಾಜಿ ವೇದಿಕೆಯಲ್ಲಿ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ನವಾಸ್ ಮನ್ನಾನಿ ಮುಖ್ಯ ಭಾಷಣ ಮಾಡಲಿದ್ದಾರೆ. ಮೇ ೧೪ರಂದು ಬೆಳಿಗ್ಗೆ ೧೦ ಗಂಟೆಗೆ ಮಹಿಳಾ ಸಮಾವೇಶ ಹಾಗೂ ಸಂಜೆ ೪ ಗಂಟೆಗೆ ಎಸ್ ಎಂಒ ಪೂರ್ವ ವಿದ್ಯಾರ್ಥಿಗಳ ಸಮ್ಮೇಳನ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಮಾರೋಪ ಸಮ್ಮೇಳನ ನಡೆಯಲಿದ್ದು, ಕೊಡಗು ನಾಇಬ್ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ ಪ್ರಾರ್ಥನೆ ನೆರವೇರಿಸಲಿದ್ದಾರೆ.

ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಮುಸ್ತ- ಹಾಜಿ ಅಧ್ಯಕ್ಷತೆ ವಹಿಸುವರು.ಎಸ್‌ಎಂಒ ನಡೆದು ಬಂದ ಹಾದಿ ಎಂಬ ವಿಷಯದಲ್ಲಿ ಅಬ್ದುಲ್ ರವೂಫ್ ಹಾಜಿ ವಿಷಯ ಮಂಡನೆ ಮಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಗಳ್ ಉದ್ಘಾಟನೆ ಮಾಡಲಿದ್ದಾರೆ. ಅನ್ವರ್ ಮುಹಿಯುದ್ದೀನ್ ಹುದವಿ ಮುಖ್ಯ ಭಾಷಣ ಮಾಡುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಸಭೆ ಅಧ್ಯಕ್ಷರಾದ ಯು.ಟಿ ಖಾದರ್, ಶಾಸಕರಾದ ಎ.ಎಸ್ ಪೊನ್ನಣ್ಣ, ಡಾ.ಮಂಥರ್ ಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

” ೧೯೭೯ರಲ್ಲಿ ಅನಾಥಾಲಯದ ಹೊಸ ಕಟ್ಟಡವನ್ನು ಉದ್ಘಾಟಿಸಲಾಗಿತ್ತು. ಅಂದಿನಿಂದಇಂದಿನವರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ವಸತಿ, ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿದ್ದಾರೆ. ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಬುಧವಾರ ಹಾಗೂ ಗುರುವಾರ ಸುವರ್ಣ ಸಂಭ್ರಮ ಕಾರ್ಯಕ್ರಮವಿದ್ದು, ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು.”

-ಎಂ.ಎಂ. ಶೌಕತ್ ಅಲಿ, ನಿರ್ದೇಶಕರು

” ಪೋಷಕರನ್ನು ಕಳೆದುಕೊಂಡು ಸಂಕಷ್ಟದಲ್ಲಿ ಇರುವ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ೫೦ ವರ್ಷಗಳಿಂದ ಸಂಸ್ಥೆಯು ಉಚಿತ ಶಿಕ್ಷಣ ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಇವರೆಲ್ಲರ ಸಹಕಾರದಿಂದ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಪ್ರಸಕ್ತ ವರ್ಷ ಸುಮಾರು ೬೦ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ನೀಡುತ್ತಿದೆ. ೩೮ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದು ,ಶಿಕ್ಷಣ ಪಡೆಯುತ್ತಿದ್ದಾರೆ.”

-ಅಸ್ಗರ್, ಕಾರ್ಯದರ್ಶಿ, ಎಸ್‌ಕೆಎಸ್‌ಎಸ್‌ಎಫ್, ಸಿದ್ದಾಪುರ.

 

 

Tags:
error: Content is protected !!