ಪಂಚ ಗ್ಯಾರಂಟಿಗಳ ಪೈಕಿ ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’ ಯೋಜನೆಗಳು ದುರುಪಯೋಗ ಆಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವುಗಳ ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ಬಡವರನ್ನು ಆರ್ಥಿಕವಾಗಿ ಉತ್ತೇಜಿಸಲು ರೂಪಿಸಲಾದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕೇ ವಿನಾ ಅನರ್ಹರು ದುರುಪಯೋಗಪಡಿಸಿಕೊಳ್ಳುವುದು ಸರ್ವಥಾ ಸಲ್ಲದು. ಹಾಗಾಗಿ ಸರ್ಕಾರ ಹೊಸದಾಗಿ ಅರ್ಜಿ ಕರೆಯುವ ಮತ್ತು ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡುವಂಥ ಉಪಕ್ರಮಕ್ಕೆ ಮುಂದಾಗಿರುವುದು ಸಮಂಜಸವಾಗಿದೆ.
ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ರೂಪಿಸಲು ನೂತನ ಮುಖ್ಯಮಂತ್ರಿಗಳು ಪಣತೊಟ್ಟಿರುವುದು ನಿಜಕ್ಕೂ ಸಂತಸದ ಹಾಗೂ ಸ್ವಾಗತಾರ್ಹ ಸಂಗತಿ. ಹಳ್ಳಿಯಿಂದ ವಿಧಾನಸೌಧದವರೆಗೆ ಪಾರ್ಥೇನಿಯಂ ಕಳೆಯಂತೆ ಹಬ್ಬಿಕೊಂಡಿರುವ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುವ ಅವಶ್ಯಕತೆ ಇದೆ. ಅಭಿವೃದ್ಧಿಗೆ ಮಾರಕವಾಗಿರುವ ಈ ಭ್ರಷ್ಟಾಚಾರ ಕಳೆಯನ್ನು ನಿರ್ಮೂಲನೆ ಮಾಡಿದರೆ ನಾಡು ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು




