Mysore
27
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಓದುಗರ ಪತ್ರ

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ ನಗರಿಯ ಸೌಂದರ್ಯಕ್ಕೆ ಖಾಲಿ ನಿವೇಶನಗಳ ಅಸಮರ್ಪಕ ನಿರ್ವಹಣೆಯು ಕಪ್ಪುಚುಕ್ಕೆಯಂತಾಗಿದೆ. ನಗರದಾದ್ಯಂತ ಇರುವ ಅನೇಕ ಖಾಲಿ ನಿವೇಶನಗಳಲ್ಲಿ ‘ಇದು ನಗರಪಾಲಿಕೆ ಆಸ್ತಿ’, ‘ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿ’ ಅಥವಾ ‘ಖಾಸಗಿ ವ್ಯಕ್ತಿಗಳ ಆಸ್ತಿ’ ಎಂದು ಬೋರ್ಡ್ ಹಾಕಿ ಸುಮ್ಮನೆ ಬಿಡಲಾಗಿದೆ.

ವರ್ಷಾನುಗಟ್ಟಲೆ ಈ ಜಗಗಳು ಖಾಲಿಯೇ ಬಿದ್ದಿರುವುದರಿಂದ ಅಲ್ಲಿ ಕಳೆಗಿಡಗಳು ಬೆಳೆದಿವೆ. ಇದು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟು, ಅಕ್ಕಪಕ್ಕದ ನಿವಾಸಿಗಳ ಹಾಗೂ ರಸ್ತೆಬದಿ ಓಡಾಡುವವರ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ಇನ್ನೊಂದು ಪ್ರಮುಖವಾದ ಸಮಸ್ಯೆಯನ್ನೂ ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ಅದೆಂದರೆ ಇಂದಿನ ದಿನಗಳಲ್ಲಿ ಬಹುತೇಕರ ಮನೆಗಳಲ್ಲಿ ಕಾರು ಇರುವುದು ಸರ್ವೆ ಸಾಮಾನ್ಯ.

ಮನೆಯಲ್ಲಿ ವಾಹನ ನಿಲುಗಡೆಗೆ ಜಗವಿಲ್ಲದೆ ಅನಿವಾರ್ಯವಾಗಿ ರಸ್ತೆಗಳ ಮೇಲೆಯೇ ಕಾರುಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಗಳು ಕಿರಿದಾಗಿ, ಇತರೆ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡುವುದು ಕಷ್ಟವಾಗಿದೆ. ಈ ಗಂಭೀರ ಸಮಸ್ಯೆಗೆ ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಕಾರ್ಯರೂಪಕ್ಕೆ ತರಬೇಕು.

ನಿವೇಶನಗಳಲ್ಲಿ ಮನೆ ನಿರ್ಮಿಸುವವರೆಗೆ ಅಥವಾ ಅಧಿಕೃತ ಕಾಮಗಾರಿ ಆರಂಭಿಸುವವರೆಗೆ, ಸಂಬಂಧಪಟ್ಟ ಮಾಲೀಕರು ಅಥವಾ ಪ್ರಾಽಕಾರಗಳು ತಮ್ಮ ಖಾಲಿ ನಿವೇಶನಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಕಳೆ ಗಿಡಗಳನ್ನು ತೆರವುಗೊಳಿಸಬೇಕು. ಇದರೊಂದಿಗೆ, ಪ್ರತಿ ನಿವೇಶನಕ್ಕೂ ಕಾಂಪೌಂಡ್ ನಿರ್ಮಿಸಿ, ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಸ್ವಚ್ಛಗೊಳಿಸಿ, ಸುರಕ್ಷಿತಗೊಳಿಸಿದ ಈ ನಿವೇಶನಗಳನ್ನು ಹತ್ತಿರದ ನಿವಾಸಿಗಳ ಕಾರು ಹಾಗೂ ಇತರೆ ವಾಹನಗಳ ನಿಲುಗಡೆಗೆ ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅವಕಾಶ ನೀಡಬೇಕು. ನಿವೇಶನದ ಅಳತೆಗೆ ತಕ್ಕಂತೆ ಎಷ್ಟು ವಾಹನಗಳನ್ನು ನಿಲ್ಲಿಸಬಹುದು ಎಂಬುದನ್ನು ನಿರ್ಧರಿಸಿ, ಕಾರು ಮಾಲೀಕರಿಂದ ತಿಂಗಳ ಬಾಡಿಗೆಯನ್ನು ಪಡೆಯಬಹುದು. ಈ ಬಗ್ಗೆ ಸ್ಥಳೀಯ ಆಡಳಿತ ಯೋಚಿಸ ಬೇಕಾಗಿದೆ.

– ಬಿ. ಗಣೇಶ, ಮೈಸೂರು

Tags:
error: Content is protected !!