ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ ಡಿಎಲ್)(ಮೈಸೂರು ಸ್ಯಾಂಡಲ್ ಸೋಪು) ೨೦೨೪-೨೫ನೇ ಸಾಲಿನಲ್ಲಿ ಗಳಿಸಿದ ೪೫೧ ಕೋಟಿ ರೂ. ಲಾಭದಲ್ಲಿ ಶೇ.೩೦ರಷ್ಟು ಲಾಭಾಂಶದ ಬಾಬ್ತು ೧೩೫ ಕೋಟಿ ರೂ.ಗಳ ಚೆಕ್ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿರುವುದು ಶ್ಲಾಘನೀಯ.
ವರ್ಷದಿಂದ ವರ್ಷಕ್ಕೆ ಕೆಎಸ್ ಡಿಎಲ್ನ ಲಾಭ ಗಳಿಕೆ ಹೆಚ್ಚುತ್ತಾ ಸಾಗಿರುವುದು ಉತ್ತಮ ಬೆಳವಣಿಗೆ. ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಮೈಸೂರು ಸಿಲ್ಕ್ಸ್ , ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಲ್ಯಾಂಪ್ಸ್, ಮೈಸೂರು ಪೇಪರ್ ಮಿಲ್ಸ್ನ ಉತ್ಪನ್ನಗಳನ್ನು ಕಡ್ಡಾಯವಾಗಿ ಉಳಿದ ಸರಕಾರಿ ಸಂಸ್ಥೆಗಳು ಖರೀದಿಸಬೇಕು ಎಂದು ಆದೇಶ ಹೊರಡಿಸುವ ಮೂಲಕ ಲಾಭದಾಯಕವಾಗಿಸಲು ನಿಯಮವನ್ನು ರೂಪಿಸಿದ್ದರು. ಸಾರ್ವಜನಿಕ ರಂಗದ ಈ ಉದ್ದಿಮೆಗಳು ಲಾಭದಲ್ಲೇ ಇದ್ದವು. ನಂತರ ಬಂದ ಜನಪ್ರತಿನಿಧಿಗಳ ಸರ್ಕಾರಗಳು ಈ ನಿಯಮವನ್ನು ಗಾಳಿಗೆ ತೂರಿ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಟ್ಟು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ನಿರ್ಲಕ್ಷಿಸಿದ್ದರಿಂದ ಮೈಸೂರು ಲ್ಯಾಂಪ್ಸ್, ಮೈಸೂರು ಪೇಪರ್ ಮಿಲ್ಸ್ ಮುಚ್ಚಿ ಹೋಗಿವೆ. ಮಹಾರಾಜರ ಮಹಾತ್ವಾಕಾಂಕ್ಷೆಯ ಉದ್ದಿಮೆಗಳಾದ ಮೈಸೂರು ಸ್ಯಾಂಡಲ್ (ಕೆಎಸ್ಡಿಎಲ್), ಮೈಸೂರು ಸಿಲ್ಕ್ಸ್ ಗಳನ್ನು ಸರ್ಕಾರ ಉಳಿಸಲು ಕ್ರಮ ಕೈಗೊಳ್ಳುವುದು ಅಗತ್ಯ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





