ಮೈಸೂರು ದಸರಾ ಮಹೋತ್ಸವ ಆರಂಭವಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸಾವಿರಾರು ಜನರು ಪ್ರತಿನಿತ್ಯ ದಸರಾ ವೀಕ್ಷಣೆಗೆ ಮೈಸೂರಿಗೆ ಆಗಮಿಸುತ್ತಾರೆ. ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳಲು ಆಟೋಗಳನ್ನೇ ಅವಲಂಬಿಸಿ ದ್ದಾರೆ. ಆದರೆ ಇದನ್ನೇ ಬಂಡವಾಳವಾಗಿಸಿ ಕೊಂಡಿರುವ ಕೆಲವು ಆಟೋ ಚಾಲಕರು ಸಮೀಪದ ಸ್ಥಳಗಳಿಗೂ ೨೦೦ ರೂ. ಬಾಡಿಗೆ ಕೇಳುತ್ತಾರೆ. ಹೊರ ಊರಿನಿಂದ ಬಂದವರು ಅನಿವಾರ್ಯವಾಗಿ ಕೇಳಿದಷ್ಟು ಬಾಡಿಗೆ ನೀಡಿ ಸಂಚರಿಸುವಂತಾಗಿದೆ.
ಇದನ್ನೂ ಓದಿ :-ಕನ್ನಡದ ನೆಲದ ಕಾಡುವ ಕತೆ ಹೇಳುವ ‘ಕಹಾನಿ’
ಇನ್ನು ದಸರಾ ನಿಮಿತ್ತ ಪಂಜಿನ ಕವಾಯತು ನಡೆಯುವ ಬನ್ನಿಮಂಟಪದಲ್ಲಿರುವ ಕ್ರೀಡಾಂಗಣದಿಂದ ಕಾರ್ಯಕ್ರಮ ಮುಗಿದ ನಂತರ ಆಟೋ ಚಾಲಕರು ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಾರೆ. ಜನರು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಪ್ರಯಾಣಿಸಬೇಕಾಗಿದೆ. ಪೊಲೀಸ್ ಹಾಗೂ ಸಾರಿಗೆ ಇಲಾಖೆಯವರು ಆಟೋದವರಿಗೆ ಕಡ್ಡಾಯವಾಗಿ ಮೀಟರ್ ಹಾಕಿ ಅದರ ಪ್ರಕಾರವೇ ಬಾಡಿಗೆ ವಸೂಲಿ ಮಾಡಲು ಸೂಚನೆ ನೀಡಬೇಕು ಹಾಗೂ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ಸಂಗೀತಾ, ಮೈಸೂರು





