ಪ್ರತಿ ವರ್ಷ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ರಾಜ್ಯದ ಹಲವು ಶಾಲಾ- ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಸಸಿಗಳನ್ನು ನೆಟ್ಟು ನೀರೆರೆಯುತ್ತಾರೆ. ಪರಿಸರ ದಿನದಂದು ಸಸಿಗಳನ್ನು ನೆಟ್ಟು ಅವುಗಳ ಜೊತೆ ಫೋಟೋ, ಸೆಲ್ಛಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಹರಿಯ ಬಿಡುವುದು ಸರಿಯಷ್ಟೆ. ಆದರೆ ಕೇವಲ ಸೆಲ್ಛಿ ಹಾಗೂ ಫೋಟೋಗೋಸ್ಕರ ಸಸಿಗಳನ್ನು ನೆಡುವ, ಪ್ರಚಾರ ಪಡೆಯುವ ಗೀಳು ಹಲವರಲ್ಲಿದೆ. ಕೆಲವರು ಗಿಡ ನೆಟ್ಟು ಮಾರನೆಯ ದಿನವೇ ಅದನ್ನು ಮರೆತು ಬಿಡುತ್ತಾರೆ. ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗಷ್ಟೇ ಸೀಮಿತವಾಗದೆ,ನೆಟ್ಟ ಗಿಡಕ್ಕೆ ಒಂದಷ್ಟು ತಿಂಗಳುಗಳು ನೀರೆರೆದು ಕಾಪಾಡುವ ಜವಾಬ್ದಾರಿಯನ್ನು ನಿರಂತರವಾಗಿ ಮಾಡಿದರೆ ಪರಿಸರ ದಿನದಂದು ಗಿಡ ನೆಡುವುದಕ್ಕೆ ಅರ್ಥವಿರುತ್ತದೆ. ಗಿಡ ನೆಡುವ ಸಂಭ್ರಮದಲ್ಲಿ ಇದ್ದ ಹುಮ್ಮಸ್ಸನ್ನು ಗಿಡಗಳ ಬೆಳವಣಿಗೆಯಲ್ಲೂ ತೋರಿದರೆ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





